Home Blog Page 10

ನಾಗೇಂದ್ರ ವಿರುದ್ಧ ಹಣ ಪಡೆದಿರುವುದಕ್ಕೆ ಸಾಕ್ಷ್ಯವಿಲ್ಲ, ಬಿಜೆಪಿ ರಾಜಕೀಯ ಮಾಡುತ್ತಿದೆ: ಪರಮೇಶ್ವರ್ ಆರೋಪ

0

ಮೈಸೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಖಂಡಿತವಾಗಿಯೂ ಪಕ್ಷಕ್ಕೆ ಮುಜುಗರ ತಂದಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು. ಮೈಸೂರಿಗೆ ಹೆಚ್ಚಿನ ಕಾರ್ಖಾನೆಗಳನ್ನು ತರುವ ಉದ್ದೇಶದಿಂದ ಕೆಐಡಿಬಿ ಭೂಮಿಗೆ ನೋಟಿಫಿಕೇಶನ್ ನೀಡಿರಬಹುದು ಎಂದು ಹೇಳಿದ ಪರಮೇಶ್ವರ್,

ಈ ವಿಚಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಳ್ಳುತ್ತಾರೆ, ಕೈಗಾರಿಕಾ ಸಚಿವರು ಮತ್ತು ಜಿಲ್ಲಾ ಮಂತ್ರಿಗಳೇ ಇದನ್ನು ನಿರ್ವಹಿಸುತ್ತಾರೆ ಎಂದು ತಿಳಿಸಿದರು. ನಾಗೇಂದ್ರ ರಾಜೀನಾಮೆ ಪಕ್ಷಕ್ಕೆ ಖಂಡಿತ ಮುಜುಗರ ತಂದಿದೆ ಎಂದ ಪರಮೇಶ್ವರ್, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿದೆ ಎಂದು ಆರೋಪಿಸಿದರು.

ಎರಡು ಬಾರಿ ರಾಜೀನಾಮೆ ಕೊಡಿಸುವ ಮೂಲಕ ಬಿಜೆಪಿ ರಾಜಕೀಯ ನಡೆಸಿದೆ ಎಂದ ಅವರು, ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾಗೇಂದ್ರ ಪಕ್ಷಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು, ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ ಎಂದು ಸಮರ್ಥಿಸಿಕೊಂಡರು. ಇಡಿ ಹಾಗೂ ಸಿಬಿಐ ತನಿಖೆಗಳಲ್ಲಿ ನಾಗೇಂದ್ರ ಹೆಸರಿನ ಉಲ್ಲೇಖವಿಲ್ಲ ಎಂದೂ, ಅವರು ಹಣ ಪಡೆದಿರುವ ಬಗ್ಗೆಯೂ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದೂ ಪರಮೇಶ್ವರ್ ಸ್ಪಷ್ಟಪಡಿಸಿದರು.

ತಾವು ಗೃಹ ಸಚಿವರಾಗಿದ್ದಾಗಲೇ ಶೇ. 79ರಷ್ಟು ಹಣ ರಿಕವರಿಯಾಗಿತ್ತು ಎಂದು ಹೇಳಿದ ಅವರು, ಈಗ 5 ಕೋಟಿ ರೂ. ರಿಕವರಿ ಪ್ರಕ್ರಿಯೆಯಲ್ಲಿದ್ದು, ಇದರಲ್ಲೂ ನಾಗೇಂದ್ರ ಹೆಸರು ಇಲ್ಲ ಎಂದರು. ಮುಂದಿನ ದಿನಗಳಲ್ಲಿ ವಸ್ತುಸ್ಥಿತಿಯನ್ನು ಜನರ ಮುಂದೆ ತೆರೆದಿಡುವುದಾಗಿ ತಿಳಿಸಿದ ಪರಮೇಶ್ವರ್, ಸದನದಲ್ಲಿ ಈ ಪ್ರಶ್ನೆ ಕೇಳುವಂತೆ ಸೂಚಿಸಿದರೂ ಬಿಜೆಪಿಯವರು ಕೇಳಲಿಲ್ಲ, ಅವರು ಬರೀ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಟೀಕಿಸಿದರು.

ಕುಮಾರಸ್ವಾಮಿ ರಾಮನಗರಕ್ಕೆ ಬರಲಿ, ಪಾದ ತೊಳೆದು ಸ್ವಾಗತಿಸುತ್ತೇನೆ: ಇಕ್ಬಾಲ್ ಹುಸೇನ್

0

ರಾಮನಗರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಮನಗರಕ್ಕೆ ಬಂದರೆ ಕಾಲು ತೊಳೆದು ಸ್ವಾಗತಿಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದರು. “ಅವರು ರಾಜ್ಯ ರಾಜಕಾರಣಕ್ಕೆ ಬಂದರೆ ಸಂತೋಷದಿಂದ ಸ್ವಾಗತಿಸುತ್ತೇವೆ. ರಾಮನಗರಕ್ಕೆ ಬಂದರೆ ಅವರ ಪಾದ ತೊಳೆದೇ ಸ್ವಾಗತಿಸುತ್ತೇವೆ” ಎಂದು ಕುಟುಕಿದರು.

ನೈಸ್ ರಸ್ತೆ ವಿಚಾರವಾಗಿ ಹೋರಾಟಕ್ಕೆ ಮುಂದಾಗಿರುವ ಜೆಡಿಎಸ್ ವಿರುದ್ಧ ಕಿಡಿಕಾರಿದ ಇಕ್ಬಾಲ್ ಹುಸೇನ್, ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ರಾಜ್ಯದ ಪರ ಕೆಲಸ ಮಾಡಬೇಕು ಹಾಗೂ ರಾಮನಗರ ಜನತೆಯ ಋಣ ತೀರಿಸಬೇಕು ಎಂದರು. ರಾಮನಗರ ಭಾಗಕ್ಕೆ ಬೃಹತ್ ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗ ಒದಗಿಸುವ ಆಲೋಚನೆ ಮಾಡಬೇಕಿದ್ದ ಕುಮಾರಸ್ವಾಮಿಗೆ ಅಂತಹ ಅಭಿವೃದ್ಧಿ ಚಿಂತನೆಗಳೇ ಇಲ್ಲ ಎಂದೂ, ಬಿಡದಿ ಮತ್ತು ನೈಸ್ ರಸ್ತೆ ವಿಚಾರದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷದ ಬಳಿ ಬೇರೆ ಅಸ್ತ್ರಗಳಿಲ್ಲ ಎಂದು ಟೀಕಿಸಿದರು. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಹಾಗೂ ಬಿಜೆಪಿಯವರ ವರ್ತನೆಯಿಂದ ನೊಂದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆಯೇ ಹೊರತು, ಆರೋಪ ಸಾಬೀತಾಗಿದ್ದಕ್ಕಲ್ಲ ಎಂದು ಸಮರ್ಥಿಸಿಕೊಂಡ ಅವರು, ಪಕ್ಷಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಈಗಾಗಲೇ ಎಸ್‌ಐಟಿ ನಾಗೇಂದ್ರಗೆ ಕ್ಲೀನ್ ಚಿಟ್ ನೀಡಿದ್ದು, ಬಿಜೆಪಿ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪ್ರತಿಪಾದಿಸಿದರು.

ಫೇಕ್ ಐಡಿ, ಇಸ್ರೋ ಜಾಬ್ ಆಮಿಷ, ಅಶ್ಲೀಲ ವಿಡಿಯೋ..! ಗದಗದಲ್ಲಿ ಸಿಕ್ಕಿಬಿದ್ದ ವಂಚಕ

ಗದಗ: “ನಾನು ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದೇನೆ… ನಿಮಗೂ ಇಸ್ರೋದಲ್ಲಿ ಉದ್ಯೋಗ ಕೊಡಿಸುತ್ತೇನೆ…” ಎಂದು ಸಾಮಾಜಿಕ ಜಾಲತಾಣದ ಮೂಲಕ ಯುವಕ–ಯುವತಿಯರನ್ನು ಪರಿಚಯ ಮಾಡಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಪ್ರಕರಣ ಗದಗದಲ್ಲಿ ಬೆಳಕಿಗೆ ಬಂದಿದೆ.

https://www.facebook.com/share/v/1Yb23MG4VV/

ವಿಜಯಪುರ ಮೂಲದ ಈರಣ್ಣ ಬಡಿಗೇರ್ ಎಂಬಾತನ ವಿರುದ್ಧ ಗಂಭೀರ ವಂಚನೆ ಆರೋಪ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಉದ್ಯೋಗಾಕಾಂಕ್ಷಿಗಳನ್ನು ತನ್ನ ಬಲೆಗೆ ಬೀಳಿಸುತ್ತಿದ್ದ ಎನ್ನಲಾಗಿದೆ. ಈತ 30ಕ್ಕೂ ಹೆಚ್ಚು ಯುವಕ–ಯುವತಿಯರಿಗೆ ಇಸ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿರುವ ಆರೋಪವೂ ಕೇಳಿಬಂದಿದೆ.

ಇನ್‌ಸ್ಟಾಗ್ರಾಂನಲ್ಲಿ ಪರಿಚಯ… ನಂತರ ಇಸ್ರೋ ಜಾಬ್ ಆಫರ್..!

ಆರೋಪಿಯು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಯುವಕ–ಯುವತಿಯರನ್ನು ಪರಿಚಯ ಮಾಡಿಕೊಂಡು, ತಾನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ.

https://www.facebook.com/share/v/1Yb23MG4VV/

ನಂತರ ಇಸ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವಿವಿಧ ಪ್ರಕ್ರಿಯೆಗಳು ಹಾಗೂ ದಾಖಲೆಗಳ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪ ಕೇಳಿ ಬಂದಿದೆ. ಫೋನ್‌ಪೇ ಸೇರಿದಂತೆ ಆನ್‌ಲೈನ್ ಹಣ ವರ್ಗಾವಣೆ ವ್ಯವಸ್ಥೆಯ ಮೂಲಕ ಹಣ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಕರನ್ನು ಗುರಿಯಾಗಿಸಿಕೊಂಡು ಈತ ವಂಚನೆಯ ಜಾಲ ಹೆಣೆದಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಯುವತಿಯರನ್ನೂ ಬಲೆಗೆ ಬೀಳಿಸಿದ ಆರೋಪ

ಆರೋಪಿಯು ಕೇವಲ ಯುವಕರನ್ನಷ್ಟೇ ಗುರಿಯಾಗಿಸಿರಲಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಯುವತಿಯರೊಂದಿಗೆ ಪರಿಚಯ ಮಾಡಿಕೊಂಡು ಅವರನ್ನೂ ತನ್ನ ವಂಚನೆಯ ಜಾಲಕ್ಕೆ ಸೆಳೆಯುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈತನ ವಿರುದ್ಧ ವಂಚನೆಗೊಳಗಾದವರ ಸಂಖ್ಯೆ ಇನ್ನಷ್ಟು ಇರಬಹುದೆಂಬ ಅನುಮಾನವೂ ವ್ಯಕ್ತವಾಗಿದ್ದು, ಪ್ರಕರಣದ ವ್ಯಾಪ್ತಿಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಸ ಹೋದ ಯುವಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು

ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಪಡೆದುಕೊಂಡ ನಂತರವೂ ಯಾವುದೇ ಕೆಲಸವಾಗದ ಹಿನ್ನೆಲೆಯಲ್ಲಿ ಕೆಲ ಯುವಕರಿಗೆ ಅನುಮಾನ ಮೂಡಿದೆ ಎನ್ನಲಾಗಿದೆ. ಬಳಿಕ ಪರಸ್ಪರ ಮಾಹಿತಿ ಹಂಚಿಕೊಂಡ ಯುವಕರು ಆರೋಪಿಯನ್ನು ಹಿಡಿದು ಗದಗ ಶಹರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ವಶಕ್ಕೆ ಸಿಕ್ಕ ನಂತರ ಆರೋಪಿಯ ವಿರುದ್ಧ ಹಲವು ವಿಚಾರಗಳು ಹೊರಬರುತ್ತಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಮೊಬೈಲ್ ಪರಿಶೀಲನೆ ವೇಳೆ ಬೆಚ್ಚಿಬೀಳಿಸಿದ ವಿಡಿಯೋಗಳು..?

ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ ಹಲವು ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಮೊಬೈಲ್‌ನಲ್ಲಿದ್ದ ಕೆಲವು ಅಶ್ಲೀಲ ವಿಡಿಯೋಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆ ವಿಡಿಯೋಗಳ ಹಿನ್ನೆಲೆ ಏನು, ಅವುಗಳಲ್ಲಿ ಯಾರಿದ್ದಾರೆ ಮತ್ತು ಅವುಗಳನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿತ್ತು ಎಂಬ ಕುರಿತು ತನಿಖೆ ನಡೆಯಬೇಕಿದೆ. ಈ ಬಗ್ಗೆ ಸಂಪೂರ್ಣ ಸತ್ಯ ತನಿಖೆಯ ಬಳಿಕವೇ ಹೊರಬರಬೇಕಿದೆ.

‘ಸಾಲ ತೀರಿಸಲು ಈ ಕೆಲಸಕ್ಕೆ ಇಳಿದೆ’ ಎಂದ ಆರೋಪ..!

ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದೆ. ಆ ಸಾಲವನ್ನು ತೀರಿಸುವ ಉದ್ದೇಶದಿಂದ ಈ ಕೆಲಸಕ್ಕೆ ಇಳಿದಿದ್ದೇನೆ ಎಂದು ಆರೋಪಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಕೇಳಿಬಂದಿದೆ. ಡಿಪ್ಲೋಮಾ ಶಿಕ್ಷಣ ಪಡೆದ ಯುವಕನೊಬ್ಬ ಸಾಲದ ಸುಳಿಯಿಂದ ಹೊರಬರುವ ನೆಪದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಗುರಿಯಾಗಿಸಿಕೊಂಡು ವಂಚನೆಗೆ ಇಳಿದಿದ್ದಾನೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.

ಬ್ಯಾಗ್‌ನಲ್ಲಿ ನಿರೋಧದ ಪ್ಯಾಕೆಟ್ ಪತ್ತೆ; ತನಿಖೆ ಚುರುಕು

ಆರೋಪಿಯ ಬ್ಯಾಗ್ ಪರಿಶೀಲನೆ ವೇಳೆ ನಿರೋಧದ ಪ್ಯಾಕೆಟ್ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಇದಕ್ಕೆ ವಂಚನೆ ಪ್ರಕರಣದೊಂದಿಗೆ ಯಾವುದೇ ಸಂಬಂಧವಿದೆಯೇ ಅಥವಾ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಮೊಬೈಲ್‌ನಲ್ಲಿ ಪತ್ತೆಯಾದ ವಿಡಿಯೋಗಳು ಹಾಗೂ ಇತರ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

ವಂಚನೆಯ ಜಾಲದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ..?

ಇಸ್ರೋದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 30ಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದುಕೊಂಡಿರುವ ಆರೋಪದ ಹಿಂದೆ ಇನ್ನೂ ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ಎಷ್ಟು ಮಂದಿಯನ್ನು ಸಂಪರ್ಕಿಸಲಾಗಿದೆ..? ಎಷ್ಟು ಜನರಿಂದ ಹಣ ಪಡೆದುಕೊಳ್ಳಲಾಗಿದೆ..? ವಂಚನೆಯ ಹಣ ಎಲ್ಲಿಗೆ ಹೋಗಿದೆ..? ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ..? ಎಂಬ ಹಲವು ಪ್ರಶ್ನೆಗಳಿಗೆ ಗದಗ ಶಹರ ಪೊಲೀಸರ ತನಿಖೆಯೇ ಉತ್ತರ ನೀಡಬೇಕಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಗದಗ ಶಹರ ಪೊಲೀಸರು ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

ಬಿಜೆಪಿ ತಮ್ಮ ರಾಜಕೀಯಕ್ಕಾಗಿ ನಿರಪರಾಧಿಯನ್ನ ಬಲಿ ತೆಗೆದುಕೊಂಡಿದೆ: CM ಡಿಕೆ ಶಿವಕುಮಾರ್

0

ಮೈಸೂರು: ಬಿಜೆಪಿ ತಮ್ಮ ರಾಜಕೀಯಕ್ಕಾಗಿ ನಿರಪರಾಧಿಯೊಬ್ಬರನ್ನು ಬಲಿ ತೆಗೆದುಕೊಂಡಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ನಾಗೇಂದ್ರ ರಾಜೀನಾಮೆ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವ ತಪ್ಪನ್ನೂ ಮಾಡದಿದ್ದರೂ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯವರಿಗೆ ರಾಜಕೀಯ ಬೇಕಿರುವುದರಿಂದ ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ” ಎಂದರು. ಯಾವ ಕಾರಣಕ್ಕಾಗಿ ನಾಗೇಂದ್ರ ರಾಜೀನಾಮೆ ಕೇಳಲಾಯಿತು ಎಂಬ ತಮ್ಮ ಪ್ರಶ್ನೆಗೆ ಬಿಜೆಪಿಯವರು ಇನ್ನೂ ಉತ್ತರ ನೀಡಿಲ್ಲ ಎಂದು ಶಿವಕುಮಾರ್ ಆಕ್ಷೇಪಿಸಿದರು.

ಡಿ.ಕೆ. ಶಿವಕುಮಾರ್ ವಿಧಾನಸೌಧ ಮಾರುತ್ತಾರೆ ಎಂಬ ಹೆಚ್‌ಡಿಕೆ ಆರೋಪಕ್ಕೆ ತಿರುಗೇಟು ನೀಡಿದ ಅವರು, “ಯಾರ್ಯಾರು ಏನೇನು ಮಾರಲು ಹೊರಟಿದ್ದರು ಎಂಬ ಚರಿತ್ರೆ ಬಿಚ್ಚಿಟ್ಟರೆ ಎಲ್ಲವೂ ಬಯಲಾಗುತ್ತದೆ, ಆದರೆ ಸದ್ಯಕ್ಕೆ ಆ ವಿಷಯಕ್ಕೆ ಹೋಗುವುದಿಲ್ಲ” ಎಂದರು. ಕುಮಾರಸ್ವಾಮಿಗೆ ಬಾಯಿ ಚಪಲವಿದ್ದು, ಚಪಲಕ್ಕೆ ಮಾತನಾಡಿ ಖುಷಿಪಡಲಿ ಎಂದು ವ್ಯಂಗ್ಯವಾಡಿದ ಶಿವಕುಮಾರ್,

ತಾವು ಸಿಎಂ ಆಗಿರುವುದು ಕೆಲವರಿಗೆ ಅಸೂಯೆ ತಂದಿದೆ ಎಂದೂ, ಕುಮಾರಸ್ವಾಮಿ ಮಾತ್ರವಲ್ಲದೆ ಬಿಜೆಪಿ ಸೇರಿ ಇಡೀ ಎನ್‌ಡಿಎ ಒಕ್ಕೂಟಕ್ಕೇ ತಾವು ಸಿಎಂ ಆಗಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. “ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತದೆ ಎಂಬುದನ್ನು ನಂಬಿದವನು ನಾನು” ಎಂದು ಅವರು ಹೇಳಿದರು.

ಹನೂರು ಶೂಟೌಟ್ ಪ್ರಕರಣದ ಕುರಿತು ಮಾತನಾಡಿದ ಸಿಎಂ, ತನಿಖಾ ವರದಿ ಕೈಸೇರಿದ್ದು, ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದರು. ಬಂದಿರುವ ವರದಿಯಲ್ಲಿ ಹತ್ತಿರದಿಂದ ಗುಂಡು ಹಾರಿಸಿರುವ ಬಗ್ಗೆ ಹಾಗೂ ಸಂಬಂಧಿಸಿದವರ ಬಳಿ ಇದ್ದ ವಸ್ತುಗಳು, ಕಾಡಿಗೆ ತೆರಳಿದ ಕಾರಣಗಳ ಬಗ್ಗೆ ಪ್ರಸ್ತಾಪವಿದೆ ಎಂದು ತಿಳಿಸಿದ ಅವರು, ಸಿಐಡಿ ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ಅಂಶಗಳೂ ಬಹಿರಂಗವಾಗಲಿವೆ ಎಂದು ಹೇಳಿದರು.

ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ಅಲ್ಲೇ ನಾನು ನಿಲ್ಲುತ್ತೇನೆ: ಶ್ರೀರಾಮುಲು ಪ್ರತಿಸವಾಲು

0

ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ ಅವರ ಸವಾಲನ್ನು ಸ್ವೀಕರಿಸಿರುವ ಬಿಜೆಪಿ ನಾಯಕ, ಮಾಜಿ ಸಚಿವ ಶ್ರೀರಾಮುಲು, 2028ರ ಚುನಾವಣೆಯಲ್ಲಿ ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ತಾವೂ ಅಲ್ಲಿಯೇ ಸ್ಪರ್ಧಿಸುವುದಾಗಿ ಪ್ರತಿಸವಾಲು ಹಾಕಿದ್ದಾರೆ.

ಶನಿವಾರ ಪಕ್ಷದ ಮಲ್ಲೇಶ್ವರಂ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು, “2028ಕ್ಕೆ ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ನಾನೂ ಅಲ್ಲೇ ನಿಲ್ಲುತ್ತೇನೆ. ಒಬ್ಬ ಭ್ರಷ್ಟಾಚಾರಿ ವಿರುದ್ಧ ಈಗ ನಾನೇಕೆ ಸ್ಪರ್ಧಿಸಲಿ? ಮುಂದಿನ ಚುನಾವಣೆಗೆ ಅವರು ಬರಲಿ” ಎಂದು ಹೇಳಿದರು. ಈ ಭ್ರಷ್ಟಾಚಾರದ ಹಣದಿಂದಲೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಲವರು ಗೆದ್ದಿದ್ದಾರೆ ಎಂದು ಆರೋಪಿಸಿದ ಅವರು, ತುಕಾರಾಂ, ಖರ್ಗೆ ಅಳಿಯ ಹಾಗೂ ಬೀದರ್ ಸಂಸದರು ಇದೇ ಹಣದಿಂದ ಗೆದ್ದವರು ಎಂದು ಆರೋಪ ಮಾಡಿದರು.

ಜನತಾ ನ್ಯಾಯಾಲಯಕ್ಕೆ ಬರುವಂತೆ ನಾಗೇಂದ್ರ ನೀಡಿರುವ ಸವಾಲಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, “ಸರ್ಕಾರ ವಜಾಗೊಳಿಸಿ ಅವರು ಬರಲಿ, ನಾವೂ ಈಗಲೇ ಜನತಾ ನ್ಯಾಯಾಲಯಕ್ಕೆ ಬರಲು ಸಿದ್ಧ” ಎಂದು ತಿರುಗೇಟು ನೀಡಿದರು. ಚುನಾವಣೆ ಸಂದರ್ಭದಲ್ಲೇ ಎದುರಿಸುವುದಾಗಿ ಹೇಳಿದ ಅವರು, ಈಗಾಗಲೇ ಜನತಾ ನ್ಯಾಯಾಲಯ ತೀರ್ಪು ನೀಡಿದ್ದು, ಸೋತಿರುವುದು ನಿಜವಾದರೂ ಮುಂದೆ ಮತ್ತೆ ಜನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿ, ನಾಗೇಂದ್ರಗೆ ಇಷ್ಟೊಂದು ಅವಸರವೇಕೆ ಎಂದು ಪ್ರಶ್ನಿಸಿದರು.

ಒಂದೇ ವಿಚಾರದಲ್ಲಿ ಎರಡು ಬಾರಿ ರಾಜೀನಾಮೆ ನೀಡಿರುವುದು ಇದೇ ಮೊದಲ ಬಾರಿ ಎಂದ ಶ್ರೀರಾಮುಲು, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಿದ್ದರು ಎಂದು ನೆನಪಿಸಿದರು. ಲೋಕಸಭೆ ಚುನಾವಣೆಗೆ ನಿಗಮದ ಹಣ ಬಳಕೆಯಾಗಿದ್ದು, ಸದನದಲ್ಲಿ ಸಿಎಂ ನಾಗೇಂದ್ರ ಪರ ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂದೂ ಆರೋಪಿಸಿದ ಅವರು, ನಾಗೇಂದ್ರ ರಾಜೀನಾಮೆಯನ್ನು ಡಿಕೆ ಶಿವಕುಮಾರ್ ಬಯಸಿದ್ದರಿಂದಲೇ ಸದನದಲ್ಲಿ ಯಾವುದೇ ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂದು ಆರೋಪಿಸಿದರು.

ನಾಗೇಂದ್ರ ಅವರ ಕಣ್ಣೀರಿನ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಶ್ರೀರಾಮುಲು, “ನಾವೇನು ನಿಮ್ಮ ಮಂತ್ರಿ ಸ್ಥಾನ ಕಸಿದುಕೊಂಡೆವಾ? ತಪ್ಪು ಮಾಡಿ ರಾಜೀನಾಮೆ ಕೊಟ್ಟಿರಿ, ವಿಪಕ್ಷವಾಗಿ ಸಮುದಾಯಕ್ಕಾಗಿ ಹೋರಾಟ ಮಾಡಿದ್ದೇವೆ” ಎಂದರು. ನಾಗೇಂದ್ರ ‘ಮನುವಾದಿಗಳು’ ಎಂದು ಆಪಾದಿಸಿದ್ದಕ್ಕೆ ಪ್ರತಿಕ್ರಿಯಿಸಿ, 2013ರಲ್ಲಿ ನಾಗೇಂದ್ರ ಗೆದ್ದಾಗ ಇದೇ ‘ಮನುವಾದಿಗಳೇ’ ಜೊತೆಗಿದ್ದರು ಎಂದು ಪ್ರಶ್ನಿಸಿ, ಇಷ್ಟೊಂದು ಕಣ್ಣೀರು ಹಾಕುವ ಅಗತ್ಯವೇನಿತ್ತು ಎಂದು ಶ್ರೀರಾಮುಲು ಟೀಕಿಸಿದರು.

ಖರ್ಗೆ ಭಾಷಣ ಸ್ಥಳ ಶುದ್ಧೀಕರಣ ವಿವಾದ: ಬಿಜೆಪಿ ನಾಯಕರ ವಿರುದ್ಧ FIRಗೆ ಮೋದಿ ಆದೇಶಿಸಲಿ – ರಾಹುಲ್ ಗಾಂಧಿ ಆಗ್ರಹ

0

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪ್ರಧಾನಿ ಮೋದಿ ಆದೇಶಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿ, ಖರ್ಗೆ ಅವರ ಹಲ್ದ್ವಾನಿ ಭೇಟಿ ಪ್ರಸ್ತಾಪಿಸಿದರು.

ಖರ್ಗೆ ಅವರು ಭಾಷಣ ಮಾಡಿದ್ದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ‘ಶುದ್ಧೀಕರಣ’ ನಡೆಸಲಾಗಿದ್ದು, ಈ ಕುರಿತು ಪ್ರಧಾನಿ ಮಧ್ಯಪ್ರವೇಶಿಸಬೇಕು ಮತ್ತು ಈ ಕೃತ್ಯ ಎಸಗಿದವರ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಶುದ್ಧೀಕರಣ ಎಂಬುದು ಮೂಲಭೂತವಾಗಿ ಅಸ್ಪೃಶ್ಯತೆಯ ಮತ್ತೊಂದು ರೂಪವಾಗಿದ್ದು, ಸಂವಿಧಾನವೇ ಇದನ್ನು ನಿಷೇಧಿಸಿದೆ ಎಂದು ಅವರು ಹೇಳಿದರು.

ಇಂತಹ ಆಚರಣೆಗಳು ದಲಿತರನ್ನು ಅಶುದ್ಧರೆಂದು ಬಿಂಬಿಸುತ್ತವೆ ಎಂದ ರಾಹುಲ್, ಈ ರೀತಿಯ ಸಂವಿಧಾನ ವಿರೋಧಿ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೇ ಇಂತಹ ಘಟನೆ ಸಂಭವಿಸುವುದಾದರೆ, ಸಾಮಾನ್ಯ ನಾಗರಿಕರ ವಿರುದ್ಧವೂ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇಂದಿಗೂ ದಲಿತರು ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಾವಿಗಳಿಂದ ನೀರು ಸೇದುವುದನ್ನು ನಿಷೇಧಿಸುವುದು ಮತ್ತು ಚಹಾ ಅಂಗಡಿಗಳಲ್ಲಿ ದಲಿತರಿಗೆ ಪ್ರತ್ಯೇಕ ಪೇಪರ್ ಕಪ್‌ಗಳನ್ನು ನೀಡುವಂತಹ ತಾರತಮ್ಯದ ಉದಾಹರಣೆಗಳನ್ನು ಪ್ರಸ್ತಾಪಿಸಿದರು. ಮದುವೆ ಮೆರವಣಿಗೆಯಲ್ಲಿ ಕುದುರೆ ಏರುವ ದಲಿತರ ಮೇಲೆ ಕಲ್ಲು ತೂರಾಟ ನಡೆಸುವ ಕಾರಣ ಅವರು ಹೆಲ್ಮೆಟ್ ಧರಿಸಬೇಕಾದ ಪರಿಸ್ಥಿತಿ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಇದೆ ಎಂದು ಹೇಳಿದರು.

ಸಾಧನೆ ಮಾಡುವ ದಲಿತರ ವಿರುದ್ಧವೇ ಆಕ್ರಮಣಗಳು ನಡೆಯುತ್ತಿವೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಖರ್ಗೆ ಭಾಷಣ ಮಾಡಿದ ಸ್ಥಳದ ಶುದ್ಧೀಕರಣ ಕೃತ್ಯವನ್ನು ಬಿಜೆಪಿ-ಆರ್‌ಎಸ್‌ಎಸ್ ಜನರೇ ನಡೆಸಿದ್ದಾರೆ ಎಂದು ಆರೋಪಿಸಿದರು. ಇದೊಂದು ಕ್ರಿಮಿನಲ್ ಚಟುವಟಿಕೆ ಮಾತ್ರವಲ್ಲದೆ, ಅಸ್ಪೃಶ್ಯತೆಯನ್ನು ಮರುಜಾರಿಗೆ ತರುವ ಪ್ರಯತ್ನ ಎಂದೂ ಅವರು ಆಕ್ಷೇಪ ವ್ಯಕ್ತಪಡಿಸಿದರು.

‘ಅಸೂಯೆಗೆ ಮದ್ದಿಲ್ಲ, ಟೀಕೆ ಸಾಯುತ್ತೆ-ಕೆಲಸ ಉಳಿಯುತ್ತೆ’: ಹೆಚ್‌ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ!

0

ಮೈಸೂರು: ರಾಜಕೀಯ ಲಾಭಕ್ಕಾಗಿ ಬಿಜೆಪಿ ನಿರಪರಾಧಿ ಬಿ. ನಾಗೇಂದ್ರ ಅವರನ್ನು ಬಲಿ ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿ ಪಾದಯಾತ್ರೆ ನಡೆಸಲು ಮುಂದಾಗಿರುವುದು ರಾಜಕೀಯ ಉದ್ದೇಶದಿಂದ ಎಂದು ಅವರು ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಯಾವುದೇ ತಪ್ಪು ಮಾಡದಿದ್ದರೂ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು. ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿಯವರು ಪಾದಯಾತ್ರೆ ನಡೆಸುವುದಾದರೆ ನಡೆಸಲಿ. ಅವರಿಗೆ ರಾಜಕೀಯವೇ ಮುಖ್ಯವಾಗಿದ್ದು, ಅದಕ್ಕಾಗಿಯೇ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ಯಾವ ಕಾರಣಕ್ಕಾಗಿ ನಾಗೇಂದ್ರ ರಾಜೀನಾಮೆ ಕೇಳಿದರು ಎಂಬ ನನ್ನ ಒಂದೇ ಪ್ರಶ್ನೆಗೆ ಬಿಜೆಪಿ ಇನ್ನೂ ಉತ್ತರ ನೀಡಿಲ್ಲ’ ಎಂದು ಡಿಕೆಶಿ ಪ್ರಶ್ನಿಸಿದರು.

ವಿಧಾನಸೌಧ ಮಾರಾಟ ಮಾಡುತ್ತಾರೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಯಾರು ಏನನ್ನು ಮಾರಾಟ ಮಾಡಲು ಹೊರಟಿದ್ದರು ಎಂಬುದನ್ನು ಬಿಚ್ಚಿಟ್ಟರೆ ಎಲ್ಲವೂ ಬಯಲಾಗಲಿದೆ ಎಂದರು. ಸದ್ಯ ತಾವು ಆ ವಿಚಾರದ ತಂಟೆಗೆ ಹೋಗುವುದಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಅವರಿಗೆ ‘ಬಾಯಿ ಚಪಲ’ ಇದೆ. ಚಪಲಕ್ಕೆ ಮಾತನಾಡಿ ಅವರು ಖುಷಿಪಡಲಿ, ತಮ್ಮ ವಿರುದ್ಧ ಇನ್ನಷ್ಟು ಟೀಕೆ ಮಾಡಲಿ ಎಂದು ವ್ಯಂಗ್ಯವಾಡಿದ ಡಿ.ಕೆ. ಶಿವಕುಮಾರ್, ‘ಅಸೂಯೆಗೆ ಮದ್ದಿಲ್ಲ. ನಾನು ಮುಖ್ಯಮಂತ್ರಿ ಆಗಿರುವುದು ಕೆಲವರಿಗೆ ಅಸೂಯೆ ತಂದಿದೆ’ ಎಂದು ತಿರುಗೇಟು ನೀಡಿದರು.

ತಾವು ಮುಖ್ಯಮಂತ್ರಿ ಆಗಿರುವುದನ್ನು ಕುಮಾರಸ್ವಾಮಿ ಮಾತ್ರವಲ್ಲ, ಬಿಜೆಪಿ ಹಾಗೂ ಎನ್‌ಡಿಎ ಕೂಟಕ್ಕೂ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ವಿರುದ್ಧ ಏನೇನು ಮಾತನಾಡುತ್ತಾರೋ ಮಾತನಾಡಲಿ ಎಂದು ಹೇಳಿದರು.

‘ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತದೆ. ಇದನ್ನು ನಂಬಿದವನು ನಾನು’ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.

ಹನೂರು ಶೂಟೌಟ್ ಪ್ರಕರಣದ ಕುರಿತು ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿ ಸರ್ಕಾರದ ಕೈ ಸೇರಿದೆ. ಸಂಪೂರ್ಣ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಅಂಶಗಳು ಉಲ್ಲೇಖವಾಗಿವೆ. ಗುಂಡಿನ ದಾಳಿ ಹತ್ತಿರದಿಂದ ನಡೆದಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪವಿದೆ. ಮೃತಪಟ್ಟವರ ಬಳಿ ಇದ್ದ ವಸ್ತುಗಳು ಹಾಗೂ ಅವರು ಕಾಡಿಗೆ ತೆರಳಿದ್ದ ಕಾರಣದ ಬಗ್ಗೆಯೂ ಮಾಹಿತಿ ಇದೆ. ಸಿಐಡಿ ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣದ ಸಂಪೂರ್ಣ ವಿವರ ಬಹಿರಂಗವಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ನಾಗೇಂದ್ರ ರಾಜೀನಾಮೆ ಬಿಜೆಪಿ-ಜೆಡಿಎಸ್ ಹೋರಾಟದ ಫಲ’: ಸೆ.1ರಿಂದ ಲಿಂಗಸೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆಗೆ ವಿಜಯೇಂದ್ರ ಕರೆ!

0

ತುಮಕೂರು: ವಾಲ್ಮೀಕಿ ನಿಗಮದ 187 ಕೋಟಿ ರೂ. ಅಕ್ರಮ ಹಣ ವಾಪಸ್ ಪಡೆಯುವವರೆಗೂ ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದ್ದಾರೆ. ಸೆಪ್ಟೆಂಬರ್ 1ರಿಂದ ಲಿಂಗಸೂರಿನಿಂದ ಬಳ್ಳಾರಿವರೆಗೆ ಬಿಜೆಪಿ ಪಾದಯಾತ್ರೆ ನಡೆಸಲು ಸಜ್ಜಾಗಿದೆ.

ತುಮಕೂರಿನಲ್ಲಿ ಮಾತನಾಡಿದ ವಿಜಯೇಂದ್ರ, ಪಾದಯಾತ್ರೆ ಕುರಿತು ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆಸಲಾಗಿದ್ದು, ಅವರಿಂದ ಹಸಿರು ನಿಶಾನೆ ದೊರೆತಿದೆ. ಪಾದಯಾತ್ರೆಯನ್ನು ಯಶಸ್ವಿಗೊಳಿಸುವಂತೆ ರಾಷ್ಟ್ರೀಯ ನಾಯಕರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಬಿ. ನಾಗೇಂದ್ರ ರಾಜೀನಾಮೆ ವಿಚಾರವನ್ನೂ ಪ್ರಸ್ತಾಪಿಸಿದ ವಿಜಯೇಂದ್ರ, ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ನಡೆಸಿದ ಏಳು ದಿನಗಳ ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ಹೇಳಿದರು. ಹಗಲು-ರಾತ್ರಿ ಪ್ರತಿಭಟನೆ, ವಿಧಾನಸೌಧ ಮುತ್ತಿಗೆ ಸೇರಿದಂತೆ ಪಕ್ಷದ ಕಾರ್ಯಕರ್ತರು ನಡೆಸಿದ ಹೋರಾಟದಿಂದಾಗಿ ನಾಗೇಂದ್ರ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಹೇಳಿದರು.

‘ನಮ್ಮ ಹೋರಾಟ ನಾಗೇಂದ್ರ ವಿರುದ್ಧ ಮಾತ್ರವಲ್ಲ; ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ’ ಎಂದು ಸ್ಪಷ್ಟಪಡಿಸಿದ ವಿಜಯೇಂದ್ರ, ದಲಿತ ಸಮುದಾಯಕ್ಕೆ ಸೇರಬೇಕಿದ್ದ ಹಣದ ಅಕ್ರಮದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

ಹಣ ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ. ಇದೇ ಕಾರಣಕ್ಕೆ ಲಿಂಗಸೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ನಾಗೇಂದ್ರ ಕೂಡ ಪಾದಯಾತ್ರೆ ನಡೆಸುವುದಾಗಿ ನೀಡಿರುವ ಹೇಳಿಕೆ ಕುರಿತು, ‘ಪಾದಯಾತ್ರೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಅವರೂ ಮಾಡಲಿ’ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

ವಾಲ್ಮೀಕಿ ನಿಗಮದ ಹಣದ ಅಕ್ರಮ ಪ್ರಕರಣವನ್ನು ರಾಜಕೀಯವಾಗಿ ಮುಂದುವರಿಸುವುದರ ಜತೆಗೆ, ಸರ್ಕಾರದ ವಿರುದ್ಧದ ಹೋರಾಟವನ್ನು ಬೀದಿಗಿಳಿಸಿ ಮತ್ತಷ್ಟು ತೀವ್ರಗೊಳಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಸಂದೇಶ ನೀಡಿದ್ದಾರೆ.

ಸೇತುವೆ ಮೇಲೆ ಮಗು ಬಿಟ್ಟು ನದಿಗೆ ಹಾರಿದ ದಂಪತಿ: ಅನಾಥವಾದ 3 ವರ್ಷದ ಕಂದಮ್ಮ

0

ಅಮರಾವತಿ: ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ ವಸಿಷ್ಠ ಸೇತುವೆಯ ಬಳಿ ದುರಂತವೊಂದು ಸಂಭವಿಸಿದ್ದು, ಮೂರು ವರ್ಷದ ಮಗುವನ್ನು ಬಿಟ್ಟು ದಂಪತಿ ಸೇತುವೆ ಮೇಲಿಂದ ನದಿಗೆ ಹಾರಿದ ಘಟನೆ ನಡೆದಿದೆ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವೆಲ್ಪುರು ಗ್ರಾಮದ ನಿವಾಸಿಗಳಾದ ಪತಿ ದೊಡ್ಡ ಸಾಯಿ (29) ಮತ್ತು ಪತ್ನಿ ಶಿರೀಷಾ (28) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದ ರಾತ್ರಿ 10 ಗಂಟೆ ಸುಮಾರಿಗೆ ದಂಪತಿ ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಸೇತುವೆ ಬಳಿ ಬಂದಿದ್ದರು. ಬಳಿಕ ಮಗುವನ್ನು ಸ್ಕೂಟರ್ ಮೇಲೆಯೇ ಬಿಟ್ಟು ಉಕ್ಕಿ ಹರಿಯುತ್ತಿದ್ದ ಗೋದಾವರಿ ನದಿಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ. ಕತ್ತಲು ಹಾಗೂ ಚಳಿ ಮಧ್ಯೆ ಮಗು ಒಂಟಿಯಾಗಿ ಸೇತುವೆ ಮೇಲೆ ಅಳುತ್ತಿರುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗು ಅಮ್ಮ-ಅಪ್ಪ ಎಂದು ಕರೆಯುತ್ತಿರುವುದನ್ನು ಕೇಳಿ ಸ್ಥಳೀಯರು ಪೋಷಕರಿಗಾಗಿ ಹುಡುಕಾಟ ನಡೆಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ವಶಕ್ಕೆ ತೆಗೆದುಕೊಂಡು ಸ್ಕೂಟರ್ ಜಪ್ತಿ ಮಾಡಿದ್ದಾರೆ. ಬಳಿಕ ಮಗುವನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ. ಸದ್ಯ ದಂಪತಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದ್ದು, ಪೊಲೀಸ್ ಸಿಬ್ಬಂದಿ, ಈಜುಗಾರರು ಮತ್ತು ದೋಣಿ ತಂಡಗಳು ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ತಂದೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಆಂಧ್ರಪ್ರದೇಶಕ್ಕೆ ಹಿಂತಿರುಗುವ ಮೊದಲು ಗಲ್ಫ್‌ನಲ್ಲಿದ್ದರು ಎಂದು ತಿಳಿದುಬಂದಿದೆ. ಸಾಲದ ಹೊರೆ ಹಾಗೂ ಹಣಕಾಸಿನ ಒತ್ತಡದಿಂದ ಬಳಲುತ್ತಿದ್ದ ದಂಪತಿ, ಆರ್ಥಿಕ ಸಮಸ್ಯೆಯ ಕಾರಣದಿಂದಲೇ ತಮ್ಮ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಸದ್ಯ ಘಟನೆಗೆ ನಿಖರವಾದ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ತಂಡದಿಂದ ಹೊರಗಿಟ್ಟಾಗ ಒಳಗೊಳಗೆ ನೋವಿತ್ತು: ಕೊನೆಗೂ ಮೌನ ಮುರಿದ ಸೂರ್ಯಕುಮಾರ್ ಯಾದವ್!

0

ನವದೆಹಲಿ: ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲುವು ತಂದುಕೊಟ್ಟ ಬಳಿಕವೇ ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿದ್ದ ವಿಚಾರದ ಕುರಿತು ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಆಕಾಶ್ ಚೋಪ್ರಾ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಸೂರ್ಯ, ತಂಡದ ಆಯ್ಕೆಯಿಂದ ತಮಗೆ ಉಂಟಾದ ಆಘಾತ ಹಾಗೂ ಆ ಸಂದರ್ಭವನ್ನು ಹೇಗೆ ಎದುರಿಸಿದರು ಎಂಬುದನ್ನು ಹಂಚಿಕೊಂಡಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಹೊರಗಿಟ್ಟಿತ್ತು. ಅವರ ಬದಲಿಗೆ ಮುಂದಿನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಕಳೆದ ಎರಡು ವರ್ಷಗಳಲ್ಲಿ ಸೂರ್ಯಕುಮಾರ್ ಅವರ ಬ್ಯಾಟಿಂಗ್ ಫಾರ್ಮ್ ನಿರೀಕ್ಷಿತ ಮಟ್ಟದಲ್ಲಿರದಿರುವುದು ಅವರನ್ನು ತಂಡದಿಂದ ಕೈಬಿಡಲು ಪ್ರಮುಖ ಕಾರಣ ಎಂದು ಹೇಳಲಾಗಿತ್ತು. 2025ರಲ್ಲಿ ಭಾರತ ಪರ ಆಡಿದ ಯಾವುದೇ ಪಂದ್ಯದಲ್ಲೂ ಅವರು ಅರ್ಧಶತಕ ಗಳಿಸಿರಲಿಲ್ಲ. ತವರಿನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಅಮೆರಿಕ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ ಪ್ರಮುಖ ಇನಿಂಗ್ಸ್ ಹೊರತುಪಡಿಸಿ ಅವರ ಬ್ಯಾಟಿಂಗ್ ಪ್ರದರ್ಶನ ಗಮನಾರ್ಹವಾಗಿರಲಿಲ್ಲ.

ಆದರೆ ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರ ಸಾಧನೆ ಅತ್ಯುತ್ತಮವಾಗಿತ್ತು. ಅವರ ನಾಯಕತ್ವದಲ್ಲಿ ಭಾರತ ತಂಡ ಒಂದೇ ಒಂದು ಸರಣಿಯನ್ನೂ ಸೋಲದೆ, ಏಷ್ಯಾಕಪ್ ಜೊತೆಗೆ ತವರಿನಲ್ಲೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು. ಇಂತಹ ಸಂದರ್ಭದಲ್ಲಿ ತಂಡದಿಂದಲೇ ಹೊರಗುಳಿಯಬೇಕಾದ ಪರಿಸ್ಥಿತಿ ಎದುರಾದಾಗ ಸೂರ್ಯಕುಮಾರ್ ಅದನ್ನು ಹೇಗೆ ಸ್ವೀಕರಿಸಿದರು ಎಂಬುದು ಇದೀಗ ಬಹಿರಂಗವಾಗಿದೆ.

‘ತಂಡದಲ್ಲಿ ನನ್ನ ಹೆಸರು ಇರಲಿಲ್ಲ, ನಾನು ನಗುತ್ತಿದ್ದೆ’

ತಂಡದ ಆಯ್ಕೆಯಲ್ಲಿ ತಮ್ಮ ಹೆಸರು ಇಲ್ಲ ಎಂಬ ವಿಚಾರ ತಿಳಿದಾಗ ತಾವು ಯಾವುದೇ ತೀವ್ರ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಸೂರ್ಯ ಹೇಳಿದ್ದಾರೆ. ಬದಲಾಗಿ ಆಯ್ಕೆಗಾರರ ಸ್ಥಾನದಲ್ಲಿ ನಿಂತು ಅವರ ನಿರ್ಧಾರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.

ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ ತಂಡದೊಂದಿಗೆ ಆಡುತ್ತಿದ್ದಾಗಲೂ ಒತ್ತಡದ ಸಂದರ್ಭಗಳು ಎದುರಾದಾಗ ಅಥವಾ ಪರಿಸ್ಥಿತಿಗಳು ತಮ್ಮ ಪರವಾಗಿರದಿದ್ದಾಗ ತಾವು ನಗುತ್ತಾ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುತ್ತಿದ್ದೆ ಎಂದು ಸೂರ್ಯ ಹೇಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರದರ್ಶನ ನೀಡಲು ದೊರೆತ ಅವಕಾಶಗಳನ್ನು ನೆನಪಿಸಿಕೊಂಡು ಅದಕ್ಕಾಗಿ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

‘ಮುಂದಿನ ಎರಡು ವರ್ಷ ತಂಡವನ್ನು ಮುನ್ನಡೆಸುತ್ತೇನೆ ಅಂದುಕೊಂಡಿದ್ದೆ’

ಆದರೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ತಾವು ಎಂದಿಗೂ ಯೋಚಿಸಿರಲಿಲ್ಲ ಎಂದು ಸೂರ್ಯಕುಮಾರ್ ಹೇಳಿದ್ದಾರೆ. 2026ಕ್ಕೆ ಕಾಲಿಟ್ಟ ಬಳಿಕ ಮುಂದಿನ ಎರಡು ವರ್ಷಗಳ ಕಾಲ ಭಾರತ ತಂಡವನ್ನು ಮುನ್ನಡೆಸುತ್ತೇನೆ ಎಂದೇ ಭಾವಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಒಲಿಂಪಿಕ್ಸ್, ಮತ್ತೊಂದು ಟಿ20 ವಿಶ್ವಕಪ್ ಸೇರಿದಂತೆ ಹಲವು ಪ್ರಮುಖ ಸವಾಲುಗಳು ಎದುರಾಗಲಿವೆ. ಹೀಗಾಗಿ ತಂಡವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂಬ ನಿರೀಕ್ಷೆ ಹೊಂದಿದ್ದೆ ಎಂದು ಸೂರ್ಯ ಹೇಳಿದ್ದಾರೆ.

ಆದರೆ ನಾವು ಏನು ಯೋಚಿಸುತ್ತೇವೆ ಮತ್ತು ಮತ್ತೊಬ್ಬ ವ್ಯಕ್ತಿ ಏನು ಯೋಚಿಸುತ್ತಾರೆ ಎಂಬುದು ಎರಡು ವಿಭಿನ್ನ ವಿಚಾರಗಳು. ಆಯ್ಕೆಗಾರರು ತೆಗೆದುಕೊಂಡ ನಿರ್ಧಾರವನ್ನು ಗೌರವಿಸುವುದು ಮುಖ್ಯ ಎಂದು ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

‘ಬೇರೆ ನಾಯಕತ್ವದಲ್ಲಿ ತಂಡ ಉತ್ತಮವಾಗಿ ಆಡಿದರೂ ನನಗೆ ಸಮಸ್ಯೆಯಿಲ್ಲ’

ತಂಡದಿಂದ ಕೈಬಿಡುವ ನಿರ್ಧಾರದ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸೂರ್ಯಕುಮಾರ್ ಸ್ಪಷ್ಟಪಡಿಸಿದ್ದಾರೆ. ಆ ಸಮಯದಲ್ಲಿ ತಂಡದ ಹಿತದೃಷ್ಟಿಯಿಂದ ಇದೇ ಉತ್ತಮ ನಿರ್ಧಾರ ಎಂದು ಆಯ್ಕೆಗಾರರು ಭಾವಿಸಿ ಆ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರ ನಿರ್ಧಾರವನ್ನು ಗೌರವಿಸಿದ್ದೇನೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಬೇರೆ ನಾಯಕತ್ವದಲ್ಲಿ ಭಾರತ ತಂಡ ಇನ್ನಷ್ಟು ಉತ್ತಮವಾಗಿ ಆಡಿದರೆ ಅದರಿಂದ ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸೂರ್ಯಕುಮಾರ್ ಯಾದವ್ ಭಾವುಕರಾಗಿ ತಿಳಿಸಿದ್ದಾರೆ.

ನಾಯಕನಾಗಿ ಭಾರತಕ್ಕೆ ದೊಡ್ಡ ಗೆಲುವುಗಳನ್ನು ತಂದುಕೊಟ್ಟ ಬಳಿಕವೇ ನಾಯಕತ್ವ ಹಾಗೂ ತಂಡದ ಸ್ಥಾನ ಕಳೆದುಕೊಂಡ ಸೂರ್ಯಕುಮಾರ್ ಅವರ ಈ ಹೇಳಿಕೆ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.