ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ನ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 20 ಓವರ್ಗಳಲ್ಲಿ 199 ರನ್ ಗಳಿಸಿತು.
ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 15.5 ಓವರ್ಗಳಲ್ಲಿ 100 ರನ್ಗಳಿಗೆ ಆಲೌಟ್ ಆಗಿ, ಮುಂಬೈ ಇಂಡಿಯನ್ಸ್ಗೆ 99 ರನ್ಗಳ ಭಾರೀ ಜಯ ಒಲಿಯಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ಈ ಗೆಲುವು ಕೇವಲ ಎರಡು ಅಂಕಗಳಲ್ಲ, ಇದು ತಂಡದ ಆತ್ಮವಿಶ್ವಾಸವನ್ನು ಬದಲಿಸುವ ಟರ್ನಿಂಗ್ ಪಾಯಿಂಟ್. ಮುಂದಿನ ಪಂದ್ಯಗಳಲ್ಲಿ ಇದರ ಪರಿಣಾಮ ಕಾಣುತ್ತದೆ ಎಂದು ಹೇಳಿದರು.
ಯುವ ಆಟಗಾರರ ಪ್ರದರ್ಶನವನ್ನು ವಿಶೇಷವಾಗಿ ಶ್ಲಾಘಿಸಿದ ಅವರು, ತಿಲಕ್ ವರ್ಮಾ ಅವರ ಬ್ಯಾಟಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣ ಎಂದರು. ತಿಲಕ್ ಅದ್ಭುತ ಪ್ರತಿಭಾವಂತ. ಚೆಂಡನ್ನು ನೋಡಿ ಹೊಡೆಯುವಂತೆ ಹೇಳಿದ್ದೆ, ಅದನ್ನು ಅವರು ನಿಖರವಾಗಿ ಅನುಸರಿಸಿದರು ಎಂದು ಹೇಳಿದರು.
ಇದಲ್ಲದೆ, ಚೊಚ್ಚಲ ಪಂದ್ಯವಾಡಿದ ಕ್ರಿಶ್ ಹಾಗೂ ನಾಲ್ಕು ವಿಕೆಟ್ ಪಡೆದ ಅಶ್ವನಿ ಅವರ ಶಿಸ್ತಿನ ಬೌಲಿಂಗ್ ಗೆಲುವಿಗೆ ಬಲವಾಯಿತು. ಈ ಜಯದ ಶ್ರೇಯಸ್ಸು ನಮ್ಮ ಯುವ ಆಟಗಾರರದ್ದು ಎಂದು ಪಾಂಡ್ಯ ಹೇಳಿದರು.
ಬುಮ್ರಾ ಅವರಿಗೆ ಮೊದಲ ಓವರ್ ನೀಡಿದ ಬಗ್ಗೆ ಮಾತನಾಡಿದ ಪಾಂಡ್ಯ, ಬುಮ್ರಾ ವಿಶೇಷ ಬೌಲರ್. ತಂಡಕ್ಕೆ ಯಾವಾಗ ಅಗತ್ಯವೋ ಅಲ್ಲಿ ಬಳಸುತ್ತೇವೆ. ಇಂದು ಆರಂಭದಲ್ಲೇ ವಿಕೆಟ್ ಬೇಕಿತ್ತು, ಅದಕ್ಕಾಗಿ ಅವರನ್ನು ಬಳಸಿದೆವು. ಇದು ತಂಡದ ನಿರ್ಧಾರ ಎಂದು ಸ್ಪಷ್ಟಪಡಿಸಿದರು.
ಪಂದ್ಯದ ನಂತರ ದಣಿದಂತೆ ಕಾಣಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪಾಂಡ್ಯ, ಪಂದ್ಯದುದ್ದಕ್ಕೂ ನಾನು ಜೋರಾಗಿ ಕಿರುಚುತ್ತಿದ್ದೆ. ಒಂದು ಕ್ಷಣ ತಲೆ ಸುತ್ತಿದಂತೆ ಅನಿಸಿತು. ಆದರೆ ತಂಡದಲ್ಲಿ ಉತ್ಸಾಹ ತುಂಬುವುದು ಅಗತ್ಯವಿತ್ತು ಎಂದು ಹೇಳಿದರು.



