Home Blog Page 22

ಮಳೆ ಅಬ್ಬರಕ್ಕೆ ವಿಭೂತಿ ಫಾಲ್ಸ್ ಬಂದ್: ಅಪಾಯ ತಪ್ಪಿಸಲು ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಂಕೋಲ ತಾಲೂಕಿನ ಜನಪ್ರಿಯ ಪ್ರವಾಸಿ ತಾಣವಾದ ವಿಭೂತಿ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ಸಂಪೂರ್ಣ ನಿಷೇಧಿಸಲಾಗಿದೆ.

ಯಾಣ ಪ್ರವಾಸಿ ವಲಯದ ಭಾಗವಾಗಿರುವ ವಿಭೂತಿ ಫಾಲ್ಸ್‌ಗೆ ಮಳೆಗಾಲದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ನಿರಂತರ ಮಳೆಯಿಂದ ಜಲಪಾತದಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗುವ ಹಾಗೂ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯ ಕ್ರಮವಾಗಿ ನಿರ್ಬಂಧ ಹೇರಿದೆ.

ಜಿಲ್ಲಾಡಳಿತದ ನಿರ್ದೇಶನದಂತೆ ಹೊಸಕಂಬಿ ಅರಣ್ಯ ಇಲಾಖೆ ಪ್ರವೇಶ ನಿಷೇಧ ಆದೇಶ ಜಾರಿಗೊಳಿಸಿದ್ದು, ಜಲಪಾತ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಈ ಹಿಂದೆ ಭಾರೀ ಮಳೆಯ ಸಂದರ್ಭದಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಪ್ರವಾಸಿಗರ ಜೀವಕ್ಕೆ ಅಪಾಯ ಎದುರಾದ ಘಟನೆಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಹೆಚ್ಚಿನ ಮಹತ್ವ ದೊರೆತಿದೆ.

ಮಳೆಗಾಲದಲ್ಲಿ ಅಪಾಯದ ಪ್ರಮಾಣ ಹೆಚ್ಚಾಗುವ ಕಾರಣ ಪ್ರತಿ ವರ್ಷ ಜೂನ್ ತಿಂಗಳಲ್ಲಿ ನಿರ್ಬಂಧ ಜಾರಿಗೊಳಿಸಲಾಗುತ್ತದೆ. ಈ ವರ್ಷವೂ ಸುರಕ್ಷತೆಯ ದೃಷ್ಟಿಯಿಂದ ಜೂನ್ ಎರಡನೇ ವಾರದಲ್ಲೇ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಆದೇಶದವರೆಗೆ ಪ್ರವಾಸಿಗರು ವಿಭೂತಿ ಜಲಪಾತಕ್ಕೆ ಭೇಟಿ ನೀಡದಂತೆ ಅರಣ್ಯ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ.

ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ: ಹಾಸನ, ಮಂಡ್ಯ, ಮೈಸೂರು ರೈತರಲ್ಲಿ ಆತಂಕ

0

ಹಾಸನ: ಮುಂಗಾರು ಆರಂಭವಾದರೂ ಮಳೆಯ ಕೊರತೆಯಿಂದ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದ್ದು, ಹಾಸನ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರಲ್ಲಿ ಆತಂಕ ಮನೆ ಮಾಡಿದೆ. ಜಲಾಶಯದಲ್ಲಿ ಸದ್ಯ 14.552 ಟಿಎಂಸಿ ನೀರು ಇದ್ದರೂ, ಬಳಕೆಗೆ ಲಭ್ಯವಿರುವುದು ಕೇವಲ 10.185 ಟಿಎಂಸಿ ಮಾತ್ರ.

37.105 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ 4.372 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿರುವುದರಿಂದ ನೀರಿನ ಲಭ್ಯತೆ ಮತ್ತಷ್ಟು ಸೀಮಿತವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 24.482 ಟಿಎಂಸಿ ನೀರು ಸಂಗ್ರಹವಾಗಿದ್ದರೆ, ಈ ಬಾರಿ ಆ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹೇಮಾವತಿ, ಹಾಸನದ ಜೊತೆಗೆ ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳ ಕೃಷಿ ಹಾಗೂ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ. ಹೀಗಾಗಿ ಜಲಾಶಯ ಭರ್ತಿಯಾಗದಿದ್ದರೆ ಈ ಜಿಲ್ಲೆಗಳ ರೈತರು ಹಾಗೂ ಜನಸಾಮಾನ್ಯರು ಗಂಭೀರ ಸಂಕಷ್ಟ ಎದುರಿಸಬೇಕಾಗುತ್ತದೆ.

ಇಂತಹ ಪರಿಸ್ಥಿತಿಯ ನಡುವೆಯೂ ನಾಲೆಗಳಿಗೆ 300 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಮಲೆನಾಡು ಭಾಗಗಳಾದ ಮೂಡಿಗೆರೆ, ಸಕಲೇಶಪುರ ಹಾಗೂ ಆಲೂರಿನಲ್ಲಿ ಮಳೆ ಚುರುಕುಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ. ಕೃಷಿ ಚಟುವಟಿಕೆಗಳು ಈಗಾಗಲೇ ನಿಧಾನಗೊಂಡಿದ್ದು, ಎಲ್ಲರ ಚಿತ್ತ ಈಗ ಮುಂಗಾರು ಮಳೆಯತ್ತ ನೆಟ್ಟಿದೆ.

ಬಾಲಕಿಯರ ಹಾಸ್ಟೆಲ್‌ಗೆ ಪದೇಪದೇ ನುಗ್ಗುತ್ತಿದ್ದ ಕಾರ್ಮಿಕ: ಕೊನೆಗೂ ಪೊಲೀಸರ ಬಲೆಗೆ

ಚಿಕ್ಕಮಗಳೂರು: ಸರ್ಕಾರಿ ಮೆಡಿಕಲ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ನಲ್ಲಿ ಮತ್ತೊಮ್ಮೆ ಭದ್ರತಾ ಲೋಪ ಬಯಲಾಗಿದ್ದು, ಮಧ್ಯರಾತ್ರಿ ಯುವಕನೊಬ್ಬ ವಸತಿ ನಿಲಯಕ್ಕೆ ನುಗ್ಗಿದ ಘಟನೆ ವಿದ್ಯಾರ್ಥಿನಿಯರಲ್ಲಿ ಭೀತಿ ಮೂಡಿಸಿದೆ. ಪ್ರಕರಣ ಸಂಬಂಧ ಉತ್ತರ ಪ್ರದೇಶದ ರಾಕೇಶ್ (30) ಎಂಬಾತನನ್ನು ಬಂಧಿಸಲಾಗಿದೆ.

ಭಾನುವಾರ ರಾತ್ರಿ ನಡೆದ ಘಟನೆಯಲ್ಲಿ ಹಾಸ್ಟೆಲ್ ಒಳಗೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ವಿದ್ಯಾರ್ಥಿನಿಯರು ಗುರುತಿಸಿದ್ದಾರೆ. ಆತನನ್ನು ಪ್ರಶ್ನಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ, ವಿದ್ಯಾರ್ಥಿನಿಯರೇ ಧೈರ್ಯ ತೋರಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ರಾಕೇಶ್ ಮೆಡಿಕಲ್ ಕಾಲೇಜಿನ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಾಗಿದ್ದು, ಈ ಹಿಂದೆಯೂ ಹಾಸ್ಟೆಲ್ ಆವರಣಕ್ಕೆ ನುಗ್ಗಿದ್ದ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದೆ. ಹೀಗಿದ್ದರೂ ಸೂಕ್ತ ಭದ್ರತಾ ಕ್ರಮ ಕೈಗೊಳ್ಳದ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿನಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿಯರ ಸುರಕ್ಷತೆ ಪ್ರಶ್ನಾರ್ಥಕವಾಗಿರುವ ಹಿನ್ನೆಲೆಯಲ್ಲಿ ಕಾಲೇಜು ಡೀನ್ ಪೊಲೀಸರಿಗೆ ದೂರು ನೀಡಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ವಿಚಾರಣೆ ವೇಳೆ ಕಳ್ಳತನದ ಉದ್ದೇಶದಿಂದ ಹಾಸ್ಟೆಲ್‌ಗೆ ತೆರಳಿದ್ದಾಗಿ ಆರೋಪಿ ಹೇಳಿಕೊಂಡಿದ್ದರೂ, ಆತ ಹಾಸ್ಟೆಲ್‌ಗೆ ಏಕೆ ಪದೇ ಪದೇ ಪ್ರವೇಶಿಸುತ್ತಿದ್ದ ಎಂಬುದರ ಕುರಿತು ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.

ಘಟನೆಯ ಬಳಿಕ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗಳ ಭದ್ರತೆ ಮತ್ತು ವಿದ್ಯಾರ್ಥಿನಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೆ ತೀವ್ರಗೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ದರ್ಶನ್ʼಗೆ ಮತ್ತೆ ಕಿರುಕುಳ!

ಬೆಂಗಳೂರು: ನಟ ದರ್ಶನ್  ಪತ್ನಿ ವಿಜಯಲಕ್ಷ್ಮಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕಿರುಕುಳ ನೀಡಲಾಗುತ್ತಿರುವ ಆರೋಪ ಕೇಳಿಬಂದಿದೆ. ಕೆಲವು ದುಷ್ಕರ್ಮಿಗಳು ನಕಲಿ ಖಾತೆಗಳನ್ನು ಸೃಷ್ಟಿಸಿ, ಅವರ ವಿರುದ್ಧ ಅವಹೇಳನಕಾರಿ ಹಾಗೂ ಅಸಭ್ಯ ಕಾಮೆಂಟ್‌ಗಳನ್ನು ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ.

‘ಜಲಗಾರ ಯುನಿವರ್ಸಿಟಿ’ ಎಂಬ ಹೆಸರಿನ ನಕಲಿ ಖಾತೆಗಳ ಮೂಲಕ ವಿಜಯಲಕ್ಷ್ಮಿ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ನಿಂದನಾತ್ಮಕ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ.

ವಿಜಯಲಕ್ಷ್ಮಿ ಸಿನಿಮಾ ನೋಡಲು ಹೋದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, “ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ”, “ಅವಳ ಬಾಯ್‌ಫ್ರೆಂಡ್, ಗಂಡ ಜೈಲಿನಲ್ಲಿ” ಎಂದು ಆಕ್ಷೇಪಾರ್ಹವಾಗಿ ನಿಂದಿಸಿದ್ದಾರೆ. “ಇವಳು ‘Rapid Driver’ ಕಾರಿನಲ್ಲಿ ಓಡಾಡುತ್ತಾಳೆ” ಎಂಬಂತಹ ಸಂದೇಶಗಳನ್ನೂ ಸಹ ಹರಡಲಾಗಿದೆ.

ಈ ರೀತಿ ಅತೀ ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡುವ ಜೊತೆಗೆ, ವಿಜಯಲಕ್ಷ್ಮಿ ಅವರು ದೂರು ನೀಡದಂತೆ ‘ವಿಜಿಗೆ ಕಂಪ್ಲೇಂಟ್ ಕೊಡಬೇಡ ಅಂತ ಹೇಳಿ ಪ್ಲೀಸ್’ ಎಂದು ಮನವಿ ಮಾಡುವ ರೀತಿಯಲ್ಲಿ ಒತ್ತಡ ಹೇರಲಾಗುತ್ತಿದೆ.

ಈ ಕುರಿತು ವಿಜಯಲಕ್ಷ್ಮಿ ಅಥವಾ ಅವರ ಕುಟುಂಬದವರು ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ರೀತಿಯ ಕಿರುಕುಳದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಲೋಪ: ಮೃತರ ಖಾತೆಗೂ ಹಣ ಜಮೆ, ಸರ್ಕಾರದಿಂದ ಪರಿಷ್ಕರಣೆಗೆ ಸಿದ್ಧತೆ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪ ಹಾಗೂ ಹಣ ದುರ್ಬಳಕೆಯ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಸಮಗ್ರವಾಗಿ ಪರಿಷ್ಕರಿಸಲು ಸರ್ಕಾರ ಮುಂದಾಗಿದೆ.

ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಹಲವು ಫಲಾನುಭವಿಗಳು ಮೃತಪಟ್ಟಿದ್ದರೂ, ಅವರ ಹೆಸರಿನ ಬ್ಯಾಂಕ್ ಖಾತೆಗಳಿಗೆ ಕಳೆದ ಕೆಲವು ತಿಂಗಳುಗಳಿಂದ ಹಣ ಜಮೆಯಾಗುತ್ತಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ನಡೆಸಿದ ಪರಿಶೀಲನೆ ಮತ್ತು ತಾಂತ್ರಿಕ ಆಡಿಟ್ ವೇಳೆ, ಸುಮಾರು 1.48 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ₹2,000 ನೆರವು ಹಣ ಜಮೆಯಾಗಿರುವ ಮಾಹಿತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕ್ರಿಯೆಯಿಂದ ಸಾರ್ವಜನಿಕ ಹಣದ ದುರ್ಬಳಕೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಕೆಲವು ಪ್ರಕರಣಗಳಲ್ಲಿ ಮೃತ ಫಲಾನುಭವಿಗಳ ಸಂಬಂಧಿಕರು ಎಟಿಎಂ ಮತ್ತು ಯುಪಿಐ ಮೂಲಕ ಹಣವನ್ನು ವಿತ್‌ಡ್ರಾ ಮಾಡಿಕೊಂಡಿರುವ ಸಾಧ್ಯತೆಯೂ ಪರಿಶೀಲನೆಯಲ್ಲಿದೆ.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸುವಂತೆ ಸೂಚಿಸಿದ್ದಾರೆ.

ಪರಿಶೀಲನೆ ವೇಳೆ ಮತ್ತೊಂದು ತಾಂತ್ರಿಕ ಸಮಸ್ಯೆಯೂ ಬೆಳಕಿಗೆ ಬಂದಿದ್ದು, ಕೆಲವಡೆ ಬ್ಯಾಂಕ್ ಖಾತೆ ಹೊಂದಿರುವ ವ್ಯಕ್ತಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಹೊಂದಿರುವ ವ್ಯಕ್ತಿ ಬೇರೆಬೇರೆಯಾಗಿರುವುದು ಕಂಡುಬಂದಿದೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಹಣ ತಲುಪುವಲ್ಲಿ ತೊಂದರೆ ಉಂಟಾಗುತ್ತಿರುವ ಬಗ್ಗೆ ಅಧಿಕಾರಿಗಳು ಗಮನಸೆಳೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಫಲಾನುಭವಿಗಳ ಪಟ್ಟಿಯನ್ನು ತಾತ್ಕಾಲಿಕವಾಗಿ ಮರುಪರಿಶೀಲನೆಗೆ ಒಳಪಡಿಸಿ, ಅರ್ಹ ಮಹಿಳೆಯರಿಂದ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಇದೇ ವೇಳೆ, ಇ-ಜನ್ಮ ಪೋರ್ಟಲ್ ಮೂಲಕ ಮರಣ ಪ್ರಮಾಣಪತ್ರಗಳನ್ನು ಬ್ಯಾಂಕ್ ಖಾತೆಗಳೊಂದಿಗೆ ಸಂಪರ್ಕಿಸುವುದು, ಫಲಾನುಭವಿಗಳ ಜೀವಿತ ಸ್ಥಿತಿಯನ್ನು ವಾರ್ಷಿಕವಾಗಿ ದೃಢೀಕರಿಸುವ ‘ಜೀವಿತ ಪ್ರಮಾಣ ಪತ್ರ’ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸುವ ಕುರಿತು ಸರ್ಕಾರ ಚರ್ಚೆ ನಡೆಸುತ್ತಿದೆ.

ಆಗುಂಬೆ ಘಾಟಿಗೆ ಶಾಶ್ವತ ಪರಿಹಾರಕ್ಕೆ ಹೆಜ್ಜೆ: ಸುರಂಗ ಮಾರ್ಗ, ಡಬಲ್ ರಸ್ತೆ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭ

0

ಕಾರ್ಕಳ: ಆಗುಂಬೆ ಘಾಟಿಯಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್, ಭೂಕುಸಿತದ ಆತಂಕ ಹಾಗೂ ರಸ್ತೆ ಸುರಕ್ಷತಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳು ಆರಂಭವಾಗಿವೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಘಾಟಿಯ ಅಪಾಯಕಾರಿ ತಿರುವುಗಳನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ಹುಲಿಕಲ್ ಘಾಟಿಯಲ್ಲಿ ನಿರ್ಬಂಧ ಹೇರಿರುವ ಕಾರಣ ಆಗುಂಬೆ ಮಾರ್ಗದಲ್ಲಿ ವಾಹನ ದಟ್ಟಣೆ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ಭಾರೀ ತೂಕದ ವಾಹನಗಳು ಮತ್ತು ಜಲ್ಲಿಕಲ್ಲು ಸಾಗಣೆ ವಾಹನಗಳ ನಿರಂತರ ಸಂಚಾರದಿಂದ ಘಾಟಿಯ ತಿರುವು ಭಾಗಗಳಲ್ಲಿ ಭೂ ಕುಸಿತದ ಅಪಾಯ ಹೆಚ್ಚಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಸಂಸದರು ಪ್ರಯಾಣಿಕರ ಸುರಕ್ಷತೆಗಾಗಿ ತಿರುವುಗಳ ಅಪಾಯಕಾರಿ ದಂಡೆ ಭಾಗದಲ್ಲಿ ಸುಮಾರು ಸಾವಿರ ಮೀಟರ್ ತಡೆಬೇಲಿ ನಿರ್ಮಿಸಲು ಸೂಚಿಸಿದ್ದಾರೆ. ಅಲ್ಲದೇ ರಸ್ತೆ ದುರಸ್ತಿ ಹಾಗೂ ಕುಸಿತ ತಡೆ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಈಗಾಗಲೇ 15 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಮಳೆಗಾಲದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಆಗುಂಬೆ ಘಾಟಿಯ ಭವಿಷ್ಯದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸುರಂಗ ಮಾರ್ಗ ನಿರ್ಮಾಣ ಹಾಗೂ ರಸ್ತೆ ದ್ವಿಪಥೀಕರಣ ಯೋಜನೆಗೂ ವೇಗ ನೀಡಲಾಗಿದೆ. ಈ ಸಂಬಂಧ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಸಾಧ್ಯತಾ ವರದಿ ಆಧರಿಸಿ ಶೀಘ್ರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ಘಾಟಿ ರಸ್ತೆಯ ಸ್ಥಿರತೆ ಕಾಪಾಡಲು ಭಾರೀ ವಾಹನಗಳ ನಿಯಂತ್ರಣ ಅಗತ್ಯವಾಗಿದ್ದು, ಮಳೆಗಾಲದಲ್ಲಿ ಯಾವುದೇ ಅಪಾಯ ಸಂಭವಿಸದಂತೆ ಜಿಲ್ಲಾಡಳಿತ ಹಾಗೂ ಹೆದ್ದಾರಿ ಇಲಾಖೆ ಸಮನ್ವಯದಿಂದ ಕ್ರಮ ಕೈಗೊಳ್ಳಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉಡುಪಿಯಲ್ಲಿ ಕಾರಿಗೆ ಸೈಡ್ ಕೊಡುವ ವಿಚಾರಕ್ಕೆ ಮಾರಾಮಾರಿ: ಪ್ರವಾಸಿಗರು-ಸ್ಥಳೀಯರ ನಡುವೆ ಘರ್ಷಣೆ

ಉಡುಪಿ: ಜಿಲ್ಲೆಯ ಪ್ರಸಿದ್ಧ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ತಡರಾತ್ರಿ ಪ್ರವಾಸಿಗರು ಮತ್ತು ಸ್ಥಳೀಯ ವ್ಯಕ್ತಿಯೊಬ್ಬರ ನಡುವೆ ಭಾರೀ ಗಲಾಟೆ ನಡೆದಿರುವ ಘಟನೆ ವರದಿಯಾಗಿದೆ.

ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಪ್ರವಾಸಿಗರು ಹಾಗೂ ಉಡುಪಿಯ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ನಡುವೆ ಈ ಘರ್ಷಣೆ ಸಂಭವಿಸಿದೆ ಎನ್ನಲಾಗಿದೆ.

ಮಹಿಳೆಯರು ಮತ್ತು ಮಕ್ಕಳೊಂದಿಗೆ ಮಠದ ದರ್ಶನಕ್ಕೆ ಬಂದಿದ್ದ ಪ್ರವಾಸಿಗರು, ಕಾರು ನಿಧಾನವಾಗಿ ಚಲಾಯಿಸುವಂತೆ ಸೂಚಿಸಿದ್ದರಿಂದ ಮಾತಿನ ಚಕಮಕಿ ಆರಂಭವಾಗಿದೆ ಎಂದು ತಿಳಿದುಬಂದಿದೆ. ಬಳಿಕ ವಾಗ್ವಾದ ತೀವ್ರಗೊಂಡು ಹಲ್ಲೆ ಹಂತಕ್ಕೆ ತಲುಪಿದೆ.

ಪ್ರವಾಸಿಗರ ಆರೋಪದ ಪ್ರಕಾರ, ಸ್ಥಳೀಯ ವ್ಯಕ್ತಿ ಕಾರು ಹಾಯಿಸಲು ಯತ್ನಿಸಿದ್ದು, ಬಳಿಕ ಕಂಬಳದ ಕೋಲಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ.

ಇನ್ನೊಂದೆಡೆ, ಸ್ಥಳೀಯ ವ್ಯಕ್ತಿ ಕೂಡ ಪ್ರತಿದೂರು ನೀಡಿದ್ದು, ಪ್ರವಾಸಿಗರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಾರ್ವಜನಿಕರು ಧಾವಿಸಿ ಗಲಾಟೆಯನ್ನು ನಿಯಂತ್ರಿಸಿದ್ದು, ಬಳಿಕ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಎರಡೂ ಪಕ್ಷಗಳ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮೋದಿ ಐತಿಹಾಸಿಕ ದಾಖಲೆ: ನೆಹರೂ ದಾಖಲೆಯನ್ನು ಹಿಂದಿಕ್ಕಿದ ಪ್ರಧಾನಿ!

0

ನವದೆಹಲಿ: ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ದಾಖಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ದೀರ್ಘಾವಧಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಮೋದಿ ಅವರು ಪ್ರಧಾನಿಯಾಗಿ ಸತತ 4,399 ದಿನಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದ್ದು, ಇದು ನೆಹರೂ ಅವರ 4,398 ದಿನಗಳ ದಾಖಲೆಯನ್ನು ಮೀರಿದೆ.

ಹಿಂದಿನ ದಾಖಲೆ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿ ಇತ್ತು. ಅವರು 1952ರಿಂದ 1964ರವರೆಗೆ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ, 2019ರಲ್ಲಿ ಪುನಃ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದರು. 2024ರಲ್ಲಿ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿ ಆಡಳಿತ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಾಧನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಎನ್‌ಡಿಎ ವತಿಯಿಂದ ವಿಶೇಷ ಸಮಾವೇಶ ಆಯೋಜಿಸಲಾಗಿದ್ದು, ಹಲವು ರಾಜ್ಯಗಳ ನಾಯಕರು ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಸಂದೇಶದಲ್ಲಿ ಈ 12 ವರ್ಷಗಳ ಆಡಳಿತ ದೇಶದ ಅಭಿವೃದ್ಧಿ, ಜನಕಲ್ಯಾಣ ಮತ್ತು ಮೂಲಸೌಕರ್ಯ ವಿಕಾಸಕ್ಕೆ ಸಮರ್ಪಿತವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ದೇಶದ ವಿವಿಧ ಭಾಗಗಳಲ್ಲಿ ಈ ಮೈಲಿಗಲ್ಲನ್ನು ಸಂಭ್ರಮಿಸಲು ವಿಶೇಷ ಕಾರ್ಯಕ್ರಮಗಳು ಹಾಗೂ ಪೂಜೆಗಳು ನಡೆಯಲಿದೆ.

 

ಕುಮುದ್ ರಾಣೆ ನಿಧನ: ಆಪ್ತ ಸ್ನೇಹಿತೆಯನ್ನು ಕಳೆದುಕೊಂಡು ಕಣ್ಣೀರಿಟ್ಟ ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಕುಟುಂಬದ ಆಪ್ತ ಸದಸ್ಯೆಯಂತಿದ್ದ ಖ್ಯಾತ ಕೇಶ ವಿನ್ಯಾಸಕಿ ಕುಮುದ್ ರಾಣೆ ಅವರ ನಿಧನ ಖಾನ್ ಕುಟುಂಬಕ್ಕೆ ಭಾರೀ ಆಘಾತ ಉಂಟುಮಾಡಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕುಮುದ್ ರಾಣೆ ಅವರ ಹೋರಾಟ ಅಂತ್ಯಗೊಂಡಿದ್ದು, ಅಂತಿಮ ವಿಧಿವಿಧಾನಗಳ ವೇಳೆ ಸಲ್ಮಾನ್ ಖಾನ್ ಸೇರಿದಂತೆ ಇಡೀ ಕುಟುಂಬ ಭಾವುಕಗೊಂಡಿದೆ.

ಮುಂಬೈನ ಬಾಂದ್ರಾದಲ್ಲಿ ಸಲೂನ್ ನಡೆಸುತ್ತಿದ್ದ ಕುಮುದ್ ರಾಣೆ, ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಕುಟುಂಬದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು. ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಸಲ್ಮಾನ್ ಖಾನ್ ಅಂತಿಮ ದರ್ಶನಕ್ಕೆ ಆಗಮಿಸಿದ್ದು, ದುಃಖವನ್ನು ತಡೆಹಿಡಿಯಲು ಸಾಧ್ಯವಾಗದೆ ಭಾವನಾತ್ಮಕವಾಗಿ ಕುಗ್ಗಿದ ದೃಶ್ಯಗಳು ವೈರಲ್ ಆಗಿವೆ.

ಅಂತಿಮ ನಮನ ಕಾರ್ಯಕ್ರಮದಲ್ಲಿ ಅರ್ಬಾಜ್ ಖಾನ್, ಸೊಹೈಲ್ ಖಾನ್, ಸಲ್ಮಾ ಖಾನ್, ಹೆಲೆನ್, ನಿರ್ವಾಣ ಖಾನ್ ಮತ್ತು ಅರ್ಹಾನ್ ಖಾನ್ ಭಾಗವಹಿಸಿದರು. ವಿಶೇಷವಾಗಿ ಸೊಹೈಲ್ ಖಾನ್ ಪುತ್ರ ನಿರ್ವಾಣ ಕಣ್ಣೀರಿಟ್ಟ ದೃಶ್ಯಗಳು ನೆರೆದವರ ಮನಕಲಕಿದವು. ಈ ವೇಳೆ ಅರ್ಹಾನ್ ಖಾನ್ ನಿರ್ವಾಣಗೆ ಸಾಂತ್ವನ ಹೇಳುತ್ತಿರುವುದು ವಿಡಿಯೋಗಳಲ್ಲಿ ಕಾಣಿಸಿಕೊಂಡಿದೆ.

2025ರ ಹೊಸ ವರ್ಷಾಚರಣೆಯನ್ನೂ ಸಲ್ಮಾನ್ ಖಾನ್ ಜೊತೆಗೂಡಿ ಆಚರಿಸಿದ್ದ ಕುಮುದ್ ರಾಣೆ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಟನೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿದ್ದರು. ಆಪ್ತ ಸ್ನೇಹಿತೆಯನ್ನು ಕಳೆದುಕೊಂಡ ನೋವು ಸಲ್ಮಾನ್ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

ವೃತ್ತಿಪರವಾಗಿ ಸಕ್ರಿಯವಾಗಿರುವ ಸಲ್ಮಾನ್ ಖಾನ್, ಸದ್ಯ ವಂಶಿ ಪೈಡಿಪಲ್ಲಿ ನಿರ್ದೇಶನದ ಹೊಸ ಆಕ್ಷನ್-ಡ್ರಾಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಯನತಾರಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರ ಮುಂದಿನ ವರ್ಷ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ‘ಮಾತೃಭೂಮಿ’ ಚಿತ್ರವೂ ಈ ವರ್ಷ ತೆರೆಗೆ ಬರಲು ಸಜ್ಜಾಗಿದೆ.

ವಿಡಿಯೋ ಕಾಲ್ ಮೂಲಕ ಅಭಿಮಾನಿಗೆ ಸರ್ಪ್ರೈಸ್ ಕೊಟ್ಟ ಅಜಿತ್

ಚೆನ್ನೈ: ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರ ಅಪರೂಪದ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಪ್ರಚಾರ ಕಾರ್ಯಕ್ರಮ, ಆಡಿಯೋ ಲಾಂಚ್ ಅಥವಾ ಅಭಿಮಾನಿ ಸಂವಾದಗಳಿಂದ ದೂರ ಉಳಿಯುವ ಅಜಿತ್, ತಮ್ಮ ಸ್ನೇಹಿತನ ಮಕ್ಕಳಿಗೆ ಸ್ವತಃ ವಿಡಿಯೋ ಕಾಲ್ ಮಾಡಿ ಅಚ್ಚರಿ ನೀಡಿದ್ದಾರೆ.

ಸಿನಿಮಾ ಮತ್ತು ವೈಯಕ್ತಿಕ ಬದುಕನ್ನು ಪ್ರತ್ಯೇಕವಾಗಿಟ್ಟುಕೊಳ್ಳುವ ಅಜಿತ್ ಕುಮಾರ್, ಸದ್ಯ ಅಂತರರಾಷ್ಟ್ರೀಯ ರೇಸಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಆಪ್ತ ಸ್ನೇಹಿತನ ಇಬ್ಬರು ಮಕ್ಕಳೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿ ಅವರ ಕನಸಿನ ಕ್ಷಣವನ್ನು ಸಾಕಾರಗೊಳಿಸಿದ್ದಾರೆ.

ರೇಸಿಂಗ್ ಉಡುಪಿನಲ್ಲೇ ಕಾಣಿಸಿಕೊಂಡ ಅಜಿತ್, ಮಕ್ಕಳೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡಿ ಅವರ ಶಿಕ್ಷಣ, ದಿನನಿತ್ಯದ ಚಟುವಟಿಕೆಗಳ ಬಗ್ಗೆ ವಿಚಾರಿಸಿದರು. ಜೊತೆಗೆ “ಶೀಘ್ರದಲ್ಲೇ ನಿಮ್ಮನ್ನು ಖುದ್ದಾಗಿ ಭೇಟಿ ಮಾಡುತ್ತೇನೆ. ದೇವರು ನಿಮ್ಮನ್ನು ಸದಾ ಕಾಪಾಡಲಿ” ಎಂದು ಶುಭ ಹಾರೈಸಿದರು.

ಸೂಪರ್‌ಸ್ಟಾರ್ ಜೊತೆ ನೇರವಾಗಿ ಮಾತನಾಡಿದ ಖುಷಿಯಲ್ಲಿ ಮಕ್ಕಳು ಸಂಭ್ರಮಿಸಿದ ದೃಶ್ಯಗಳು ಇದೀಗ ವೈರಲ್ ಆಗಿವೆ. ಅಭಿಮಾನಿಗಳು ವಿಡಿಯೋ ನೋಡಿ ಭಾವುಕರಾಗಿದ್ದು, ಅಜಿತ್ ಅವರ ಸರಳತೆ ಮತ್ತು ವಿನಯಶೀಲತೆಯನ್ನು ಕೊಂಡಾಡುತ್ತಿದ್ದಾರೆ.

“ಇದು ನಿಜವಾದ ಸ್ಟಾರ್‌ಡಮ್”, “ಅಜಿತ್ ಸರ್ ಅವರಂತಹ ವ್ಯಕ್ತಿತ್ವ ಅಪರೂಪ”, “ಕೋಟ್ಯಂತರ ಅಭಿಮಾನಿಗಳಿದ್ದರೂ ನೆಲದ ಜೊತೆಗಿನ ನಂಟು ಕಳೆದುಕೊಂಡಿಲ್ಲ” ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

90ರ ದಶಕದಿಂದ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿಕೊಂಡಿರುವ ಅಜಿತ್, ಇಂದಿಗೂ ಪ್ರಚಾರದ ಗಿಮಿಕ್‌ಗಳಿಗಿಂತ ತಮ್ಮ ಕೆಲಸದ ಮೂಲಕವೇ ಜನರನ್ನು ತಲುಪುವ ನಟರಾಗಿದ್ದಾರೆ. ಇತ್ತೀಚೆಗೆ ತಾಯಿಯ ಅಗಲಿಕೆಯ ದುಃಖ ಅನುಭವಿಸಿದ್ದರೂ, ಮತ್ತೆ ರೇಸಿಂಗ್ ಟ್ರ್ಯಾಕ್‌ಗೆ ಮರಳಿರುವ ಅವರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

error: Content is protected !!