-
ವಿಜಯಸಾಕ್ಷಿ ಸುದ್ದಿ, ಗದಗ: ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಪ್ರಸ್ತುತಪಡಿಸುವ `ಹಾವೇರಿ ಸಂಸದ ಕ್ರೀಡಾ ಮಹೋತ್ಸವ 2025-26’ನ್ನು ಗ್ರಾಮೀಣ ಪ್ರದೇಶದ ಯುವಜನತೆಗೆ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸಲು ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಗೂ ಪ್ರತಿ ಸಂಸದರು ಕೂಡಾ ತಮ್ಮ ಲೋಕಸಭಾ ವ್ಯಾಪ್ತಿಯಲ್ಲಿನ ಮಕ್ಕಳಿಗೆ ಮತ್ತು ಯುವಜನತೆಗೆ ಕ್ರೀಡೆಗಳಲ್ಲಿ ಪ್ರೋತ್ಸಾಹ ನೀಡಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಲೋಕಸಭಾ ವ್ಯಾಪ್ತಿಯಲ್ಲಿ ಸಂಸದ ಕ್ರೀಡಾ ಮಹೋತ್ಸವವನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಘಟಿಸಲು ಸೂಚಿಸಿದೆ.
ಸಂಸದ ಕ್ರೀಡಾ ಮಹೋತ್ಸವವನ್ನು ತಾಲೂಕು ಮಟ್ಟದಲ್ಲಿ ಗದಗ ಜಿಲ್ಲೆಯ 7 ತಾಲೂಕುಗಳಲ್ಲಿ ಆಯೋಜಿಸಲಾಗುತ್ತಿದ್ದು, ಗದಗ ತಾಲೂಕಿನಲ್ಲಿ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ರೋಣ ತಾಲೂಕಿನಲ್ಲಿ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣ, ಶಿರಹಟ್ಟಿ ತಾಲೂಕಿನಲ್ಲಿ ಎಫ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣ, ಮುಂಡರಗಿ ತಾಲೂಕಿನಲ್ಲಿ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣ, ನರಗುಂದ ತಾಲೂಕಿನಲ್ಲಿ ತಾಲೂಕು ಕ್ರೀಡಾಂಗಣ, ಲಕ್ಷೆö್ಮÃಶ್ವರ ತಾಲೂಕಿನಲ್ಲಿ ಉಮಾ ಮಹಾವಿದ್ಯಾಲಯದ ಮೈದಾನ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಎಸ್.ಎಂ. ಭೂಮರೆಡ್ಡಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.
100, 400 ಮೀ ಓಟ, ಗುಂಡು ಎಸೆತ, ಉದ್ದ ಜಿಗಿತ, 4*100 ಮೀಟರ್ ರಿಲೇ ವೈಯಕ್ತಿಕ ಕ್ರೀಡೆಗಳನ್ನು ಹಾಗೂ ಗುಂಪು ಆಟಗಳಾದ ವಾಲಿಬಾಲ್, ಖೋ-ಖೋ ಮತ್ತು ಕಬಡ್ಡಿ, ಮಲ್ಲಕಂಬ (ಜಿಲ್ಲಾ ಮಟ್ಟದಲ್ಲಿ ಮಾತ್ರ) ಆಟಗಳನ್ನು 17ರಿಂದ 25 ವಯೋಮಿತಿಯ ಬಾಲಕ/ಬಾಲಕಿಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗುತ್ತದೆ. ಸದರಿ ಮಹೋತ್ಸವದಲ್ಲಿ ಭಾಗವಹಿಸುವ ಕ್ರೀಡಾಪಟುಗಳು bommಚಿi.bಚಿsಚಿvಚಿಡಿಚಿರಿ@sಚಿಟಿsಚಿಜ.ಟಿiಛಿ.iಟಿ/smಆಗಿhಛಿಕಿvಎ hಣಣಠಿs://sಚಿಟಿsಚಿಜ.ಟಿiಛಿ.iಟಿರಿsmಆಗಿಊಛಿಕಿvರಿ hಣಣಠಿs://sಚಿಟಿsಚಿಜಞheಟmಚಿhoಣsಚಿv.iಟಿ/ ಲಿಂಕ್ ಮುಖಾಂತರ ಕೆಳಕಾಣಿಸಿದ ಕ್ಯೂಆರ್ ಕೋಡ್ ಬಳಸಿ ಜನವರಿ 20ರೊಳಗಾಗಿ ಹೆಸರನ್ನು ನೋಂದಾಯಿಸಿ ಭಾಗವಹಿಸುವುದು ಕಡ್ಡಾಯವಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರಣು ಗೋಗೇರಿ ತಿಳಿಸಿದ್ದಾರೆ.
ನಿಗದಿತ ಸಮಯಕ್ಕೆ ಹಾಜರಿದ್ದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಕ್ರೀಡಾಪಟುಗಳು ಒಂದೇ ತಾಲೂಕಿನ ಒಂದೇ ಊರಿನ ಆಟಗಾರರಾಗಿರಬೇಕು. ಮದ್ಯ/ಮಾದಕ ವಸ್ತುಗಳನ್ನು ಸೇವಿಸಿದ ಆಟಗಾರರ ತಂಡವನ್ನು ಕೂಡಲೇ ನಿಷೇಧಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮಂಜುನಾಥ ಬಾಗಡೆ, ಹಾಕಿ ತರಬೇತುದಾರರು ಮೊಬೈಲ್ ನಂ-9036533909, ವಿದ್ಯಾ ಕುಲಕರ್ಣಿ, ಸೈಕ್ಲಿಂಗ್ ತರಬೇತುದಾರರು, ಮೊಬೈಲ್ ನಂ-8951936636, ಸುರೇಶ ಸಂಗಮದ, ಮೊಬೈಲ್ ನಂ-9060703554 ಇವರನ್ನು ಸಂಪರ್ಕಿಸಬಹುದಾಗಿದೆ.
ಒಂದು ತಾಲೂಕಿನಲ್ಲಿ ಆಡಿದ ಕ್ರೀಡಾಪಟುಗಳು ಇನ್ನೊಂದು ತಾಲೂಕಿನಲ್ಲಿ ಆಡಲು ಅವಕಾಶ ಇರುವುದಿಲ್ಲ. 17ರಿಂದ 25 ವರ್ಷದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿರುತ್ತದೆ. ತಾಲೂಕು ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಮೂಲ ಆಧಾರ್ ಕಾರ್ಡ್ ಕಡ್ಡಾಯವಾಗಿ ಹಾಜರಪಡಿಸಬೇಕು. ಖೋಖೋ, ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಗಳನ್ನು ಮಣ್ಣಿನ ಮೈದಾನದಲ್ಲಿ ಆಡಿಸಲಾಗುವುದು. ಎಲ್ಲಾ ಕ್ರೀಡೆಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಭಾಗವಹಿಸಲು ಅವಕಾಶವಿರುತ್ತದೆ. ನಿರ್ಣಾಯಕರ ನಿರ್ಣಯವೇ ಅಂತಿಮ ನಿರ್ಣಯವಾಗಿರುತ್ತದೆ.
ತಾಲೂಕು, ಜಿಲ್ಲಾ ಮಟ್ಟದಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ | ನೋಂದಣಿಗೆ ಜ. 20 ಕೊನೆಯ ದಿನ
ಯಕೃತ್ ರೋಗದ ಬಗ್ಗೆ ಮುಂಜಾಗ್ರತೆಯಿರಲಿ
ವಿಜಯಸಾಕ್ಷಿ ಸುದ್ದಿ, ಗದಗ:ಯಕೃತ್ ರೋಗ ಉತ್ತರ ಕರ್ನಾಟಕದಾದ್ಯಂತ ನಿಶ್ಯಬ್ದವಾಗಿ ಹರಡುತ್ತಿದೆ. ವಯಸ್ಕರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದ್ದು, ಸಕಾಲದ ಪತ್ತೆ ಮತ್ತು ಚಿಕಿತ್ಸೆ ಅಗತ್ಯ, ಮುಂಜಾಗ್ರತೆ ವಹಿಸಬೇಕು ಎಂದು ಡಾ. ಜಯಂತ ರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಕೃತ್ ರೋಗಗಳು ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ಮದ್ಯಪಾನ ಸಂಬಂಧಿತ ಯಕೃತ್ ರೋಗಗಳು ಮತ್ತು ಚಯಾಪಚಯ ಸಂಬಂಧಿತ ಕೊಬ್ಬಿನ ಯಕೃತ್ ರೋಗ ಈ ಸಮಸ್ಯೆಗಳ ಪ್ರಮುಖ ಕಾರಣಗಳಾಗಿವೆ. ಬಹುಕಾಲ ಮದ್ಯ ಸೇವಿಸುವ ಅನೇಕರಲ್ಲಿ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣದೆಯೇ ಯಕೃತ್ ಹಾನಿಗೊಳಗಾಗುತ್ತದೆ. ಅಧ್ಯಯನಗಳ ಪ್ರಕಾರ, ಯಕೃತ್ ರೋಗಗಳು ಸಾಮಾನ್ಯವಾಗಿ 10-15 ವರ್ಷಗಳ ಕಾಲ ಅಗೋಚರವಾಗಿಯೇ ಬೆಳೆಯುತ್ತವೆ. ಕೊಬ್ಬಿನ ಯಕೃತ್ ಹೊಂದಿರುವ ಶೇ. 30ಕ್ಕಿಂತಲೂ ಹೆಚ್ಚಿನ ರೋಗಿಗಳು ಮೊದಲ ಮೌಲ್ಯಮಾಪನದ ಸಮಯದಲ್ಲೇ ಫೈಬ್ರೋಸಿಸ್ಗೆ ತುತ್ತಾಗಿರುತ್ತಾರೆ. ಇದರ ಪರಿಣಾಮವಾಗಿ, ಅನೇಕರು ವೈದ್ಯಕೀಯ ಸಲಹೆಯನ್ನು ವಿಳಂಬಿಸಿ, ರೋಗವು ಸಿರೋಸಿಸ್ ಹಂತಕ್ಕೆ ಮುಂದುವರಿದ ನಂತರವೇ ಚಿಕಿತ್ಸೆಗೆ ಮುಂದಾಗುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೊಬ್ಬಿನ ಯಕೃತ್ ರೋಗವು ಹೆಚ್ಚುತ್ತಿದೆ. ಆತಂಕಕಾರಿ ಸಂಗತಿಯೆಂದರೆ, ಯಕೃತ್ ಸಮಸ್ಯೆಗಾಗಿ ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಶೇ. 55-60ರಷ್ಟು ಜನರಿಗೆ ಈ ರೋಗ ಕಂಡುಬಂದಿದ್ದು, ಮದ್ಯ ಸೇವಿಸದವರೂ ಇದರಲ್ಲಿ ಸೇರಿದ್ದಾರೆ. ಯಕೃತ್ ರೋಗಗಳು ಸಾಮಾನ್ಯವಾಗಿ ಯಾವುದೇ ಎಚ್ಚರಿಕೆಯ ಲಕ್ಷಣಗಳಿಲ್ಲದೆ ಬೆಳೆಯುತ್ತವೆ. ಬೊಜ್ಜು, ಮಧುಮೇಹ, ರಕ್ತದೊತ್ತಡ ಹೆಚ್ಚಳ, ಕೊಲೆಸ್ಟೆರಾಲ್ ಅಸಮತೋಲನದಿಂದ ಈ ರೋಗ ಹರಡುತ್ತಿದೆ. ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ತಜ್ಞರು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಬಲೇಶ್ವರ ಕಲ್ಕಣಿ ಸೇರಿದಂತೆ ಇತರರು ಇದ್ದರು.
ಜನಪರ ಕಾರ್ಯಗಳಿಗಾಗಿ ಹಗಲಿರುಳು ಶ್ರಮಿಸುವೆ:ಯುವ ನಾಯಕ ಮಿಥುನ್ ಜಿ. ಪಾಟೀಲ್
ವಿಜಯಸಾಕ್ಷಿ ಸುದ್ದಿ, ರೋಣ: ಜನಸೇವೆಯ ಮೂಲಕ ರೋಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಜನಸಾಮಾನ್ಯರ ಸೇವೆ ಮಾಡಿ ಸರಳತೆಯ ವ್ಯಕ್ತಿತ್ವ ಹೊಂದಿರುವ ಮಿಥುನ್ ಜಿ. ಪಾಟೀಲರು ಜನಾನುರಾಗಿಯಾಗಿದ್ದಾರೆ ಎಂದು ಯುವ ಮುಖಂಡ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಹೇಳಿದರು.
ರೋಣ ನಗರದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆದ ಜನನಾಯಕ ಮಿಥುನ್ ಜಿ. ಪಾಟೀಲರ 48ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ಈಗಾಗಲೇ ರೋಣ ಮತಕ್ಷೇತ್ರದ ಡಂಬಳ ಹೋಬಳಿಯಲ್ಲಿ ಸಿಂಗಟಾಲೂರ ಏತ ನೀರಾವರಿ ಯೋಜನೆ ಜಾರಿಗೊಳಿಸಿ ರೈತರ ಕಷ್ಟ ದೂರ ಮಾಡಿದ ಶಾಸಕ ಜಿ.ಎಸ್. ಪಾಟೀಲರ ಕಾರ್ಯ ಅವರ ಹೆಸರನ್ನು ಅಜರಾಮರವಾಗಿಸಿದೆ. ಜನ ಸಾಮಾನ್ಯರ ಕಷ್ಟ ಅರಿತು, ಬಡವರು, ದೀನ ದಲಿತರ ಬಗ್ಗೆ ಕಾಳಜಿ ಹೊಂದಿದ ಪಾಟೀಲ ಕುಟುಂಬದ ಜನಪರ ಕೆಲಸಗಳು ಈ ಕ್ಷೇತ್ರಕ್ಕೆ ಮಾದರಿಯಾಗಿದೆ. ಜಿ.ಎಸ್. ಪಾಟೀಲ ಹಾದಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಯುವ ನಾಯಕ ಮಿಥುನ್ ಜಿ. ಪಾಟೀಲರಿಗೆ ಮುಂಬರುವ ದಿನಮಾನಗಳಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನಮಾನಗಳು ಲಭಿಸಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಿಥುನ್ ಜಿ. ಪಾಟೀಲ, ನಮ್ಮ ತಂದೆಯವರ ಇಚ್ಛೆಯಂತೆ ಬಡವರ, ಹಿಂದುಳಿದವರ, ರೈತರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು. ಜನ್ಮದಿನದ ನಿಮಿತ್ತ ಆರೋಗ್ಯ ರಕ್ತದಾನ ಶಿಬಿರ ಸೇರಿದಂತೆ ಸಂಗೀತ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ವಿ.ಬಿ. ಸೋಮನಕಟ್ಟಿಮಠ, ಬಸವರಾಜ ನವಲಗುಂದ, ಯೂಸುಫ್ ಇಟಗಿ, ಅಭಿಷೇಕ ನವಲಗುಂದ, ಮುತ್ತುರಾಜ ನವಲಗುಂದ, ಗೋಪಿ ರಾಯನಗೌಡರ, ಬಸವರಾಜ ಪೂಜಾರ, ಹಾಲಪ್ಪ ಡೊಳ್ಳಿನ, ಅನಿಲಕುಮಾರ ಪಲ್ಲೇದ, ಬಸವರಾಜ ಕುಸಗಲ್, ಸಿದ್ದಪ್ಪ ಹಡಪದ, ಫಕ್ಕಿರಪ್ಪ ಕರಿಗಾರ ಸೇರಿದಂತೆ ರೋಣ ಮತಕ್ಷೇತ್ರದ ಸಾವಿರಾರು ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಪರಹಿತ ಚಿಂತನೆಯಿಂದ ಜೀವನ ಸಾರ್ಥಕ: ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಶ್ವರವಾದ ಮನುಷ್ಯ ಜೀವನದ ಮುಖ್ಯ ಉದ್ದೇಶ ಸ್ವಾರ್ಥರಹಿತವಾದ ಪರಹಿತ ಚಿಂತನೆ ಹಾಗೂ ಪರೋಪಕಾರದಿಂದ ಜೀವನ ಸಾರ್ಥಕತೆ ಹೊಂದುತ್ತದೆ ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದರು.
ಅವರು ಶುಕ್ರವಾರ ಹೂವಿನಶಿಗ್ಲಿ ಮಠದ ಜಾತ್ರಾ ಮಹೋತ್ಸವ ಹಾಗೂ ಲಿಂ. ನಿರಂಜನ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಅಂಗವಾಗಿ ನಡೆದ `ಮಹಾತ್ಮರ ಬದುಕು-ಬೆಳಕು’ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸೇವಾಹೀ ಪರಮೋ ಧರ್ಮ ಎನ್ನುವಂತೆ ನಿಸ್ವಾರ್ಥ ಸೇವೆ ಬದುಕಿನ ಅಂಗವಾದಾಗ ಶ್ರೇಷ್ಠ ಬದುಕು ನಮ್ಮದಾಗುತ್ತದೆ. ಸಮಾಜ ನಮಗೇನು ನೀಡಿದೆ ಎಂಬ ಪ್ರಶ್ನೆಗಿಂತ ಸಮಾಜಕ್ಕೆ ನಾವೇನು ಕೊಡುಗೆ ಕೊಟ್ಟಿದ್ದೇವೆ ಎಂಬ ಆತ್ಮವಿಮರ್ಶೆ ನಮ್ಮದಾಗಬೇಕು. ಪುಣ್ಯದ ಕೆಲಸ ಮಾಡಿವರು ಪುಣ್ಯಾತ್ಮರು, ಮಹಾತ್ಮರು ಆಗಿ ಅಳಿದ ನಂತರವೂ ಜನಮಾನಸದಲ್ಲಿ ಪರಮಾತ್ಮರಾಗಿ ಉಳಿಯುತ್ತಾರೆ. ಪಾಪಿಗಳು ಈ ಲೋಕದಿಂದ ಕಣ್ಮರೆಯಾಗುತ್ತಾರೆ. ಈ ಪುಣ್ಯ ಭೂಮಿಗೆ ನಾವು ಏನೂ ನೀಡುತ್ತೇವೆಯೋ ಅದನ್ನೇ ಮತ್ತೆ ಪಡೆಯುತ್ತೇವೆ. ಅದು ಉಪಕಾರ, ಸ್ನೇಹ, ಪ್ರೀತಿ, ಅನುಕಂಪ ಏನೇ ಒಳ್ಳೆಯದ್ದಾಗಿರಲಿ ಯಾವುದೇ ರೂಪದಲ್ಲಿ ಸತ್ಫಲವನ್ನೇ ನೀಡುತ್ತದೆ.
ನಮ್ಮ ಬದುಕಿನ ರೀತಿಯಿಂದ ಬದುಕು ಅರ್ಥಪೂರ್ಣವಾಗುತ್ತದೆ. ಸಮಾಜಕ್ಕೆ ನಮ್ಮ ನೆಲದ ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿ, ಧರ್ಮ ಮಾರ್ಗ ಮತ್ತು ಮಠಮಾನ್ಯಗಳ ಸತ್ಸಂಗದೊಂದಿಗೆ ಸಾತ್ವಿಕ ಜೀವನಕ್ಕೆ ಒಗ್ಗಿಕೊಳ್ಳಬೇಕು. ಹೂವಿನಶಿಗ್ಲಿಯ ಲಿಂ. ನಿರಂಜನ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಚನ್ನವೀರ ಸ್ವಾಮಿಗಳು ಸಮಾಜಮುಖಿ ಕಾರ್ಯದಲ್ಲಿ ಹೆಸರಾಗಿದ್ದು, ಭಕ್ತರು ಅವರ ಕಾರ್ಯಕ್ಕೆ ಸಹಾಯ-ಸಹಕಾರ ನೀಡಬೇಕೆಂದರು ಎಂದರು.
ಹಿರೇಮಾಗಡಿಯ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು, ಕುಂದಗೋಳದ ಬಸವಣ್ಣಜ್ಜನವರು, ರಾಚೋಟೇಶ್ವರ ದೇವರು ಉಪಸ್ಥಿತರಿದ್ದರು. ಶ್ರೀಮಠದ ತ್ರಿವಿಧ ದಾಸೋಹ ಸೇವೆಗೆ ಭಕ್ತಿಕಾಣಿಕೆ ಸಮರ್ಪಿಸಿದ ಸೋನಾಳದ ಲೊಕೇಶ ಹಣಮಶೆಟ್ಟಿ, ಶರಣು ಅಂಗಡಿ, ಮಂಜುನಾಥ ಮಾಗಡಿ ಸೇರಿ ಗಣ್ಯಮಾನ್ಯರು ಉಪಸ್ಥಿತರಿದ್ದರು. ಕೊತಬಾಳದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವ್ಯಾಪಾರಸ್ಥರಿಗೆ ಕಾನೂನು ಅರಿವು ಅತ್ಯಗತ್ಯ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾನೂನು ಎನ್ನುವುದು ಜನಸಾಮಾನ್ಯರಿಂದ ಹಿಡಿದು ಎಲ್ಲರಿಗೂ ಒಂದೇ ಆಗಿದ್ದು, ಕಾನೂನು ತಿಳುವಳಿಕೆ ಇಲ್ಲದೆ ಅನೇಕ ಘಟನೆಗಳು ನಡೆದು ಶಿಕ್ಷೆ ಅನುಭವಿಸುವಂತಾಗುತ್ತದೆ. ಬೀದಿ ಬದಿ ವ್ಯಾಪಾರಸ್ಥರು ಕಾನೂನಿನ ಬಗ್ಗೆ ಅರಿವನ್ನು ಹೊಂದುವುದು ಅವಶ್ಯವಾಗಿದೆ ಎಂದು ದಿವಾಣಿ ನ್ಯಾಯಾಧೀಶ ಸತೀಶ ಎಂ ತಿಳಿಸಿದರು.
ಅವರು ಶನಿವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಡೇ ನಲ್ಮ ಕಾರ್ಯಕ್ರಮದಡಿಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಬೆಂಗಳೂರು, ಜಿಲ್ಲಾ ಆಡಳಿತ ಗದಗ, ಪುರಸಭೆ ಲಕ್ಷ್ಮೇಶ್ವರ ಇವರ ಸಹಯೋಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರು ಸಾರ್ವಜನಿಕರಿಗೆ ತೊಂದರೆ ಆಗದಂತೆ ತಮ್ಮ ವ್ಯಾಪಾರ-ವಹಿವಾಟು ಮಾಡಿಕೊಳ್ಳಬೇಕು. ಪುರಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕಮಿಟಿ ಮಾಡಲಾಗಿರುತ್ತದೆ. ಅದರಲ್ಲಿ ಆರೋಗ್ಯ ಇಲಾಖೆ, ಸರಕಾರದಿಂದ ನಾಮ ನಿರ್ದೇಶನ ಸದಸ್ಯರು ಇರುತ್ತಾರೆ. ಅದಲ್ಲದೆ ಸ್ಥಳೀಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಒಂದು ಕಮಿಟಿಯೂ ಇರುತ್ತದೆ. ಅಲ್ಲಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು, ಉಚಿತ ಕಾನೂನು ಸೇವಾ ಪ್ರಾಧಿಕಾರದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. 5 ವರ್ಷಕ್ಕೊಮ್ಮೆ ಬೀದಿ ಬದಿ ವ್ಯಾಪಾರಸ್ಥರಿಗೆಂದೇ ಕ್ರಿಯಾಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಿದರೆ ಅಲ್ಲಿಂದ ಅನುದಾನ ಪಡೆದುಕೊಳ್ಳಬಹುದು. ಐ.ಡಿ ಕಾರ್ಡ್, ಲೈಸೆನ್ಸ್ ಹೊಂದಿದ್ದರೆ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಎಂದ ಅವರು, ಬೀದಿ ಬದಿ ವ್ಯಾಪಾರಸ್ಥರು ದಿನನಿತ್ಯದಲ್ಲಿ ಬರುವ ಸಮಸ್ಯೆಗಳ ಬಗ್ಗೆ ಕಾನೂನಿನ ಸಾಮಾನ್ಯ ಜ್ಞಾನವನ್ನು ಹೊಂದಿದ್ದರೆ ಅಹಿತಕರ ಘಟನೆಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟಿವ್ಹಿಸಿ ಕಾರ್ಯದರ್ಶಿ ಹಾಗೂ ಸಮುದಾಯ ಸಂಘಟನಾ ಅಧಿಕಾರಿ ಶೋಭಾ ಬೆಳ್ಳಿಕೊಪ್ಪ, ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ, ನ್ಯಾಯಾಂಗ ಇಲಾಖೆಯ ದಿನೇಶ ಎಸ್.ಕೆ, ಪೊಲೀಸ್ ಇಲಾಖೆಯ ಸಂತೋಷ ಸಾತಪುತೆ, ಪುರಸಭೆ ಸಿಬ್ಬಂದಿ ಹನುಮಂತಪ್ಪ ನಂದೆಣ್ಣವರ, ಸಿಆರ್ಪಿಗಳಾದ ಲಕ್ಷ್ಮೀ ಓದು, ಇಂದಿರಾ ಸವಣೂರ ಮುಂತಾದವರಿದ್ದರು.
ವಕೀಲ ಪ್ರಕಾಶ ವಾಲಿ ಮಾತನಾಡಿ, ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರು ಕಾನೂನುಗಳನ್ನು ತಿಳಿದುಕೊಳ್ಳಬೇಕು. ಪುರಸಭೆ ಗುರುತಿಸಿದ ಜಾಗದಲ್ಲಿ ಬಿಟ್ಟು, ಬೇರೆ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ. ಐ.ಡಿ ಕಾರ್ಡ್ ಹಾಕಿಕೊಂಡು ವ್ಯಾಪಾರ ಮಾಡಬೇಕು. ತಮ್ಮ ವ್ಯಾಪಾರದಲ್ಲಿ ಚಿಕ್ಕಮಕ್ಕಳನ್ನು ಬಳಸಿಕೊಳ್ಳುವುದು ಸಹ ಕಾನೂನಿನ ಪ್ರಕಾರ ಅಪರಾಧವಾಗಿದೆ. ಅಲ್ಲದೆ ಆಹಾರ ಪದಾರ್ಥಗಳನ್ನು ಮಾರುವವರು ಅದರ ಗುಣಮಟ್ಟ, ಸ್ವಚ್ಛತೆ ಇತ್ಯಾದಿಗಳ ಬಗ್ಗೆ ಕಾಳಜಿ ವಹಿಸಬೇಕು. ಕಾನೂನು ಮೀರಿ ಯಾರೂ ವರ್ತಿಸಬಾರದು ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಬೇಡ: ಶಾಸಕ ಹೆಚ್.ಸಿ. ಬಾಲಕೃಷ್ಣ
ರಾಮನಗರ: ಸಿಎಂ ಬದಲಾವಣೆ ವಿಚಾರದಲ್ಲಿ ಮೂರನೇ ವ್ಯಕ್ತಿಗಳು ಮೂಗು ತೂರಿಸಬಾರದು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಶಾಸಕ ಹೆಚ್.ಸಿ. ಬಾಲಕೃಷ್ಣ, ಈ ವಿಷಯದಲ್ಲಿ ತಾವು ಮಧ್ಯೆ ತಲೆ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ದೆಹಲಿ ಯಾತ್ರೆ ಕುರಿತು ಪ್ರತಿಕ್ರಿಯಿಸಿದರು. ಡಿಕೆಶಿಗೆ ಅಸ್ಸಾಂ ವಿಧಾನಸಭಾ ಚುನಾವಣೆಯ ಉಸ್ತುವಾರಿ ನೀಡಲಾಗಿದ್ದು, ಅದಕ್ಕೆ ಸಂಬಂಧಿಸಿದ ಚರ್ಚೆಗಾಗಿ ಅವರು ದೆಹಲಿಗೆ ತೆರಳಿದ್ದಾರೆ. ಪಕ್ಷ ಅಂದಮೇಲೆ ನಾನಾ ವಿಚಾರಗಳು ಇರುತ್ತವೆ. ಅವುಗಳ ಬಗ್ಗೆ ಚರ್ಚಿಸಲು ಹೈಕಮಾಂಡ್ ಬಳಿ ಹೋಗುವುದು ಸಹಜ ಎಂದು ಹೇಳಿದರು.
ಸಿಎಂ ಆಯ್ಕೆ ಕುರಿತು ಚರ್ಚೆ ಮಾಡುವಷ್ಟು ನಾವು ದೊಡ್ಡವರಲ್ಲ. ಇದು ನನಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ಗೆ ಬಿಟ್ಟ ವಿಚಾರ. ಈ ಬಗ್ಗೆ ಮೂರನೇ ವ್ಯಕ್ತಿಗಳು ತಲೆ ಹಾಕಬಾರದು ಎಂದು ಡಿಸಿಎಂ ಈಗಾಗಲೇ ಹೇಳಿದ್ದಾರೆ. ಆದ್ದರಿಂದ ಈ ವಿಷಯದಲ್ಲಿ ನಾವು ಮೂಗು ತೂರಿಸುವುದಿಲ್ಲ ಎಂದು ಹೆಚ್.ಸಿ. ಬಾಲಕೃಷ್ಣ ಹೇಳಿದರು.
ಇನ್ನೂ ಸಂಕ್ರಾಂತಿಯ ಬಳಿಕ ನಡೆಯಬಹುದಾದ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈ ಬಗ್ಗೆ ಹೈಕಮಾಂಡ್ ಕೇಳಿದರೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತೇನೆ. ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಒತ್ತಡ ಹಾಕುತ್ತಿಲ್ಲ. ಎಲ್ಲ ನಿರ್ಧಾರಗಳನ್ನು ಹೈಕಮಾಂಡ್ವೇ ಕೈಗೊಳ್ಳುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಲೀಸ್ ಬೇಸ್ಡ್ ಸಿಎಂ’ ಎಂದು ಕುಮಾರಸ್ವಾಮಿ ಮಾಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, ಲೀಸ್ ಬೇಸ್ಡ್ ಸಿಎಂ ಯಾರು ಎಂಬುದನ್ನು ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಅವರು ರಾಜ್ಯ ರಾಜಕಾರಣಕ್ಕಾದರೂ ಬರಲಿ, ಸ್ಥಳೀಯ ಚುನಾವಣೆಗಳಿಗಾದರೂ ಸ್ಪರ್ಧಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ, ಎಲ್ಲಿಯಾದರೂ ಸ್ಪರ್ಧೆ ಮಾಡಬಹುದು ಎಂದು ಟೀಕಿಸಿದರು.
ಮದ್ಯದ ಮಸ್ತಿಯಲ್ಲಿ ಮಧ್ಯ ರಸ್ತೆಯೇ ರಂಗಮಂಚ: ಗದಗದಲ್ಲಿ ಬಸ್ ನಿಲ್ಲಿಸಿ ಕುಡುಕನ ಭಾರೀ ಗಲಾಟೆ
ಗದಗ: ನಗರದ ಮುಳಗುಂದ ನಾಕಾದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ನಡೆಸಿದ ಹೈಡ್ರಾಮಾ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗದಗದಿಂದ ಅಂತೂರು–ಬೆಂತೂರು ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಅನ್ನು ಅಡ್ಡಗಟ್ಟಿ, ಬಸ್ ಮುಂದೆ ಮಲಗಿ, ಬಸ್ ಮುಂದಕ್ಕೆ ಸಾಗದಂತೆ ಅಡ್ಡಿಪಡಿಸಿದ್ದಾನೆ.
ಕಂಠಪೂರ್ತಿ ಕುಡಿದಿದ್ದ ಮಧ್ಯವಯಸ್ಕ, ಬಸ್ನಲ್ಲಿ 53 ಸೀಟ್ಗಳನ್ನು ಹಾಕಿರುವುದೇ ಸಮಸ್ಯೆ ಎಂದು ಕಾರಣ ಹೇಳಿ, ಚಾಲಕ ಮತ್ತು ನಿರ್ವಾಹಕರೊಂದಿಗೆ ಜಗಳ ಆರಂಭಿಸಿದ್ದಾನೆ. “ಬಸ್ ಮುಂದಕ್ಕೆ ಬಿಡೋದಿಲ್ಲ”, “ನನ್ನ ಮೇಲೆ ಬಸ್ ಹತ್ತಿಸಿಕೊಂಡು ಹೋದ್ರು ಪರವಾಗಿಲ್ಲ” ಎಂದು ಕೂಗಾಡುತ್ತಾ ಸಾರ್ವಜನಿಕರ ಗಮನ ಸೆಳೆದಿದ್ದಾನೆ.
ಈ ಹೈಡ್ರಾಮಾದಿಂದ ಬಸ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಬದಿಯಲ್ಲಿ ನಿಂತಿತ್ತು. ಪ್ರಯಾಣಿಕರು ಅಸಹಾಯಕ ಸ್ಥಿತಿಗೆ ತಲುಪಿದ್ದು, ಚಾಲಕ ಮತ್ತು ಕಂಡಕ್ಟರ್ ಕುಡುಕನ ವರ್ತನೆಗೆ ಸಂಪೂರ್ಣ ಸುಸ್ತಾಗಿ ಹೋಗಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು, ಸಾರ್ವಜನಿಕರು ಇಂತಹ ವರ್ತನೆಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
11 ತಿಂಗಳಲ್ಲಿ ₹1.53 ಲಕ್ಷ ಕೋಟಿ ಹೊಸ ಹೂಡಿಕೆ: ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು: ಕಳೆದ ವರ್ಷದ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಿದ ನಂತರದ 11 ತಿಂಗಳ ಅವಧಿಯಲ್ಲಿ ರಾಜ್ಯವು ₹1.53 ಲಕ್ಷ ಕೋಟಿ ಮೊತ್ತದ ಹೊಸ ಹೂಡಿಕೆಯನ್ನು ಒಳಗೊಂಡ ಹಲವು ಕೈಗಾರಿಕಾ ಯೋಜನೆಗಳನ್ನು ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಶನಿವಾರ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಗೆ ತೆರಳುವ ಮುನ್ನ ಅವರು ಈ ಸಂಬಂಧದ ಅಂಕಿ ಅಂಶಗಳನ್ನು ಬಹಿರಂಗಪಡಿಸಿದರು. ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಅದು ಕೇವಲ ಹೂಡಿಕೆದಾರರ ಸಮಾವೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ಕುರಿತು ಹೇಳಿಕೆ ನೀಡಿದ ಅವರು, ತಯಾರಿಕಾ ವಲಯ, ಪುನರುತ್ಪಾದನೀಯ ಇಂಧನ, ಡೇಟಾ ಸೆಂಟರ್ಗಳು ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ಸ್ಥಾಪನೆಗೆ ಹಲವು ಅಗ್ರಗಣ್ಯ ಉದ್ಯಮ ಸಂಸ್ಥೆಗಳು ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿರುವುದಾಗಿ ಹೇಳಿದರು.
ಈ ಹೂಡಿಕೆ ಪ್ರಸ್ತಾವನೆಗಳು ಇನ್ನೂ ಕೆಲವೇ ದಿನಗಳಲ್ಲಿ ‘ಕರ್ನಾಟಕ ಉದ್ಯೋಗ ಮಿತ್ರ’ ವೇದಿಕೆಗೆ ಸಲ್ಲಿಕೆಯಾಗಲಿದ್ದು, ಮುಂದಿನ ಹಂತದ ಅನುಮೋದನಾ ಪ್ರಕ್ರಿಯೆಗಳು ತ್ವರಿತವಾಗಿ ಪೂರ್ಣಗೊಳ್ಳಲಿವೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸ್ಲಮ್ ಬೋರ್ಡ್ ಮನೆಗಳ ಅಂಕಿಅಂಶಗಳ ಬಾಂಬ್: ಬಿಜೆಪಿ ವಿರುದ್ಧ ಜಮೀರ್ ಅಹ್ಮದ್ ತೀವ್ರ ವಾಗ್ದಾಳಿ
ಹುಬ್ಬಳ್ಳಿ: ನಗರದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸ್ಲಮ್ ಬೋರ್ಡ್ನಿಂದ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿರುವುದನ್ನು ಸಾಬೀತುಪಡಿಸಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ರಾಜಕೀಯವನ್ನೇ ತ್ಯಜಿಸುತ್ತೇನೆ ಎಂದು ಅವರು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಅಧಿಕಾರದಲ್ಲಿದ್ದಾಗ ಯಾವುದೇ ಗ್ಯಾರಂಟಿ ಯೋಜನೆಗಳ ಒತ್ತಡ ಇರಲಿಲ್ಲ. ಆದರೂ ಬಡವರಿಗೆ ಮನೆ ಕೊಡಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ನಡುವೆಯೂ ಮನೆ ನಿರ್ಮಾಣ ಮತ್ತು ಹಂಚಿಕೆ ಕಾರ್ಯ ಮುಂದುವರಿಸಿದೆ ಎಂದು ಹೇಳಿದರು.
2024ರಲ್ಲಿ 36,789 ಮನೆಗಳನ್ನು ಈಗಾಗಲೇ ವಿತರಿಸಲಾಗಿದೆ. ಇದೀಗ ಎರಡನೇ ಹಂತದಲ್ಲಿ 42,345 ಮನೆಗಳನ್ನು ಜನವರಿ 24ರಂದು ಹಂಚಿಕೆ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ಸುಮಾರು 30 ಸಾವಿರ ಮನೆಗಳನ್ನು ಏಪ್ರಿಲ್–ಮೇ ತಿಂಗಳಲ್ಲಿ ವಿತರಿಸುವ ಗುರಿ ಇದೆ. ಒಟ್ಟು 1,80,253 ಮನೆಗಳ ನಿರ್ಮಾಣ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರತಿ ಮನೆಗೆ ರಾಜ್ಯ ಸರ್ಕಾರ 4 ಲಕ್ಷ ರೂ. ನೀಡುತ್ತಿದ್ದು, ಕೇಂದ್ರ–ರಾಜ್ಯ ಸಬ್ಸಿಡಿಯೊಂದಿಗೆ ಫಲಾನುಭವಿಗಳು ಕೇವಲ 1 ಲಕ್ಷ ರೂ. ಪಾವತಿಸಬೇಕಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ 20,363 ಮಂದಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ ಎಂದರು.
ಹುಬ್ಬಳ್ಳಿಯಲ್ಲಿ 1,008 ಮನೆ ಸೇರಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 2,767 ಮನೆ ಹಂಚಿಕೆ ಮಾಡಲಾಗುತ್ತಿದೆ. ಜನವರಿ 24ರ ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಒಟ್ಟಿನಲ್ಲಿ, ಜಮೀರ್ ಅಹ್ಮದ್ ಅವರ ಈ ಸವಾಲು ಮತ್ತು ಅಂಕಿಅಂಶಗಳು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಭಾರೀ ಚರ್ಚೆಗೆ ವೇದಿಕೆ ಸಿದ್ಧಪಡಿಸಿದೆ.
ಬೆಂಗಳೂರು ಮೆಟ್ರೋ ದೇಶದಲ್ಲೇ ದುಬಾರಿ: ದರ ಏರಿಕೆಗೆ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ
ಬೆಂಗಳೂರು: ಬೆಂಗಳೂರು ಮೆಟ್ರೋ ಇಂದು ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಆಗಿದ್ದು, ಇದರ ಪರಿಣಾಮವಾಗಿ ಸಾಮಾನ್ಯ ಜನರು ಮೆಟ್ರೋ ಬಳಸಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ, ಚೆನ್ನೈ ಮತ್ತು ಕೊಚ್ಚಿ ಮೆಟ್ರೋಗಳಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ ಇರುವ ದರವನ್ನು ಬೆಂಗಳೂರಿನ ಮೆಟ್ರೋದೊಂದಿಗೆ ಹೋಲಿಸಿದರೆ ಇಲ್ಲಿ ದರ ದ್ವಿಗುಣವಾಗಿದೆ ಎಂದು ಹೇಳಿದರು.
ಮುಂದಿನ ಫೆಬ್ರವರಿಯಲ್ಲಿ ಮತ್ತೆ ಬಿಎಂಆರ್ಸಿಎಲ್ ಶೇ.5 ರಷ್ಟು ಸ್ವಯಂಚಾಲಿತ ದರ ಏರಿಕೆಗೆ ಮುಂದಾಗಿರುವುದು ಅಕ್ಷಮ್ಯ. ರಾಜ್ಯ ಸರ್ಕಾರ ಮತ್ತು ಬಿಎಂಆರ್ಸಿಎಲ್ ಜನರಿಂದ ಸುಲಿಗೆ ಮಾಡುವಂತೆ ವರ್ತಿಸುತ್ತಿವೆ ಎಂದು ಆರೋಪಿಸಿದರು.
ಇದೇ ವೇಳೆ, ಕಳೆದ ನಾಲ್ಕು ವರ್ಷಗಳಿಂದ ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ತೀವ್ರವಾಗಿ ವಿಳಂಬವಾಗಿದ್ದು, ಇದಕ್ಕೂ ಬಿಎಂಆರ್ಸಿಎಲ್ ಹೊಣೆಗಾರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಹಿಂದೆ ದರ ನಿಗದಿ ಸಮಿತಿ ತೆಗೆದುಕೊಂಡ ನಿರ್ಧಾರವೇ ತಪ್ಪಾಗಿದೆ ಎಂದು ನಾವು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದೆವು. ಆದರೆ ಬಿಎಂಆರ್ಸಿಎಲ್ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗಲಾದರೂ ಈ ತಪ್ಪು ನಿರ್ಧಾರವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ಪಷ್ಟ ಸಂದೇಶ ನೀಡಿದ ಅವರು, ರಾಜ್ಯ ಸರ್ಕಾರ ರಾಜಕೀಯ ಮಾಡುವುದನ್ನು ಬಿಟ್ಟು ಜನರ ಪರವಾಗಿ ನಿಲ್ಲಬೇಕು ಎಂದು ಹೇಳಿದರು. ಮೆಟ್ರೋ ದರ ನಿಗದಿ ಮಾಡುವ ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತಕ್ಷಣ ಪತ್ರ ಬರೆಯಬೇಕು. ಈ ವಿಚಾರದಲ್ಲಿ ಬೆಂಗಳೂರಿನ ಎಲ್ಲಾ ಸಂಸದರ ಸಂಪೂರ್ಣ ಸಹಕಾರ ಇರಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

