ವಿಜಯಸಾಕ್ಷಿ ಸುದ್ದಿ, ರೋಣ : ಲೋಕಸಭಾ ಚುನಾವಣೆ ನಿಮಿತ್ತ ಮತದಾನದ ಮಹತ್ವ ಸಾರುವ ಉದ್ದೇಶದಿಂದ ರೋಣ ತಾಲೂಕ ಪಂಚಾಯತ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ ಅವರ ಮದುವೆ ಸಮಾರಂಭದಲ್ಲಿ ರೋಣ ತಾ.ಪಂ ಕಾರ್ಯನಿರ್ವಾಹಕ ಎಸ್.ಕೆ. ಇನಾಮದಾರ ಅಧ್ಯಕ್ಷತೆಯಲ್ಲಿ ವಿಶಿಷ್ಟ ರೀತಿಯಲ್ಲಿ ಮತದಾನ ಜಾಗೃತಿ ಮಾಡಲಾಯಿತು.
ಗದಗ ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ವೀರಪ್ಪ ಹಾಗೂ ಶಿವಪ್ಪ ಸೂಡಿ ಅವರ ಮಕ್ಕಳಾದ ಪ್ರಕಾಶ ಹಾಗೂ ಪ್ರವೀಣ ಅವರ ಮದುವೆಯಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಧು-ವರರು ತಮ್ಮ ವಿವಾಹಕ್ಕೆ ಬಂದ ಅತಿಥಿಗಳಿಗೆ ಮತದಾನ ಮಾಡುವಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ, ಮತದಾನ ಪ್ರತಿ ಅರ್ಹ ವ್ಯಕ್ತಿಯ ಕರ್ತವ್ಯವಾಗಿದೆ. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು. ಮತದಾನದ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡು ಯೋಗ್ಯ ವ್ಯಕ್ತಿಯನ್ನು ಚುನಾಯಿಸಬೇಕು ಎಂದರು.
ಅರ್ಹ ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತದಾನದ ದಿನ ರಜೆ ಮೇಲೆ ಊರಿಗೆ ತೆರಳದೆ ಮತದಾನ ಮಾಡಬೇಕು ಎಂದು ಮದುವೆಗೆ ಬಂದ ಅಥಿತಿಗಳಿಗೆ ಸಂದೇಶ ನೀಡಿದರು.
ನಾನು ನಮ್ಮ ತಾಲೂಕಿನ ಸ್ವೀಪ್ ಸಮಿತಿ ಅಧ್ಯಕ್ಷನಾಗಿದ್ದು, ತಾಲೂಕಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಮಾಡುತ್ತೇವೆ. ನಮ್ಮ ಟಿಸಿ ಪ್ರವೀಣರ ಆಶಯದಂತೆ ಅವರ ಮದುವೆಯಲ್ಲಿ ಮೂರು ಸಾವಿರ ಜನರ ನಡುವೆ ಮತದಾನ ಜಾಗೃತಿ ಮಾಡಿದ್ದು ಎಲ್ಲಿಲ್ಲದ ಖುಷಿ ತಂದಿದೆ.
-ಎಸ್.ಕೆ. ಇನಾಮದಾರ.
ರೋಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ.