ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರಿಗೆ ಒಳಮೀಸಲಾತಿ ನೀಡುವ ಬದಲು ಗೊಂದಲ ಸೃಷ್ಟಿಸಿ ವಿಷಬೀಜ ಬಿತ್ತಿ ಬೀದಿಯಲ್ಲಿ ನಿಂತು ಬಡಿದಾಡುವಂತೆ ಮಾಡಿದೆ. ನಾಡಿನ ಜನ ಇವರನ್ನು ಕ್ಷಮಿಸುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಹಿಂದ ನಾಯಕ ಎನಿಸಿಕೊಳ್ಳಲು ಯೋಗ್ಯತೆ ಇಲ್ಲ. ದಲಿತ ಸಮುದಾಯಗಳಿಗೆ ಅವರು ದೊಡ್ಡ ಮೋಸ ಮಾಡಿದ್ದಾರೆ. 30 ವರ್ಷಗಳಿಂದ ರಾಜ್ಯದಲ್ಲಿ ಒಳಮೀಸಲಾತಿಗೆ ಹೋರಾಟ ನಡೆಯುತ್ತಿದೆ.
ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳ ಆಗಬೇಕು ಎಂಬ ಬೇಡಿಕೆ ಇದೆ. ಆದರೆ ಇದನ್ನು ಲೆಕ್ಕಿಸದೆ ಕಾಂಗ್ರೆಸ್ ಸರ್ಕಾರ ಕೋರ್ಟ್ ಆದೇಶವನ್ನೇ ಬದಲಿಸಿ ಸರಿಯಾಗಿ ಮೀಸಲಾತಿ ಅನುಷ್ಠಾನ ಮಾಡಲಿಲ್ಲ ಎಂದು ಹೇಳಿದರು.
ಮೀಸಲಾತಿ ವಿಷಯದಲ್ಲಿ ಜಾತಿಗಳ ಮಧ್ಯೆ ಜಗಳ ಹಚ್ಚಬೇಡಿ. ಕೋರ್ಟ್ ಆದೇಶ ಮಾರ್ಪಾಡು ಮಾಡಿ ಕಡಿಮೆ ಮೀಸಲಾತಿ ನೀಡುವ ನಿಮ್ಮನ್ನು ಅಹಿಂದ ನಾಯಕ ಎಂದು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು. ಒಳಮೀಸಲಾತಿಗೆ ರಾಜ್ಯದಲ್ಲಿ ಹೋರಾಟ ತೀವ್ರಗೊಂಡಾಗ ನ್ಯಾ. ಸದಾಶಿವ ಆಯೋಗವನ್ನು ಕಾಂಗ್ರೆಸ್ ಸರ್ಕಾರ ನೇಮಿಸಿತ್ತು.
ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ತರಿಸಿಕೊಂಡಿತ್ತು. ಬಿಜೆಪಿ ಸರ್ಕಾರ ಇದ್ದಾಗ ದಲಿತರ ಹೋರಾಟಕ್ಕೆ ಮಾನ್ಯತೆ ನೀಡಿ ಬಸವರಾಜ ಬೊಮ್ಮಾಯಿ ಅವರು ಜನಸಂಖ್ಯೆಗೆ ಅನುಗುಣಾಗಿ ಎಸ್ಸಿಗೆ ಶೇ15 ರಿಂದ ಶೇ17, ಎಸ್ಟಿಗೆ ಶೇ 3 ದಿಂದ ಶೇ 7 ಮಾಡಿದರು. ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾಲ್ಕು ವರ್ಗೀಕರಣ ಮಾಡಿದರು ಎಂದು ವಿವರಿಸಿದರು.
ಕಾನೂನು ಸಚಿವರಾದ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಸಂಪುಟದ ಉಪ ಸಮಿತಿ ವರದಿ ಪಡೆದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಎಸ್ಸಿಯಲ್ಲಿ ಮಾದಿಗರು ಮತ್ತು ಸಂಬಂಧಿತ ಜಾತಿಗಳಿಗೆ ಶೇ 6 ಮತ್ತು ಛಲವಾದಿ ಮತ್ತು ಉಪ ಜಾತಿಗಳಿಗೆ 5.5 ಪಸೆರ್ಂಟ್,
ಲಂಬಾಣಿ, ಬೋವಿ, ಕೊರಮ ಕೊರಚಕ್ಕೆ 4.5 ಪರ್ಸೆಂಟ್, ಅಲೆಮಾರಿಗೆ ಶೇ 1 ನೀಡಲು 2022 ರಲ್ಲಿ ಎರಡೂ ಸದನದಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅನುಮೋದನೆ ಪಡೆದು ಕಾನೂನು ಮಾಡಲಾಗಿತ್ತು. 4 ವರ್ಷಗಳ ಕಾಲ 17 ಮತ್ತು 7 ಪರ್ಸೆಂಟ್ ಎಸ್ಟಿ/ ಎಸ್ಸಿಗೆ ಮೀಸಲಾತಿ ಸೌಲಭ್ಯ ಸಿಕ್ಕಿತ್ತು ಎಂದರು.
ಸಿದ್ದರಾಮಯ್ಯ ಸರ್ಕಾರ ಕೋರ್ಟ್ಗೆ ಸರಿಯಾಗಿ ಮನವರಿಕೆ ಮಾಡಿಕೊಡದೆ, ಸಾಮಾಜಕ ನ್ಯಾಯದ ಅಡಿ ಸಂವಿಧಾನದ ಆಶಯಗಳಿಗೆ ಅನುಗುಣ ಜಾರಿ ಮಾಡದೆ ಭಾಗಶಃ ತಡೆ ನೀಡಿದ ನಂತರ ಮೆಮೊ ಹಾಕಿದರು. ನಾವು ಹದಿನೇಳು ಮತ್ತು ಏಳು ಪರ್ಸೆಂಟ್ ಕೊಡಲ್ಲ. 1995 ರ ಆದೇಶದ ಅನ್ವಯ 15 ಶೇ ಎಸ್ಸಿಗೆ, 3 ಶೇ ಎಸ್ಟಿಗೆ ಕೊಡುತ್ತೇವೆ ಎಂದರು; ಅನುಮತಿ ಕೇಳಿದರು.
ವಿಧಿ ಇಲ್ಲದೆ ಒಪ್ಪಿತು. ಯಾವುದೇ ಕೋರ್ಟ್ 17 ಮತ್ತು 7 ಶೇಕಡಾಕ್ಕೆ ತಡೆ ನೀಡಿಲ್ಲ. ವಿರೋಧ ಸಹ ಮಾಡಿಲ್ಲ. ಇವರೇ ಬರೆದುಕೊಟ್ಟು ಕಡಿಮೆ ಮಾಡಿ ದಲಿತರಿಗೆ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡಿದೆ. ಇವರು ಅಹಿಂದ ನಾಯಕ ಎಂಬ ಗೌರವವನ್ನು ಕಳೆದಕೊಂಡರು. ಆದೇಶ ಮಾರ್ಪಾಡು ಮಾಡಿ ಕಡಿಮೆ ಮಾಡುತ್ತಾರೋ ಅವರು ಅಹಿಂದ ನಾಯಕ ಅಲ್ಲ ಎಂದರು.

