Home Blog Page 14

ಯಾರ ನಾಯಕತ್ವ ಬಂದ್ರೆ ಕಮಿಷನ್ ಹೋಗುತ್ತೆ ಅಂತ ಜನ ತೀರ್ಮಾನಿಸಲಿ: ಹೆಚ್.ಡಿ. ಕುಮಾರಸ್ವಾಮಿ

0

ಬೆಂಗಳೂರು: “ಯಾರ ನಾಯಕತ್ವ ಬಂದರೆ ಕಮಿಷನ್ ಸಂಸ್ಕೃತಿ ಹೋಗುತ್ತದೆ ಎಂದು ಜನರು ತೀರ್ಮಾನಿಸಲಿ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ಶಾಸಕ ಚಂದ್ರು ಲಮಾಣಿ ಬಂಧನದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಮಿಷನ್ ಆರೋಪಗಳು ಕೇಳಿಬಂದಿಲ್ಲ ಎಂದು ಹೇಳಿದರು.

“ನಾನು ಎರಡು ಬಾರಿ ಸಿಎಂ ಆಗಿದ್ದಾಗ ಪ್ರತಿ ತಿಂಗಳ 30ರಂದು ಗುತ್ತಿಗೆದಾರರ ಮನೆ ಬಾಗಿಲಿಗೆ ಹಣ ಬಿಡುಗಡೆ ಮಾಡುವ ಚೆಕ್ ಹೋಗುತ್ತಿತ್ತು. ಅಷ್ಟು ಕಟ್ಟುನಿಟ್ಟಾಗಿ ಆಡಳಿತ ನಡೆಸಿದ್ದೇವೆ” ಎಂದು ತಿಳಿಸಿದರು.

ಚಂದ್ರು ಲಮಾಣಿ ಲೋಕಾಯುಕ್ತ ಟ್ರ್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಆ ವಿಷಯವನ್ನು ಸಂಬಂಧಿಸಿದ ಶಾಸಕರನ್ನೇ ಕೇಳಬೇಕು ಎಂದರು. ಸತೀಶ್ ಜಾರಕಿಹೊಳಿ ಎಲ್ಲಾ ಕಾಲದಲ್ಲೂ ಕಮಿಷನ್ ನಡೆಯುತ್ತಿತ್ತು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, “ನಾನು ಸಿಎಂ ಆಗಿದ್ದಾಗ ಕಮಿಷನ್ ನಡೆದಿತ್ತು ಎಂದು ಯಾರು ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಸರಿಯಾಗಬೇಕಾದರೆ ಯಾವ ನಾಯಕತ್ವವನ್ನು ಆಯ್ಕೆ ಮಾಡಿದರೆ ಭ್ರಷ್ಟಾಚಾರ ಸಂಪೂರ್ಣವಾಗಿ ಹೋಗಲಾಡಿಸಬಹುದು ಎಂಬುದನ್ನು ಜನರು ತೀರ್ಮಾನಿಸಲಿ ಎಂದು ಅವರು ಹೇಳಿದರು.

CCB ವಿಚಾರಣೆ ಬಳಿಕ ಉಲ್ಟಾ ಹೊಡೆದ ಸ್ನೇಹಮಯಿ ಕೃಷ್ಣ: ಶಾಲಿನಿ ರಜನೀಶ್ʼಗೆ ಕ್ಷಮೆ

0

ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಗಂಭೀರ ಲಂಚ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಸಿಸಿಬಿ ವಿಚಾರಣೆ ಬಳಿಕ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.ಶಾಲಿನಿ ರಜನೀಶ್ ವಿರುದ್ಧ 1.60 ಕೋಟಿ ರೂಪಾಯಿ ಲಂಚದ ಆರೋಪ ಮಾಡಿದ್ದ ಅವರು,

ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ಸಿಎಸ್‌ಗೆ ಲಂಚ ನೀಡಿ ಮುಂಬಡ್ತಿ ಪಡೆದಿದ್ದಾರೆಂದು ಹೇಳಿಕೆ ನೀಡಿದ್ದರು. ಈ ಆರೋಪಗಳು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದವು.

ನಿನ್ನೆಯಷ್ಟೇ ಸಿಸಿಬಿ ಅಧಿಕಾರಿಗಳು ಸ್ನೇಹಮಯಿ ಕೃಷ್ಣರನ್ನು ವಶಕ್ಕೆ ಪಡೆದು ಸುಮಾರು 23 ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದರು. ಅವರು ಬಿಡುಗಡೆ ಮಾಡಿದ ಆಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧರಾಗಿದ್ದ ಸಂದರ್ಭದಲ್ಲೇ ವಶಕ್ಕೆ ಪಡೆಯಲಾಗಿತ್ತು. ಮೈಸೂರಿನ ಎರಡು ಮನೆಗಳು ಹಾಗೂ ಒಂದು ಕಚೇರಿಯ ಮೇಲೂ ದಾಳಿ ನಡೆಸಿ ಕೆಲವು ಪ್ರಮುಖ ದಾಖಲೆಗಳನ್ನು ಸೀಜ್ ಮಾಡಲಾಗಿದೆ.

ವಿಚಾರಣೆ ಬಳಿಕ ಸ್ನೇಹಮಯಿ ಕೃಷ್ಣ, ಆಡಿಯೋ ನಿಜವಾದದ್ದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಶಾಲಿನಿ ರಜನೀಶ್ ವಿರುದ್ಧ ಮಾಡಿದ್ದ ಲಂಚದ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಮುಡಾ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಮಾಡಿದ ಆರೋಪ ಮಾತ್ರ ಸರಿಯೇ ಇದೆ ಎಂದು ತಿಳಿಸಿದ್ದಾರೆ. ನಟೇಶ್ ಮತ್ತು ವಿನೋದ್ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು. ಈ ವಿಷಯದಲ್ಲಿ ತಮ್ಮನ್ನು ಬಳಸಿಕೊಳ್ಳಲು ಪ್ರಯತ್ನ ಮಾಡಲಾಗಿತ್ತು ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಪ್ರಕರಣ ಸಂಬಂಧ ಸಿಸಿಬಿ ತನಿಖೆ ಮುಂದುವರಿದಿದೆ.

ರಾಜ್ಯ ರಾಜಕೀಯ ಗೊಂದಲ: ಶೀಘ್ರ ಅಂತಿಮ ನಿರ್ಧಾರ ಸಾಧ್ಯತೆ – ಸತೀಶ್ ಜಾರಕಿಹೊಳಿ

0

ನವದೆಹಲಿ: ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಗೊಂದಲಗಳಿಗೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕರು ತಾರ್ಕಿಕ ನಿರ್ಧಾರಕ್ಕೆ ಬಂದಿದ್ದಾರೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ಜೊತೆಗೆ ಭೇಟಿ ಮಾಡಿ ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡಿದ್ದು, ಗೊಂದಲಗಳನ್ನು ಶೀಘ್ರ ಇತ್ಯರ್ಥ ಪಡಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಹೈಕಮಾಂಡ್ ಶೀಘ್ರ ಗೊಂದಲ ಪರಿಹಾರ ಮಾಡುವ ಭರವಸೆ ನೀಡಿದೆ. ಮುಖ್ಯಮಂತ್ರಿ ಬದಲಾವಣೆ ಅಥವಾ ಇತರೆ ಯಾವುದೇ ನಿರ್ಧಾರ ಕುರಿತಾಗಿ ಸ್ಪಷ್ಟ ಮಾಹಿತಿ ಇಲ್ಲ. ಒಟ್ಟಿನಲ್ಲಿ ಅಂತಿಮ ತೀರ್ಮಾನಕ್ಕೆ ಬರಬೇಕು ಎಂದು ತಿಳಿಸಿದ್ದೇವೆ. ಆದಷ್ಟು ಬೇಗ ಎಲ್ಲವೂ ಸರಿಯಾಗುವ ವಿಶ್ವಾಸವಿದೆ ಎಂದು ಜಾರಕಿಹೊಳಿ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸ್ಕ್ಯಾನಿಂಗ್ ಸಮಸ್ಯೆ: ಪರ್ಯಾಯ ವ್ಯವಸ್ಥೆ, ರೋಗಿಗಳಿಗೆ ತೊಂದರೆ ಇಲ್ಲ – ಸಚಿವ ದಿನೇಶ್ ಗುಂಡೂರಾವ್

0

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನಿಂಗ್ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ 13 ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸಂಬಂಧಿತ ತೊಂದರೆ ಉಂಟಾಗಿದೆ. ಈಗಾಗಲೇ ಎಲ್ಲೆಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರೊಸೆಸರ್ ಸಮಸ್ಯೆ ಇಂದೇ ಪರಿಹಾರವಾಗಲಿದೆ. ಎಂಆರ್‌ಐ ಮತ್ತು ಸಿಟಿ ಸ್ಕ್ಯಾನಿಂಗ್ ಸೇವೆಗಳು ನಿರಂತರವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸಂಬಂಧಿತ ಕಂಪನಿ 140 ಕೋಟಿ ರೂಪಾಯಿ ಪಾವತಿಸಬೇಕೆಂದು ಕೇಳಿದೆ. ಆದರೆ ಸರ್ಕಾರದ ಲೆಕ್ಕಾಚಾರ ಪ್ರಕಾರ 10ರಿಂದ 15 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ನ್ಯಾಯಸಮ್ಮತ ಹಣವನ್ನು ಮಾತ್ರ ಪಾವತಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ವಿಪಕ್ಷ ನಾಯಕರು ಖಾಸಗಿ ಕಂಪನಿಗೆ ಬೇಕಾದಷ್ಟು ಹಣ ನೀಡಬೇಕು ಎಂದು ಹೇಳುವುದು ಸರಿಯಲ್ಲ. ಅಶೋಕ್ ಹಾಗೂ ಬಿಜೆಪಿ-ಜೆಡಿಎಸ್ ಯಾರ ಪರ ಇದ್ದಾರೆ ಎಂದು ಸ್ಪಷ್ಟಪಡಿಸಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು ಹೋಂ ಸ್ಟೇಯಲ್ಲಿ ಯುವತಿ ಅನುಮಾನಾಸ್ಪದ ಸಾವು: ನಾಲ್ಕು ತಿಂಗಳ ಬಳಿಕ ಮಾಲೀಕನ ವಿರುದ್ಧ ಎಫ್‌ಐಆರ್‌ ದಾಖಲು

0

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಭಾಗದ ಹೋಂಸ್ಟೇ ದುರಂತ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಐಟಿ ಉದ್ಯೋಗಿ ರಂಜಿತಾ ಸಾವಿಗೆ ಸಂಬಂಧಿಸಿ ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಕ್ಟೋಬರ್ 25ರಂದು ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಂಜಿತಾ, ಹೋಂಸ್ಟೇ ಬಾತ್‌ರೂಮ್‌ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಆಕೆಯ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.

ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ ಅನಿಲ ಸೋರಿಕೆಯೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಬಾತ್‌ರೂಮ್‌ನಲ್ಲಿ ಸೂಕ್ತ ಗಾಳಿ ಹರಿವು ವ್ಯವಸ್ಥೆ ಇಲ್ಲದಿರುವುದು ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಕುಟುಂಬಸ್ಥರ ಒತ್ತಾಯದ ಹಿನ್ನೆಲೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದು, ಹೋಂಸ್ಟೇ ಸುರಕ್ಷತಾ ನಿಯಮಗಳ ಉಲ್ಲಂಘನೆ ಬಗ್ಗೆ ಪೊಲೀಸರು ಸವಿಸ್ತಾರ ತನಿಖೆ ಕೈಗೊಂಡಿದ್ದಾರೆ.

ಖರ್ಗೆ ಭರವಸೆ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ; ಬಹಳ ಸಂತೋಷ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭರವಸೆ ನೀಡಿದ್ದಾರೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ‘ಬಹಳ ಸಂತೋಷ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾ ಪ್ರತಿಕ್ರಿಯೆ ನೀಡಿದರು. ಇನ್ನು ಸಿಎಂ ಅವರ ಲೇಖನ ಹಾಗೂ ಟ್ವಿಟರ್ ಪೋಸ್ಟ್ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದರು.

ಬಾಗಲಕೋಟೆ ಗಲಭೆ ಬಗ್ಗೆ ಕೇಳಿದಾಗ, “ನಿರಂತರ ಸಭೆಗಳ ಬಳಿಕ ಅಸ್ಸಾಂನಿಂದ ನಿನ್ನೆ ತಡ ರಾತ್ರಿ ನಾನು ಬೆಂಗಳೂರಿಗೆ ಮರಳಿದ್ದೇನೆ. ಬಹಳ ಆಯಾಸವಾಗಿದೆ. ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ” ಎಂದು ಹೇಳಿದರು.

ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ದು, ಪರಿಹಾರ ನೀಡಲಾಗುವುದೇ ಎಂದು ಕೇಳಿದಾಗ, “ಈ ಬಗ್ಗೆ ಅಧಿಕಾರಿಗಳು ನಮಗೆ ವರದಿ ನೀಡಲಿದ್ದು, ನಂತರ ತೀರ್ಮಾನ ಮಾಡುತ್ತೇವೆ” ಎಂದರು. ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ನಾನು ಒಂದು ರೂ. ಅನುದಾನ ಕೇಳಿಲ್ಲ ಎಂಬ ಶಾಸಕ ಧೀರಜ್ ಮುನಿರಾಜು ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಮುಂದೆ ಮಾತನಾಡೋಣ” ಎಂದರು.

ಪ್ರೇಮಕ್ಕೆ ಪಲ್ಟಿಯಾದ ಕಾರು: ಮದುವೆಗಾಗಿ ಬಂದ ಯುವಕ ಆಸ್ಪತ್ರೆಗೆ, ಯುವತಿ ಎಸ್ಕೇಪ್

0

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ತಾಂಡಾ ಬಳಿ ವಿಚಿತ್ರ ಪ್ರೇಮ ಪ್ರಕರಣವೊಂದು ಅಪಘಾತದ ಮೂಲಕ ಹೊಸ ತಿರುವು ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇರ್ಫಾನ್ ಮತ್ತು ಹಿರೇಕೆರೂರು ಮೂಲದ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಲು ತೀರ್ಮಾನಿಸಿದ್ದರು. ಯುವತಿ ಜಾತ್ರೆಗಾಗಿ ಊರಿಗೆ ಬಂದಿದ್ದ ಸಂದರ್ಭದಲ್ಲಿ, ಇರ್ಫಾನ್ ತನ್ನ ಸ್ನೇಹಿತರೊಂದಿಗೆ ಬಾಡಿಗೆ ಕಾರಿನಲ್ಲಿ ತೆರಳಿ ಆಕೆಯನ್ನು ಕರೆದುಕೊಂಡು ಹೋಗಲು ಮುಂದಾಗಿದ್ದ.

ಬೆಂಗಳೂರು ಕಡೆ ಪ್ರಯಾಣಿಸುವಾಗ ಕಾರು ವೇಗವಾಗಿ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಇರ್ಫಾನ್ ಹಾಗೂ ಇಬ್ಬರು ಸ್ನೇಹಿತರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ಯುವತಿ ಮಾತ್ರ ಗಾಯಗಳಿಲ್ಲದೆ ಪಾರಾಗಿ, ಸ್ಥಳದಲ್ಲಿದ್ದ ಜನರಿಂದ ಲಿಫ್ಟ್ ಪಡೆದು ಬಳಿಕ ಬಸ್ ಮೂಲಕ ಬೆಂಗಳೂರಿಗೆ ತೆರಳಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ಕುರಿತು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Big Breaking news-5 ಲಕ್ಷ ಲಂಚ ಸ್ವೀಕಾರ ವೇಳೆ “ಲೋಕಾ” ದಾಳಿ: BJP ಶಾಸಕ ಚಂದ್ರು ಲಮಾಣಿ ಸೇರಿ ಮೂವರು ವಶಕ್ಕೆ!

0

ಗದಗ: ಲೋಕಾಯುಕ್ತ ಅಧಿಕಾರಿಗಳು 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸೇರಿದ ಎಂದು ಹೇಳಲಾಗಿರುವ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಈ ದಾಳಿ ನಡೆದಿದೆ.

ಗುತ್ತಿಗೆದಾರ ಗದಗ ತಾಲೂಕಿನ ಚಿಂಚಲಿ ಗ್ರಾಮದ ವಿಜಯ ತಂದೆ ಸಣ್ಣಹನಮಪ್ಪ ಪೂಜಾರ ಅವರಿಂದ 5 ಲಕ್ಷ ರೂಪಾಯಿ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಂಚ ಬೇಡಿಕೆ ಆರೋಪ

ಗುತ್ತಿಗೆದಾರ ವಿಜಯ್ ತಂದೆ ಸಣ್ಣಹನಮಂತಪ್ಪ ಪೂಜಾರ (ವಯಸ್ಸು 35, ಚಿಂಚಲಿ, ತಾ. ಗದಗ) ಅವರಿಗೆ ಶಿರಹಟ್ಟಿ ತಾಲೂಕಿನ ದೇವಿಹಾಳ ಗ್ರಾಮದ ಹಳ್ಳದ 2-ಚೆಕ್ ಡ್ಯಾಂ ಹಾಗೂ ತಡೆಗೋಡೆ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರತಿ ಕಾಮಗಾರಿಗೆ ₹48 ಲಕ್ಷ ಮೌಲ್ಯದಂತೆ 12% ಹಣ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಒಟ್ಟು ₹1 ಕೋಟಿ ಅನುದಾನದಲ್ಲಿ ನಡೆಯುವ ಈ ಕಾಮಗಾರಿಗೆ ಮುಂಗಡವಾಗಿ ₹5 ಲಕ್ಷ ನೀಡಲು ಹೋದಾಗ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದರೆಂದು ತಿಳಿದು ಬಂದಿದೆ. ದಾಳಿಯ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಶಾಸಕರ ಖಾಸಗಿ ಆಪ್ತ ಕಾರ್ಯದರ್ಶಿ ಗುರು ಲಮಾಣಿ ಹಾಗೂ ಸರಕಾರಿ ಆಪ್ತ ಕಾರ್ಯದರ್ಶಿ ಮಂಜುನಾಥ್ ವಾಲ್ಮೀಕಿ ಇವರು ಸ್ಥಳದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಮಂಜೂರಾದ ಕಾಮಗಾರಿ ವಿವರ

ಈ ಕಾಮಗಾರಿ ಧಾರವಾಡದ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿದ್ದು, ₹1 ಕೋಟಿ ರೂ. ಅನುದಾನದಲ್ಲಿ ಕಾರ್ಯನಿರ್ವಹಣೆಯಾಗುತ್ತಿದೆ.

ದಾಳಿಯಲ್ಲಿ ಧಾರವಾಡ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ , ಗದಗ ಲೋಕಾಯುಕ್ತ ಡಿವೈಎಸ್ಪಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.ಈ ಘಟನೆ ಶಿರಹಟ್ಟಿ ಕ್ಷೇತ್ರದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ತನಿಖೆಯ ಬಳಿಕ ಹೆಚ್ಚಿನ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.

ಶಾಸಕ ಡಾ. ಚಂದ್ರು ಲಮಾಣಿ ಸರ್ಕಾರಿ ಪಿಎ ಮಂಜುನಾಥ ವಾಲ್ಮೀಕಿ ಹಾಗೂ ಖಾಸಗಿ ಪಿಎ ಗುರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

4.5 ಲಕ್ಷ ರೂ. ಪತ್ತೆ

ಶಾಸಕರಿಗೆ ಸೇರಿದ್ದೆಂದು ತಿಳಿದುಬಂದ ಬಾಲಾಜಿ ಆಸ್ಪತ್ರೆಯ ಕೆಳಮಹಡಿಯಲ್ಲಿ 4.5 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

50 ಸಾವಿರ ರೂ. ಕಾಗದ ಬಂಡಲ್‌ನಲ್ಲಿ ಎಸೆದ ಪಿಎ

ದಾಳಿಯ ಸಂದರ್ಭದಲ್ಲಿ ಶಾಸಕರ ಪಿಎ 50 ಸಾವಿರ ರೂ. ಹಣವನ್ನು ಕಾಗದದ ಬಂಡಲ್‌ನಲ್ಲಿ ಹಾಕಿ ಸಮೀಪದ ಖಾಸಗಿ ಶಾಲೆ ಬಳಿ ಎಸೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಲೋಕಾಯುಕ್ತ ಅಧಿಕಾರಿಗಳು ಪಿಎ ಎಸೆದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಬಾಲಾಜಿ ಆಸ್ಪತ್ರೆ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು,

  • 3 ಸಿಪಿಐ
  • 3 ಪಿಎಸ್ಐ
  • 1 ಡಿಆರ್ ತುಕಡಿ
  • ಸೇರಿ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದು, ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಾನ್ಸ್‌ಟೇಬಲ್‌ ಕಿರುಕುಳ ಆರೋಪ: ಮಹಿಳೆ ಆತ್ಮಹತ್ಯೆ! ದೂರು ದಾಖಲು

0

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾನ್ಸ್‌ಟೇಬಲ್‌ನ ಕಿರುಕುಳಕ್ಕೆ ಬೇಸತ್ತು ಈ ದುರ್ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

ಮಹಿಳೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಆಕೆಗೆ ನಿರಂತರವಾಗಿ ತೊಂದರೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಮೃತಳ ತಾಯಿ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಫೇಸ್‌ಬುಕ್ ಹಾಗೂ ಮೆಸೇಂಜರ್ ಮೂಲಕ ನಿರಂತರ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದನೆಂದು, ಬ್ಲಾಕ್ ಮಾಡಿದ ಬಳಿಕವೂ ಬೇರೆ ಖಾತೆಗಳಿಂದ ಸಂಪರ್ಕಿಸುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.ಮೃತದೇಹದ ಮರಣೋತ್ತರ ಪರೀಕ್ಷೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಪೂರ್ಣಗೊಂಡಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

ರೌಡಿಶೀಟರ್ ಜೊತೆ ಸೇರಿ ಕೊಲೆ ಕೇಸ್ ಮುಚ್ಚಿಹಾಕಲು ಇನ್​ಸ್ಪೆಕ್ಟರ್ ಪ್ಲಾನ್ ಆರೋಪ

0

ಬೆಂಗಳೂರು: ವರ್ತೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಯೋಗಾನಂದ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ರೌಡಿಶೀಟರ್ ಗ್ಯಾಂಗ್ ಜೊತೆ ಶಾಮೀಲಾಗಿ ಕೊಲೆ ಪ್ರಕರಣದ ತನಿಖೆಗೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದಡಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

2024ರ ಸೆಪ್ಟೆಂಬರ್ 18ರಂದು ತಮಿಳುನಾಡಿನ ಬಾಗಲೂರಿನಲ್ಲಿ ನಡೆದ ರೇವಂತ್ ಹತ್ಯೆ ಪ್ರಕರಣದಲ್ಲಿ ಈ ಆರೋಪಗಳು ಕೇಳಿಬಂದಿವೆ. 24 ವರ್ಷದ ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್ ಅವರನ್ನು ರೌಡಿಶೀಟರ್ ರೇವಾ ಮತ್ತು ಗ್ಯಾಂಗ್ ಸದಸ್ಯರು ಭೀಕರವಾಗಿ ಹತ್ಯೆ ಮಾಡಿದ್ದರು.

ರೇವಂತ್ ತನ್ನ ಸ್ನೇಹಿತ ಸ್ಟಾಲಿನ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ದೂರು ದಾಖಲಿಸಲು ಸಹಕರಿಸಿದ್ದ. ಇದರಿಂದ ಕೋಪಗೊಂಡ ರೌಡಿಶೀಟರ್ ಗ್ಯಾಂಗ್, ರಾಜಿ ಮಾತುಕತೆ ನೆಪದಲ್ಲಿ ಕರೆಸಿ ಚಿಕ್ಕಪ್ಪನ ಎದುರೇ ರೇವಂತ್ ಅನ್ನು ಹತ್ಯೆ ಮಾಡಿತ್ತು ಎಂದು ಆರೋಪಿಸಲಾಗಿದೆ.

ಪ್ರಕರಣವನ್ನು ತಮಿಳುನಾಡು ಪೊಲೀಸರು ವರ್ಗಾವಣೆ ಮಾಡಿದ ಬಳಿಕ ತನಿಖೆ ನಡೆಸಿದ ವರ್ತೂರು ಪೊಲೀಸರು 90 ದಿನಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಪರಿಣಾಮವಾಗಿ ಜೈಲಿನಲ್ಲಿದ್ದ ಏಳು ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಹೊರಬಂದಿದ್ದಾರೆ.

ಜಾಮೀನಿನ ಷರತ್ತಿನಂತೆ ರೇವಾ ಪ್ರತಿದಿನ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಿತ್ತು. ಆದರೆ, ಇನ್ಸ್‌ಪೆಕ್ಟರ್ ಪ್ರಭಾವದಿಂದ ಪೊಲೀಸರೇ ಅಪಾರ್ಟ್‌ಮೆಂಟ್‌ಗೆ ತೆರಳಿ ಸಹಿ ಪಡೆಯುತ್ತಿದ್ದಾರೆ ಎಂಬ ಆರೋಪ ಸಂತ್ರಸ್ತ ಕುಟುಂಬ ಮಾಡಿದೆ. ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

error: Content is protected !!