Home Blog Page 4

ಗುತ್ತಿಗೆದಾರ ಶಿವಾನಂದ್ ಕುನ್ನೂರು ಕೊಲೆಗೆ ಟ್ವಿಸ್ಟ್: ಹತ್ಯೆಗೆ ಪ್ರತೀಕಾರ ತೀರಿಸಲು ಹೋಗಿ ಜೈಲು ಪಾಲಾದ ಪೊಲೀಸ್!

ಹಾವೇರಿ:- ಇಲ್ಲಿನ ಗಂಗೀಭಾವಿ ಕ್ರಾಸ್ ಬಳಿ ಜೂ. 24ರಂದು ನಡೆದಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಅವರ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.

ಹತ್ಯೆಗೆ ಪ್ರತೀಕಾರ ತೀರಿಸಲು ಹೋಗಿ ಪೊಲೀಸ್ ಪೇದೆ ಜೈಲು ಪಾಲಾಗಿದ್ದಾರೆ. ಪ್ರಕರಣದ A1 ಆರೋಪಿ ನಾಗರಾಜ್ ಮನೆಗೆ ಬೆಂಕಿಯಿಟ್ಟ ಆರೋಪ ಮೇಲೆ ಪೊಲೀಸ್‌ ಪೇದೆಯನ್ನು ಬಂಧಿಸಲಾಗಿದೆ.

ಕೊಲೆಯಾದ ಶಿವಾನಂದ ಅಣ್ಣ ಹಾಗೂ ಪೊಲೀಸ್ ಸಿಬ್ಬಂದಿ ಲಿಂಗರಾಜ ಕುನ್ನೂರನ್ನ ಶಿಗ್ಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಕೊಲೆ ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿ ಲಿಂಗರಾಜ ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಿದಂತಾಗಿದೆ. ಲಿಂಗರಾಜ್ ಅವರು, ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹತ್ಯೆ ಬಳಿಕ ಆರೋಪಿ ಮನೆಗೆ ಬೆಂಕಿಯಿಡಲು ಲಿಂಗರಾಜ್ ಪ್ರಚೋದಿಸಿದ್ದರು. ಈ ಹಿನ್ನೆಲೆ ತಡರಾತ್ರಿ ಒಟ್ಟು 9 ಜನರನ್ನ ಶಿಗ್ಗಾವಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಲಿಂಗರಾಜ್ ಕುನ್ನೂರು, ನವೀನ್ ಹೊಸಮನಿ, ಧರ್ಮಪ್ಪ, ಪ್ರಕಾಶ್, ಬಂಧಿತರು. ಒಟ್ಟು 6 ಜನರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನುಳಿದ 3 ಜನರಿಗೆ ಪೊಲೀಸ್ ಕಸ್ಟಡಿ ಪಡೆಯಲಾಗಿದೆ.

ಪ್ರಕರಣದ ಹಿನ್ನೆಲೆ: ಶಿಗ್ಗಾಂವಿ ಪಟ್ಟಣದ ಹೊರವಲಯದ ಗಂಗಿಭಾವಿ ಕ್ರಾಸ್ ಬಳಿ ಜೂನ್ 24ರ ಮಂಗಳವಾರ ಗುತ್ತಿಗೆದಾರ ಶಿವಾನಂದ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯ ವಿಡಿಯೋ ವೈರಲ್​ ಆಗಿತ್ತು. ಅದನ್ನು ಆಧರಿಸಿ ಶಿವಾನಂದ ಅವರ ಪತ್ನಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ‌ ಐವರ ವಿರುದ್ಧ ದೂರು ದಾಖಲಿಸಿದ್ದರು.

ಶಾಲಿನಿ ರಜನೀಶ್ ಬಗ್ಗೆ ಗೌರವ ಇದೆ.. ಆಕ್ಷೇಪಾರ್ಹ ಹೇಳಿಕೆ ನೀಡಿದ್ರೆ ನೇಣು ಹಾಕಿಕೊಳ್ತೇನೆ: ರವಿಕುಮಾರ್‌

ಬೆಂಗಳೂರು:- ಶಾಲಿನಿ ರಜನೀಶ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಎನ್ ರವಿಕುಮಾರ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,  ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ನಾನು ಯಾವುದೇ ಅವಹೇಳನಕಾರಿಯಾಗಿ ಹೇಳಿಕೆ ನೀಡಿಲ್ಲ. ಆಕ್ಷೇಪಾರ್ಹ ಹೇಳಿಕೆ ನೀಡಿದರೆ ನಾನು ನೇಣು ಹಾಕಿಕೊಳ್ಳುತ್ತೇನೆ. ಮುಖ್ಯ ಕಾರ್ಯದರ್ಶಿಯವರು ಅವರು 24 ಗಂಟೆ ಬ್ಯುಸಿ ಇದ್ದಾರೆ. ಹಾಗಾಗಿ ಅವರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದೆ. ಹಗಲಲ್ಲಿ ಸಿಎಂ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಾರೆ, ರಾತ್ರಿಯೆಲ್ಲ ಸರ್ಕಾರದ ಕೆಲಸ ಮಾಡ್ತಾರೆ ಅಂದೆ. ಇದರೊಳಗೆ ಏನು ತಪ್ಪಿದೆ? ನಾನು ಅವಾಚ್ಯ ಶಬ್ಧ ಬಳಸಿಲ್ಲ ಎಂದು ತಿಳಿಸಿದರು.

ಅವಾಚ್ಯ ಶಬ್ಧ ಬಳಸಿದರೆ ಕಾಂಗ್ರೆಸ್‌ನವರು ಬಹಿರಂಗಪಡಿಸಲಿ. ನನಗೂ ನನ್ನ ಮನೆಯಲ್ಲಿ ಸಹೋದರಿಯರು ಇದ್ದಾರೆ. ಯಾರ ಜತೆ ಹೇಗೆ ಮಾತನಾಡಬೇಕೆಂಬ ಪರಿಜ್ಞಾನ ಇದೆ. ಮುಖ್ಯ ಕಾರ್ಯದರ್ಶಿಗೆ ಆ ರೀತಿ ಮಾತನಾಡಲು ಸಾಧ್ಯಾನಾ? ಯಾರಿಗೇ ಆಗಲೀ ಆಥರ ಮಾತಾಡೋದು ಸಾಧ್ಯನಾ? ಅವಾಚ್ಯ ಶಬ್ಧ ಇದ್ದರೆ ನೇಣು ಹಾಕಿಕೊಳ್ತೇನೆ. ನನ್ನ ವಿರುದ್ಧ ದ್ವೇಷದಿಂದ ಕಾಂಗ್ರೆಸ್‌ನವರು ದೂರು ಕೊಟ್ಟಿದ್ದಾರೆ ಎಂದು ರವಿಕುಮಾರ್ ಸ್ಪಷ್ಟ ಪಡಿಸಿದರು.

ಭೂರಮೆಯ ಸ್ವರ್ಗ ಕಪ್ಪತ್ತಗುಡ್ಡ

‘ಎಪ್ಪತ್ತು ಗಿರಿ ಸುತ್ತುವುದಕ್ಕಿಂತ ಕಪ್ಪತ್ತಗಿರಿ ಸುತ್ತುವುದು ಮೇಲು’, ‘ಕಣ್ಣಿದ್ದವನು ಕನಕಗಿರಿ ನೋಡಬೇಕು, ಕಾಲಿದ್ದವನು ಕಪ್ಪತ್ತಗುಡ್ಡ ನೋಡಬೇಕು’ ಎನ್ನುವ ಹಲವಾರು ನುಡಿಗಟ್ಟುಗಳು ಕಪ್ಪತ್ತಗಿರಿ ಕುರಿತು ಉತ್ತರ ಕರ್ನಾಟಕದಾದ್ಯಂತ ಮನೆ ಮಾತಾಗಿವೆ. ಇಂತಹ ಕಪ್ಪತ್ತಗುಡ್ಡವೀಗ ಮುಂಗಾರು ಮಳೆಯ ಸಿಂಚನದಿಂದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದು ಪ್ರವಾಸಿಗರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.

ಬೀಸುವ ತಂಗಾಳಿ ಚದುರುತ್ತಿರುವ ಮೋಡಗಳನ್ನು ಇನ್ನೇನು ಓಡಿಸಿಕೊಂಡು ಹೋಗುವಂತಿದೆ. ಶ್ವೇತಮೋಡಗಳ ನಡುವೆ ಹಚ್ಚಹಸಿರ ಪರ್ವತ ಕಣ್ಮನ ಸೆಳೆಯದೇ ಇರದು. ಗದಗ ಜಿಲ್ಲೆಯ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ವ್ಯಾಪ್ತಿಯಲ್ಲಿರುವ ಈ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಶುದ್ಧಗಾಳಿಗೆ ಹೆಸರುವಾಸಿ. ಹೀಗಾಗಿಯೇ ವಾಯು ವಿಹಾರಕ್ಕೂ ಈ ತಾಣ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ. ಪರಿಶುದ್ಧ ಗಾಳಿ ಬೀಸುವ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಈ ಎಲ್ಲ ಕಾರಣಗಳಿಂದ ಕಪ್ಪತ್ತಗಿರಿಯನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲಾಗುತ್ತದೆ.

ಈ ಬೆಟ್ಟದ ತುದಿಯಲ್ಲಿ ಸುಮಾರು 250 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಅನ್ನಜ್ಞಾನ ದಾಸೋಹ ಮಠವಿದೆ. ಈ ಮಠವು ದಕ್ಷಿಣ ಸಸ್ಯಕಾಶಿಯೆಂದು ಪ್ರಖ್ಯಾತ. ಕಪ್ಪತ್ತಗುಡ್ಡವು ಅಪಾರ ಖನಿಜ, ನೈಸರ್ಗಿಕ ಸಂಪತ್ತು ಹೊಂದಿದೆ. ಈ ಪ್ರದೇಶವನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿದೆ. ಒಟ್ಟಾರೆ 17,872 ಹೆಕ್ಟೇರ್ ಇರುವ ಕಪ್ಪತಗುಡ್ಡ ಅರಣ್ಯ ಪ್ರದೇಶವು ಗದಗ ತಾಲೂಕಿನಲ್ಲಿ 401.811 ಹೆಕ್ಟೇರ್, ಮುಂಡರಗಿ ತಾಲೂಕಿನಲ್ಲಿ 15,433.673 ಹೆಕ್ಟೇರ್ ಮತ್ತು ಶಿರಹಟ್ಟಿ ತಾಲೂಕಿನಲ್ಲಿ 2016 ಹೆಕ್ಟೇರ್‌ಗಳಷ್ಟು ಪ್ರದೇಶವನ್ನು ಹಂಚಿಕೊಂಡಿದೆ.

ಕಪ್ಪತಗುಡ್ಡಕ್ಕೆ ಗದಗ ಮಾತ್ರವಲ್ಲದೇ ಕೊಪ್ಪಳ, ಬಳ್ಳಾರಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೇರಳ, ಮಡಿಕೇರಿ, ಚಿಕ್ಕಮಗಳೂರು ಪ್ರವಾಸ ಕೈಗೊಳ್ಳುತ್ತಿದ್ದ ಜನ ಈಗೀಗ ಕಪ್ಪತಗುಡ್ಡಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ಮಳೆ ಉತ್ತಮವಾಗಿ ಆಗುತ್ತಿರುವ ಕಾರಣ ಕಪ್ಪತಗುಡ್ಡ ಯಾವುದೇ ಗಿರಿಶಿಖರಗಳ ತಾಣಕ್ಕೂ ಕಡಿಮೆ ಇಲ್ಲದಂತೆ ಹಸಿರಿನಿಂದ ಕಂಗೊಳಿಸುತ್ತಿದೆ.

ಕಪ್ಪತ್ತಗುಡ್ಡ ಇಂದಿಗೂ ತನ್ನ ಮಣ್ಣು, ಗಿಡ, ಮರಗಳೆಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ. ಅತೀ ಹೆಚ್ಚು ಆಯುರ್ವೇದಿಕ್ ಗಿಡಗಳನ್ನು ಹೊಂದಿರುವ ಕಾರಣಕ್ಕಾಗಿ ಇಲ್ಲಿಗೆ ಬಂದು ಹೋದರೆ ಸಾಕು, ಯಾವ ದವಾಖಾನೆನೂ ಬೇಡ ಎಂಬ ಪ್ರತೀತಿ ಇದೆ.

`ಎಪ್ಪತ್ತು ಗಿರಿಗಳಿಗಿಂತ ಕಪ್ಪತ್ತಗಿರಿ ಮೇಲೆ’ ಎಂಬುದು ಸ್ಕಂದ ಪುರಾಣದಲ್ಲಿನ ಉಲ್ಲೇಖ. ಅಂದರೆ ಎಪ್ಪತ್ತು ಗಿರಿಗಳಲ್ಲಿ ಸಿಗದ ಔಷಧಿ ಗಿಡಮೂಲಿಕೆಗಳು ಕಪ್ಪತ್ತಗುಡ್ಡ ಒಂದರಲ್ಲೇ ಸಿಗುವ ಕಾರಣಕ್ಕೆ ಈ ಮಾತು ಬಂತೆಂದು ಹಿರಿಯರು ಹೇಳುತ್ತಾರೆ. ಗಿಡಮೂಲಿಕೆಗಳನ್ನು ಅರಸಿ ವರ್ಷವಿಡೀ ಇಲ್ಲಿಗೆ ಎಲ್ಲೆಲ್ಲಿಂದಲೋ ಜನ ಬರುತ್ತಲೇ ಇರುತ್ತಾರೆ.

ಲಕ್ಷಾಂತರ ಸಸಿಗಳ ಪಾಲನೆ-ಪೋಷಣೆ ಮಾಡುವ ಮೂಲಕ ಸಾವಿರಾರು ಹೆಕ್ಟೇರ್ ಈ ಪ್ರದೇಶದಲ್ಲಿ ದೈವೀವನ, ನೆಡುತೋಪುಗಳು ಮತ್ತು ರಸ್ತೆ ಬದಿ ಮರ ಬೆಳಸುವುದು, ಶಾಲಾವನ, ಮಗುವಿಗೊಂದು ವನ ನಿರ್ಮಾಣ ಮಾಡುವುದು ಸೇರಿದಂತೆ ‘ಹಸಿರು ಹೊನ್ನು- ಹಸಿರು ಉಸಿರು’ ಯೋಜನೆ ಜಾರಿಗೊಳಿಸಿ ಕಪ್ಪತ್ತಗುಡ್ಡದ ಆಪತ್ತುನ್ನು ದೂರಗೊಳಿಸುವ ಕಾಲ ಸನ್ನಿಹಿತವಾಗುತ್ತಿರುವುದು ಸಂತಸದ ಸಂಗತಿ.

ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ ಸುಮಾರು 32,346 ಹೆಕ್ಟೇರ್‌ಗಳನ್ನು ಒಳಗೊಂಡಿದೆ ಮತ್ತು ಜಲ ಪ್ರದೇಶಗಳು, ಕಾಡುಗಳು, ಪೊದೆಗಳು ಮತ್ತು ಹುಲ್ಲುಗಾವಲುಗಳು ಸೇರಿದಂತೆ ವಿವಿಧ ಪರಿಸರ ವ್ಯವಸ್ಥೆಗಳನ್ನು ಹೊಂದಿದೆ. ಇದು ಲಂಗೂರ್‌ಗಳು, ಜಿಂಕೆಗಳು, ಕಾಡು ಬೆಕ್ಕುಗಳು, ಪಕ್ಷಿಗಳು, ಕೃಷ್ಣಮೃಗಗಳು, ಚುಕ್ಕೆ ಜಿಂಕೆಗಳು, ಬೊಗಳುವ ಜಿಂಕೆಗಳು, ಚಿರತೆಗಳು, ಭಾರತೀಯ ತೋಳಗಳು ಮತ್ತು ಪಟ್ಟೆ ಹೈನಾಗಳಿಗೆ ಸುರಕ್ಷಿತ ತಾಣವಾಗಿದೆ ಎಂದು ಹೇಳಲಾಗುತ್ತದೆ.

ಕೊನೆಯದಾಗಿ, ಕಪ್ಪತ್ತಗುಡ್ಡವು ಪ್ರವಾಸಿತಾಣ ವ್ಯಾಪ್ತಿಗೆ ಒಳಪಟ್ಟರೆ ಅದು ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯಕ್ಕೆ ರಹದಾರಿ ಮಾಡಿಕೊಟ್ಟಂತಾಗುತ್ತದೆ. ಪರಿಸರ ಸೂಕ್ಷ್ಮ ವಲಯಗಳು ಮಾನವನ ಹಸ್ತಕ್ಷೇಪದಿಂದ ದೂರವಿದ್ದಷ್ಟು ಒಳಿತು. ಕಪ್ಪತ್ತಗುಡ್ಡವನ್ನು ಪ್ರವಾಸಿತಾಣವನ್ನಾಗಿ ಮಾಡಿದರೆ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲಿನ ಪ್ರಾಣಿ ಸಂಕುಲ ಭಯದಿಂದ ನಾಡು ಸೇರಿ ಜನರ ಜೀವನದ ಅಸ್ತಿತ್ವಕ್ಕೆ ಧಕ್ಕೆ ಬರಬಹುದು ಹಾಗೂ ಪ್ಲಾಸ್ಟಿಕ್ ಮತ್ತು ಮತ್ತಿತರ ವಸ್ತುಗಳ ಬಳಕೆ ಹೆಚ್ಚಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಹಾಗೂ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಕಪ್ಪತ್ತಗುಡ್ಡವನ್ನು ಯಥಾರೀತಿ ಕಾಯ್ದುಕೊಳ್ಳಬೇಕು ಎಂಬುದು ಪರಿಸರ ಪ್ರಿಯರ ಕಾಳಜಿಯಾಗಿದೆ.

– ಬಸವರಾಜ ಎಮ್.ಯರಗುಪ್ಪಿ.

ಲಕ್ಷ್ಮೇಶ್ವರ

(ಮಾಹಿತಿ ಕೃಪೆ: ಅರಣ್ಯ, ಪ್ರವಾಸೋದ್ಯಮ ಇಲಾಖೆ)

ಅತಿಯಾದ ಮೊಬೈಲ್ ಬಳಕೆ ತಪ್ಪಿಸಿ

ವಿಜಯಸಾಕ್ಷಿ ಸುದ್ದಿ, ಗದಗ: ನಿರಂತರ ಪುಸ್ತಕ ಓದುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಅತಿಯಾದ ಮೊಬೈಲ್ ದುರ್ಬಳಕೆಯಿಂದ ಬದುಕು ಬೀದಿಗೆ ಬೀಳುವುದು ನಿಶ್ಚಿತ. ಇದನ್ನರಿತು ವಿದ್ಯಾರ್ಥಿಗಳು ಎಚ್ಚರಿಕೆಯ ಹೆಜ್ಜೆಯನ್ನು ಇಡುವುದು ಇಂದು ಅತ್ಯವಶ್ಯವಿದೆ ಎಂದು ಹಿರಿಯ ಶಿಕ್ಷಕ ಎಂ.ಐ. ಶಿವನಗೌಡ್ರ ಅಭಿಪ್ರಾಯಪಟ್ಟರು.

ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಪುಸ್ತಕದ ಮಹತ್ವ ಹಾಗೂ ಮೊಬೈಲ್ ಬಳಕೆ ಮತ್ತು ದುರ್ಬಳಕೆಯ ಬಗ್ಗೆ ಹೊರತಂದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪುಸ್ತಕದೊಂದಿಗೆ ನಿರಂತರ ತಮ್ಮ ಸ್ನೇಹ ಇರಲಿ. ಓದುವ ಹವ್ಯಾಸ ರೂಢಿ ಮಾಡಿಕೊಳ್ಳಿ. ಪುಸ್ತಕ ಹೇಳುತ್ತದೆ-ತಲೆ ತಗ್ಗಿಸಿ ನನ್ನನ್ನು ನೋಡು, ನಾನು ಸದಾ ತಲೆ ಎತ್ತುವಂತೆ ಮಾಡುತ್ತೇನೆ. ಮೊಬೈಲ್ ಹೇಳುತ್ತದೆ-ತಲೆ ತಗ್ಗಿಸಿ ನನ್ನನ್ನು ಒಮ್ಮೆ ನೋಡು, ಮತ್ಯಾವತ್ತೂ ನಿನ್ನನ್ನು ತಲೆ ಎತ್ತದಂತೆ ಮಾಡುತ್ತೇನೆ. ಇಂತಹ ಸಂದೇಶವುಳ್ಳ ಕಿರುಪತ್ರವನ್ನು ಇಂದು ಶಾಲೆಯಲ್ಲಿ ಪ್ರತಿ ಕೋಣೆಗೆ ಅಂಟಿಸಲಾಗಿದೆ. ದಿನಕ್ಕೆ ಒಂದು ಬಾರಿಯಾದರೂ ಈ ಸಂದೇಶವನ್ನು ಮೆಲುಕು ಹಾಕಿದರೆ ನಿಮ್ಮ ಜೀವನ ಯಶಸ್ವಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಂಕ್ರಮ್ಮ ಆರ್.ಹಣಮಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್, ಶಾರದಾ ಬಾಣದ ಮುಂತಾದವರು ಉಪಸ್ಥಿತರಿದ್ದರು. ಸಂಜೀವಿನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮೀ ಅಣ್ಣಿಗೇರಿ ಮಾತನಾಡಿ, ವಿದ್ಯಾರ್ಥಿ ಜೀವನವೆಂದರೆ ಸುವರ್ಣಕಾಲ. ಇದರ ಸದುಪಯೋಗವನ್ನು ಮಾಡಿಕೊಂಡು ಬಂಗಾರದಂತಹ ಬದುಕನ್ನು ಕಟ್ಟಿಕೊಳ್ಳಲು ಇದು ಅತ್ಯಂತ ಮಹತ್ವದ ಕಾಲಘಟ್ಟ. ಈ ಶಾಲೆಯಲ್ಲಿ ನಿಮಗೆ ಉತ್ತಮ ಶೈಕ್ಷಣಿಕ ವಾತಾವರಣನ್ನು ಕಲ್ಪಿಸಲಾಗಿದೆ. ಈ ಕರಪತ್ರಗಳು ತಮ್ಮ ಬದುಕಿನ ಪಥವನ್ನು ಬದಲಿಸಲಿ ಎಂದು ಹೇಳಿದರು.

ಅಣ್ಣಿಗೇರಿ ಆಶ್ರಮದಿಂದ ನಿತ್ಯ ಅಕ್ಷರ ದಾಸೋಹ

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಮೋಘವಾದದ್ದು. ಗುರುಕುಲ ಮಾದರಿಯ ಆಶ್ರಮದಲ್ಲಿ ಇಂದಿಗೂ ನಿತ್ಯ ಅನುಭವಿಕ ಶಿಕ್ಷಕ ತಂಡದಿಂದ ‘ಅಕ್ಷರ ದಾಸೋಹ’ ನಡೆದಿರುವದು ಅಭಿನಂದನೀಯ ಎಂದು ಗದುಗಿನ ಹಿರಿಯ ತೆರಿಗೆ ಸಲಹೆಗಾರರಾದ ಮುಕುಂದ ಪೋತ್ನೀಸ್ ಹೇಳಿದರು.

ಅವರು ಗುರುವಾರ ಗದಗ ತಾಲೂಕಿನ ಅಂತೂರಬೆಂತೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಿಗೇರಿ ಗುರುಗಳು ಗದುಗಿನಲ್ಲಿ ತಾವಿದ್ದ ಕೊಠಡಿಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಟ್ಯೂಶನ್ ಹೇಳುವ ಪರಿಪಾಠವಿಟ್ಟುಕೊಂಡವರು. ಈ ಟ್ಯೂಶನ್ ಹೇಳುವ ಸುದ್ದಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಕಾಲಕ್ರಮೇಣ ಅದು ಗುರುಕುಲ ಮಾದರಿಯಲ್ಲಿ ಬೆಳೆದು ಬಂತು. ಅವರ ತರುವಾಯ ಅವರ ಶಿಷ್ಯರು ಈ ಗುರುಕುಲವನ್ನು ಪ್ರಗತಿಪಥದಲ್ಲಿ ಮುನ್ನಡೆಸಿಕೊಂಡು ಬಂದಿರುವದು ಶ್ಲಾಘನೀಯ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಆರ್.ಡಿ. ಜೋಶಿ ವಹಿಸಿದ್ದರು. ವೇದಿಕೆಯ ಮೇಲೆ ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಸಚಂದ್ರ ಬೆಟ್ಟದೂರ, ಶಿವಾನಂದ ಕತ್ತಿ, ಸಹಾಯಕರಾದ ನೇಹಾ, ಸುಧಾರಾಣಿ, ಗ್ರಾಮದ ಗಣ್ಯರಾದ ನಿಂಗಪ್ಪ ಮ್ಯಾಗೇರಿ ಉಪಸ್ಥಿತರಿದ್ದರು.

ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಈಶ್ವರಿ ದೊಡ್ಡಗೌಡ್ರ, ಸಂಜನಾ ಗಾಣಿಗೇರ, ಸಾಕ್ಷೀ ಜನಗೊಣ್ಣವರ, ದೀಪಾ ಯಂಗಾಡಿ, ಯಶೋದಾ ಬಾವಿಕಟ್ಟಿ ಅವರುಗಳಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಲಾಯಿತು. ಶಿಕ್ಷಕ ಪಿ.ಸಿ. ಸೊಲಬಣ್ಣವರ ಸ್ವಾಗತಿಸಿ ವಂದಿಸಿದರು.

ಹುಲಕೋಟಿಯಲ್ಲಿ: ಹುಲಕೋಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮೀ ಹಿರೇಮಠ, ಅಪೂರ್ವ ಲಕ್ಷ್ಮೇಶ್ವರ, ಪವಿತ್ರಾ ಅಕ್ಕಿ, ಸಪ್ನಾ ಕಲಾಲ, ಮಧು ಬಳ್ಳಾರಿ ಅವರುಗಳಿಗೆ ಅವರುಗಳಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಎಸ್.ಎ. ಖಾನ್ ವಹಿಸಿದ್ದರು. ಯೋಗೇಶ್‌ಕುಮಾರ ಸ್ವಾಗತಿಸಿದರು, ಪಿ.ಪಿ. ಟಿಕಾರೆ ನಿರೂಪಿಸಿದರು. ಕೊನೆಗೆ ಎಸ್.ಎಚ್. ಮುಲ್ಲಾ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಸಚಂದ್ರ ಬೆಟ್ಟದೂರ, ಶಿವಾನಂದ ಕತ್ತಿ, ಸಿದ್ದು ಕವಲೂರ, ತೋಂಟೇಶ ವೀರಲಿಂಗಯ್ಯನಮಠ, ಭಾರತಿ ಪಾಟೀಲ ನೇಹಾ, ಸುಧಾರಾಣಿ, ಅನ್ನಪೂರ್ಣ ಹಿತ್ತಲಮನಿ ಮುಂತಾದವರಿದ್ದರು.

ಇಂದಿನ ಕಾರ್ಯಕ್ರಮ

ಜುಲೈ 4ರಂದು ಮುಂಜಾನೆ 10.30 ಗಂಟೆಗೆ ಗದಗ ತಾಲೂಕಿನ ಸೊರಟೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್, ಮಧ್ಯಾಹ್ನ 12 ಗಂಟೆಗೆ ಯಲಿಶಿರೂರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ, ಮಧ್ಯಾಹ್ನ 1.30 ಗಂಟೆಗೆ ಶಿರುಂಜ ಗ್ರಾಮದ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರವಿದೆ.

ನಾಳೆಯ ಕಾರ್ಯಕ್ರಮ

ಜುಲೈ 5ರಂದು ಮುಂಜಾನೆ 10.30 ಗಂಟೆಗೆ ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಮಧ್ಯಾಹ್ನ 12 ಗಂಟೆಗೆ ಹಾತಲಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವದು ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ತಿಳಿಸಿದ್ದಾರೆ.

ಒಂದೇ ವೇದಿಕೆಯಲ್ಲಿ ಹಲವಾರು ಆಯ್ಕೆಗೆ ಅವಕಾಶ

ವಿಜಯಸಾಕ್ಷಿ ಸುದ್ದಿ, ಗದಗ: ಹಾಲುಮತ ಮಹಾಸಭಾ ಜಿಲ್ಲಾ ಘಟಕ ಹಾಗೂ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಆಗಸ್ಟ್ 3ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮುಳಗುಂದ ರಸ್ತೆಯಲ್ಲಿರುವ ಶ್ರೀ ಕನಕ ಭವನದಲ್ಲಿ ಹಾಲುಮತ (ಕುರುಬ) ಸಮಾಜದ 7ನೇ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಹಾಗೂ ಗದಗ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 250ಕ್ಕೂ ಹೆಚ್ಚು ವಧು-ವರರು ಆಗಮಿಸಲಿದ್ದಾರೆ. ಈ ಸಮಾವೇಶದಲ್ಲಿ ವಧು-ವರರಿಗೆ ಹಾಲುಮತದ ಸಂಪ್ರದಾಯದಂತೆ ಉಡಿತುಂಬಿ ಪರಿಚಯಿಸಲಾಗುವದು. ಇದೇ ಸಂದರ್ಭದಲ್ಲಿ ಸಮಾಜದ ಐವರು ಹಿರಿಯರಿಗೆ ಜೀವಮಾನ ಸಾಧನೆಗಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಈ ಸಮಾವೇಶದಲ್ಲಿ ಬೇರೆ ಬೇರೆ ಊರುಗಳಿಂದ ವಧು-ವರರು ಆಗಮಿಸುವದರಿಂದ ಒಂದೇ ವೇದಿಕೆಯಲ್ಲಿ ಹಲವಾರು ಆಯ್ಕೆಗಳಿಗಾಗಿ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಪಾಲಕರಿಗೆ ಸಮಯದ ಉಳಿತಾಯ ಹಾಗೂ ಸೂಕ್ತ ವಧು-ವರರನ್ನು ಆಯ್ಕೆ ಮಾಡುವ ಸದವಕಾಶವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ಈಗಾಗಲೇ ಹೆಸರು ನೋಂದಣಿ ಕಾರ್ಯ ಆರಂಭವಾಗಿದ್ದು, ಆಸಕ್ತರು ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿ ಶ್ರೀ ಬನಶಂಕರಿ ದೇವಿ ದೇವಸ್ಥಾನದ ಆವರಣ ಗಂಗಾಪುರ ಪೇಟೆ ಗದಗದಲ್ಲಿ ಸದಸ್ಯತ್ವ ಶುಲ್ಕದೊಂದಿಗೆ ಹೆಸರನ್ನು ನೋಂದಾಯಿಸಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರದೇಶ ಕುರುಬ ಸಂಘದ ಗದಗ ತಾಲೂಕಾಧ್ಯಕ್ಷ ನಾಗಪ್ಪ ಗುಗ್ಗರಿ, ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮಾ ದ್ಯಾವನೂರ, ಕುರುಬರ ಸಂಘದ ರಾಜ್ಯ ನಿರ್ದೇಶಕಿ ಚನ್ನಮ್ಮ ಹುಳಕಣ್ಣವರ, ಹಾಲುಮತ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷ ಬಸವರಾಜ ನೀಲಗಾರ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ರಾಘು ವಗ್ಗನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತು ಜಡಿ, ಸತೀಶ ಗಿಡ್ಡಹನಮಣ್ಣವರ, ಮಂಜುನಾಥ ಜಡಿ, ಹೇಮಂತ ಗಿಡ್ಡಹನಮಣ್ಣವರ, ಉಮೇಶ ಪೂಜಾರ, ಬಸವರಾಜ ಕುರಿ, ಕುಮಾರ ಮಾರನಬಸರಿ, ರವಿ ವಗ್ಗನವರ ಮುಂತಾದವರು ಉಪಸ್ಥಿತರಿದ್ದರು.

ನೋಂದಣಿಗಾಗಿ ವೆಂಕಟೇಶ ಇಮರಾಪೂರ-9742842133 ಮುತ್ತು ಜಡಿ-9880831983 ಅವರನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ನಾಗರಾಜ ಮೆಣಸಗಿ-9448746400, ಬಸವರಾಜ ನೀಲಗಾರ-8970974959, ಸೋಮನಗೌಡ ಪಾಟೀಲ-9845636775 ಅವರನ್ನು ಸಂಪರ್ಕಿಸಬಹುದು ಎಂದು ರುದ್ರಣ್ಣ ಗುಳಗುಳಿ ಹೇಳಿದರು.

`ಸಿರಿಸಿಂಗಾರಿ ಭಾಗ್ಯದಂಬಾರಿ’ ಯಕ್ಷಗಾನ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀ ವೀರನಾರಾಯಣ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕವಿ ಬೇಳೂರು ವಿಷ್ಣುಮೂರ್ತಿ ನಾಯಕ್ ವಿರಚಿತ `ಸಿರಿಸಿಂಗಾರಿ ಭಾಗ್ಯದಂಬಾರಿ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದರು.

ವಿ.ಆ. ವೀರಚಂದ್ರಹಾಸ ಚಲನಚಿತ್ರದ ಕಥಾನಾಯಕ ಶಿಥಿಲ್ ಶೆಟ್ಟಿ, ನಾಯಕ ನಟಿ ನಾಗಶ್ರೀ ಅಭಿನಯಿಸಿದ ಈ ಯಕ್ಷಗಾನವನ್ನು ಹೊಟೇಲ್ ಒಡೆಯರ ಸಂಘದ ಗದಗ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಹೊಟೇಲ್ ಒಡೆಯರ ಸಂಘದಿಂದ ಗದಗ ನಗರದಲ್ಲಿ ಕರಾವಳಿಯ ಪ್ರಸಿದ್ಧ ಯಕ್ಷಗಾನ ಕಲೆಯನ್ನು ಗದಗ ಜನತೆಗೆ ಪ್ರದರ್ಶಿಸಲು ಆಗಮಿಸಿದ ಈ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.

ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾವೆಂಶ್ರೀರವರ ನಿಧನಕ್ಕೆ 2 ನಿಮಿಷ ಮೌನಾಚರಣೆ ಮಾಡಿ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸುಧಾಕರ ಶೆಟ್ಟಿ, ರಂಜಿತ ಶೆಟ್ಟಿ, ಯು.ಬಿ. ಹುಬ್ಬಳ್ಳಿ, ಸುಕುಮಾರ ಶೆಟ್ಟಿ, ಜಯಪಾಲಶೆಟ್ಟಿ, ಶಿವಯ್ಯ ನಾಲ್ವಾತಡಮಠ, ನಾಗಶ್ರೀ ಜಿ.ಎಸ್., ಶಿಥಿಲ್ ಶೆಟ್ಟಿ, ಜಯದೇವ ಭಟ್ಟ ಸೇರಿದಂತೆ ಚೇಂಬರ್ ಆಫ್ ಕಾಮರ್ಸ್ ಅಸೋಸಿಯೇಶನ್ ಗದಗ, ಬಾರ್ ಅಸೋಸಿಯೇಶನ್ ಗದಗ, ರೋಟರಿ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜ್ಞಾನ ಸಾಧನೆಯೆಂಬುದು ತಪಸ್ಸಿದ್ದಂತೆ

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರವಚನ ಬದುಕಿಗೆ ಬೆಳಕು ನೀಡುತ್ತದೆ. ಉತ್ತರ ಕರ್ನಾಟಕದ ಜನರಲ್ಲಿ ಭಕ್ತಿ ಭಾವ ಹೆಚ್ಚು ಕಾಣುತ್ತದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಅಭಿಪ್ರಾಯಪಟ್ಟರು.

ಅವರು ಬುಧವಾರ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ವಾದಿರಾಜ ರಾಯ್ಕರ ಅವರು ಆಯೋಜಿಸಿದ್ದ ಸಂಕಷ್ಟಹರ ಗಣಪತಿ ವೃತದ ಉದ್ಯಾಪನಾ ಮಹಾಯಾಗದ ಉದ್ಘಾಟನಾ ನೆರವೇರಿಸಿ ಮಾತನಾಡಿದರು.

ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಮಾತನಾಡಿ, ಜ್ಞಾನ ಸಾಧನೆ ಪರಿಶ್ರಮದಿಂದ ಬರುತ್ತದೆ. ಅದೊಂದು ತಪಸ್ಸು. ಅವರ ತಪಸ್ಸಿನ ಫಲ ನಮಗೂ ಪ್ರಾಪ್ತಿಯಾಗುತ್ತದೆ. ರಾಯ್ಕರ ಕುಟುಂಬ ಜ್ಞಾನ ಹಂಚುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಆಶೀರ್ವಚನ ನೀಡಿದ ಧಾರವಾಡ ಮುರುಘಾಮಠ ಹಾಗೂ ಮುಳಗುಂದ ಗವಿಮಠದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾಡು ಕಂಡ ಅದ್ವಿತೀಯ ಪ್ರವಚನಕಾರ ಪಾವಗಡ ಪ್ರಕಾಶ ರಾವ್. ಇಂದು ಮಹಾಕಾವ್ಯಗಳನ್ನು ಓದುವವರೇ ಇಲ್ಲ. ಆಧ್ಯಾತ್ಮ ಪ್ರವಚನ ಎಂದರೆ ಸತ್ಯದ ಅರಿವು. ಮುನಿಗಳು ವಾಸಿಸಿದ ಈ ಮುನಿಪುರದಲ್ಲಿ ಅದೇ ಸಂಸ್ಕಾರ ಮುಂದುವರೆದಿದೆ. ಮನುಷ್ಯನಲ್ಲಿ ಜ್ಞಾನವಿದ್ದಾಗ ಬದುಕು ಬಂಗಾರ. ಅಧ್ಯಾತ್ಮದಲ್ಲಿ ನಿಮ್ಮನ್ನೂ ತೊಡಗಿಸಿಕೊಳ್ಳಿ ಎಂದರು.

ಮುಖ್ಯ ಆಹ್ವಾನಿತರಾಗಿ ಪಾವಗಡ ಪ್ರಕಾಶ ರಾವ್, ಸಾಗರದ ರವೀಂದ್ರ ಮುದ್ರಣಾಲಯದ ವಾಯ್.ಎ. ದಂತಿ, ವೈದ್ಯರಾದ ಡಾ. ಎಸ್.ಸಿ. ಚವಡಿ, ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ಎಸ್‌ಜೆಜೆಎಂ ಸಂಯುಕ್ತ ಮಹಾವಿದ್ಯಾಲಯದ ಚೇರಮನ್ ಎಂ.ಡಿ. ಬಟ್ಟೂರ ಭಾಗವಹಿಸಿದ್ದರು. ಸಿದ್ದು ವೈ.ಕೆ ಸ್ವಾಗತಿಸಿದರು. ಪ್ರಾಚಾರ್ಯ ಎಸ್.ಎ. ಯಳವತ್ತಿ ನಿರೂಪಿಸಿದರು.

‘ಮುನ್ನುಡಿ’ ಚಲನಚಿತ್ರ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ: ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಕೇವಲ ಕ್ಲಾಸ್ ರೂಮ್, ಪಾಠ-ಪ್ರವಚನಗಳಷ್ಟೇ ಅಲ್ಲ, ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗುವ ಚಿತ್ರ ವೀಕ್ಷಣೆಯೂ ಬಲು ಅಗತ್ಯ ಎಂಬುದನ್ನು ಮನಗಂಡು ನಮ್ಮ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ `ಮುನ್ನುಡಿ’ ಚಲನಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ ಎಂದು ಮಹಾವಿದ್ಯಾಲಯದ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ ಹೇಳಿದರು.

ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ‘ಮುನ್ನುಡಿ’ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಸ್ಥೆಯ ನಿರ್ದೇಶಕ ಪ್ರೊ. ಸೈಯ್ಯದ್ ಮತೀನ್ ಮುಲ್ಲಾ ಸಾಂದರ್ಭಿಕವಾಗಿ ಮಾತನಾಡಿದರು. ಮಹಾ ವಿದ್ಯಾಲಯದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಎಲ್ಲ ವಿದ್ಯಾರ್ಥಿಗಳೂ ಚಿತ್ರವನ್ನು ವೀಕ್ಷಿಸಿ ಮೆಚ್ಚಿ, ಸಾಧನೆಗೆ ಪಣ ತೊಟ್ಟರು.

ವೇದಿಕೆಯ ಮೇಲೆ ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ, ಪ್ರೊ. ಸೈಯ್ಯದ್ ಮತೀನ್ ಮುಲ್ಲಾ, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭಾರತೀಯ ಸೇನೆಗೆ ಆಯ್ಕೆ: ಸನ್ಮಾನ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಭಾರತಾಂಬೆಯ ಸೇವೆ ಮಾಡಲು ನಮ್ಮ ತನು, ಮನ, ಧನ ಅರ್ಪಿಸಿಕೊಳ್ಳುವುದು ಅವಶ್ಯಕವೆಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ಮಾಸುಮಲಿ ಮದಗಾರ ಹೇಳಿದರು.

ಸ್ಥಳೀಯ ಕಟ್ಟಿಬಸವೇಶ್ವರ ರಂಗಮಂದಿರ ನಿವಾಸಿ ಸಂಗಪ್ಪ ವಡಗೇರಿ ಇವರ ಮೊಮ್ಮಗ ಆಕಾಶ ಕವಡಿಮಟ್ಟಿ ಭಾರತೀಯ ಸೇನೆಗೆ ನೇಮಕಗೊಂಡಿರುವ ನಿಮಿತ್ತ ಅವರನ್ನು ಕುಟುಂಬ ಸಹಿತವಾಗಿ ಸನ್ಮಾನಿಸಿ ಮಾತನಾಡಿದರು.

ಭಾರತೀಯ ಸೇನೆಗೆ ಸೇರಲು ಅನೇಕ ಯುವಕರು ವರ್ಷಾನುಗಟ್ಟಲೆ ಸಾಕಷ್ಟು ಕಷ್ಟಪಡುತ್ತಾರೆ. ಭಾರತಾಂಬೆಯ ಸೇವೆ ಮಾಡಲು ಪೂರ್ವಜರ ಆಶಿರ್ವಾದ ಹಾಗೂ ಸ್ವಂತ ಶ್ರಮ ಅಗತ್ಯ. ಯುವಕರು ದೈಹಿಕವಾಗಿ, ಮಾನಸಿಕವಾಗಿ ಸದಾ ತಾಯ್ನಾಡಿನ ಸೇವೆ ಮಾಡಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಕಮಿಟಿಯ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಸೇರಿದಂತೆ ಮದಗಾರ ಕುಟುಂಬದ ಸದಸ್ಯರು ಇದ್ದರು.

error: Content is protected !!