HomeGadag Newsರೂರಲ್‌ ಕಿಂಗ್ಸ್‌ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ನೈಟ್‌ ರೈಡರ್ಸ್‌

ರೂರಲ್‌ ಕಿಂಗ್ಸ್‌ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ನೈಟ್‌ ರೈಡರ್ಸ್‌

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ನಡೆಯುತ್ತಿರುವ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದ್ದು, ನೈಟ್‌ ರೈಡರ್ಸ್‌ ತಂಡವು ತನ್ನ ಎರಡನೇ ಪಂದ್ಯದಲ್ಲೇ ರೂರಲ್‌ ಕಿಂಗ್ಸ್‌ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಗುರುವಾರ ನಡೆದ ಪಂದ್ಯಾವಳಿಯ ನಾಲ್ಕನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರೂರಲ್‌ ಕಿಂಗ್ಸ್‌ ತಂಡ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 85 ರನ್‌ ಗಳಿಸಿತು. ಸೂರಜ್‌ ಮಯೇಕರ್‌ 28, ಪ್ರಕಾಶ ಗುದ್ದಿನ 14 ಹಾಗೂ ನಿಂಗನಗೌಡ ಹನಮಗೌಡ್ರ 13 ರನ್‌ ಗಳಿಸಿದರು. ನೈಟ್‌ ರೈಡರ್ಸ್‌ ಪರ ಮಂಜು ಪತ್ತಾರ 2 ವಿಕೆಟ್‌ ಪಡೆದರೆ, ಅರುಣಕುಮಾರ ಹಿರೇಮಠ, ಸಂಗನಗೌಡ ಖಾನಪ್ಪಗೌಡ್ರ ಹಾಗೂ ಸುರೇಶ ಕಡ್ಲಿಮಟ್ಟಿ ತಲಾ ಒಂದು ವಿಕೆಟ್‌ ಪಡೆದರು.

86 ರನ್‌ಗಳ ಗುರಿ ಬೆನ್ನತ್ತಿದ ನೈಟ್‌ ರೈಡರ್ಸ್‌ ತಂಡ ಮೊದಲ ಓವರ್‌ನಲ್ಲಿ 8 ರನ್‌ ಗಳಿಸಿದ್ದಾಗಲೇ ಒಂದು ವಿಕೆಟ್‌ ಕಳೆದುಕೊಂಡಿತು. ಆದರೆ ನಾಯಕ ಸುರೇಶ ಕಡ್ಲಿಮಟ್ಟಿ ಹಾಗೂ ಅರುಣಕುಮಾರ ಹಿರೇಮಠ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ 73 ರನ್‌ಗಳ ಅಮೋಘ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ನೈಟ್‌ ರೈಡರ್ಸ್‌ ತಂಡ ಒಂದು ಓವರ್‌ ಬಾಕಿ ಇರುವಂತೆಯೇ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ನಾಯಕ ಸುರೇಶ ಕಡ್ಲಿಮಟ್ಟಿ ಕೇವಲ 19 ಎಸೆತಗಳಲ್ಲಿ 41 ರನ್‌ ಸಿಡಿಸಿದರೆ, ಅರುಣಕುಮಾರ ಹಿರೇಮಠ 20 ಎಸೆತಗಳಲ್ಲಿ 33 ರನ್‌ ಗಳಿಸಿ ಮಿಂಚಿದರು. ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸುರೇಶ ಕಡ್ಲಿಮಟ್ಟಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆರ್‌ಸಿಬಿಗೆ ಸೋಲು; ವಿನ್ನರ್ಸ್‌ ಸೆಮಿಫೈನಲ್‌ಗೆ

ಇದಕ್ಕೂ ಮುನ್ನ ನಡೆದ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ವಿನ್ನರ್ಸ್‌ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡ ಆರ್‌ಸಿಬಿ ತಂಡ ಟೂರ್ನಿಯಿಂದ ಹೊರಬಿದ್ದಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ ತಂಡ ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 84 ರನ್‌ ಗಳಿಸಿತು. ವಿನಾಯಕ ಚೌಡಾಪೂರ 24 ಹಾಗೂ ಫಿರೋಜ್‌ ಮೊಮಿನ್‌ 18 ರನ್‌ ಗಳಿಸಿದರು. ವಿನ್ನರ್ಸ್‌ ಪರ ಅಶೋಕ ಹೂಗಾರ 2 ವಿಕೆಟ್‌ ಪಡೆದರೆ, ಈಶ್ವರ ತಿಪ್ಪರಡ್ಡಿ, ಬನೇಶ ಕುಲಕರ್ಣಿ ಹಾಗೂ ಪರಮೇಶ ಲಮಾಣಿ ತಲಾ ಒಂದು ವಿಕೆಟ್‌ ಪಡೆದರು.

85 ರನ್‌ಗಳ ಗುರಿ ಬೆನ್ನತ್ತಿದ ವಿನ್ನರ್ಸ್‌ ತಂಡದ ಆರಂಭಿಕ ಆಟಗಾರರಾದ ಅನಿಲ ತೆಂಬದಮನಿ ಹಾಗೂ ಅನಿಲ ಚಲವಾದಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಅನಿಲ ತೆಂಬದಮನಿ 33 ಹಾಗೂ ಅನಿಲ ಚಲವಾದಿ 31 ರನ್‌ ಗಳಿಸಿ ಅಜೇಯರಾಗುಳಿದು ತಂಡವನ್ನು 8 ವಿಕೆಟ್‌ಗಳ ಭರ್ಜರಿ ಗೆಲುವಿನತ್ತ ಕೊಂಡೊಯ್ದರು. ಆರ್‌ಸಿಬಿ ಪರ ಗೌರೀಶ ಒಂದು ವಿಕೆಟ್‌ ಪಡೆದರು. 33 ರನ್‌ ಗಳಿಸಿ ಅಜೇಯರಾಗಿದ್ದ ಅನಿಲ ತೆಂಬದಮನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆ.22ರಂದು ಸೆಮಿಫೈನಲ್‌, ಆ.23ಕ್ಕೆ ಫೈನಲ್‌

ಆ.22ರಂದು ರೂರಲ್‌ ಕಿಂಗ್ಸ್‌ ಹಾಗೂ ವಿನ್ನರ್ಸ್‌ ತಂಡಗಳ ನಡುವೆ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದೆ. ನಂತರ ನೈಟ್‌ ರೈಡರ್ಸ್‌ ಹಾಗೂ ಆರ್‌ಸಿಬಿ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ.

ಹೀಗಾಗಿ ರೂರಲ್‌ ಕಿಂಗ್ಸ್‌–ವಿನ್ನರ್ಸ್‌ ನಡುವಿನ ಸೆಮಿಫೈನಲ್‌ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಗೆಲುವು ಸಾಧಿಸುವ ತಂಡ ಆ.23ರಂದು ನಡೆಯುವ ಫೈನಲ್‌ನಲ್ಲಿ ಈಗಾಗಲೇ ಫೈನಲ್‌ ಪ್ರವೇಶಿಸಿರುವ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img