Home Blog Page 7

ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅಪಹರಣ: ವಿಶೇಷ ತಂಡಗಳಿಂದ ಶೋಧ ಕಾರ್ಯಾಚರಣೆ!

ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಕರ್ಪೂರು ಗೇಟ್ ಬಳಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅಲಿಯಾಸ್ ಗೋಪಿ ಕಿಡ್ನ್ಯಾಪ್ ಆಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್, ಮಾರ್ಚ್ 8ರಂದು ಸಂಜೆ 7.30ರ ಸುಮಾರಿಗೆ ಕಿಡ್ನ್ಯಾಪ್ ಆಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಗೋಪಾಲ್ ರಿಯಲ್ ಎಸ್ಟೇಟ್ ಮತ್ತು ಹಣಕಾಸು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.

ಕುಟುಂಬದ ಆರೋಪದ ಪ್ರಕಾರ, ಕರ್ಪೂರು ಗೇಟ್ ಬಳಿ ಗೋಪಾಲ್ ಹಾಗೂ ಸತೀಶ್ ಇದ್ದ ಕಾರಿಗೆ ವಾಹನದಿಂದ ಡಿಕ್ಕಿ ಹೊಡೆದು ಕಿಡಿಗೇಡಿಗಳು ಸ್ಪ್ರೇ ಬಳಸುವ ಮೂಲಕ ದಾಳಿ ನಡೆಸಿ ಅವರನ್ನು ಅಪಹರಿಸಿದ್ದಾರೆ.

ಘಟನೆಯ ನಂತರ, ಜಿಗಣಿ ಪೊಲೀಸರು, ಮೂರು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ಆರೋಪಿಗಳಾದ ಮೋಹನ್ ಬಾಬು, ಹರೀಶ್ ಮತ್ತು ಕಿರಣ್ ಅವರನ್ನು ಗೋಪಾಲ್ ಪತ್ನಿಯ ಆರೋಪದ ಆಧಾರದ ಮೇಲೆ ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಇಂದು ಬೆಳಗಿನ 9 ಗಂಟೆಗೆ 7 ವಿಶೇಷ ಶೋಧ ತಂಡಗಳನ್ನು ರಚಿಸಿ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಬೆಂಗಳೂರಿನ ಗ್ರಾಮಾಂತರ ಎಸ್‌ಪಿ ಚಂದ್ರಕಾಂತ್ ಮತ್ತು ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಪೊಲೀಸರು ಅಪಹರಣಗೊಂಡ ಗೋಪಾಲರನ್ನು ಶೀಘ್ರ ಪತ್ತೆಹಚ್ಚಲು ಎಲ್ಲಾ ದಿಕ್ಕುಗಳಲ್ಲಿ ತೀವ್ರ ತನಿಖೆ ನಡೆಸುತ್ತಿದ್ದಾರೆ.

 

‘ಮನೆಗೆ ಊಟಕ್ಕೆ ಬಾ’: ಪುಟ್ಟ ಅಭಿಮಾನಿಯ ಪ್ರಶ್ನೆಗೆ ವಿಜಯ್ ದೇವರಕೊಂಡ ಮುದ್ದಾದ ಉತ್ತರ

ಟಾಲಿವುಡ್‌ನ ‘ರೌಡಿ ಬಾಯ್’ ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಉದಯಪುರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹವಾದರು. ಮದುವೆಯ ಬಳಿಕ ಮಾರ್ಚ್ 4ರಂದು ಹೈದರಾಬಾದ್ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ಧೂರಿ ಆರತಕ್ಷತೆ ಆಯೋಜಿಸಲಾಗಿತ್ತು.

ಈ ಸಂಭ್ರಮದ ನಡುವೆ ಪುಟ್ಟ ಅಭಿಮಾನಿಯೊಬ್ಬಳು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ವಿಜಯ್ ದೇವರಕೊಂಡ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮದುವೆಗೆ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ ಎಂಬ ಕಾರಣಕ್ಕೆ ಪುಟ್ಟ ಬಾಲಕಿಯೊಬ್ಬಳು ವಿಡಿಯೋ ಮೂಲಕ, “ನಾನು ನಿಮ್ಮ ಫ್ಯಾನ್ ಅಲ್ವಾ? ನಮಗೇನು? ನನ್ನನ್ನು ಯಾಕೆ ಮದುವೆಗೆ ಕರೆಯಲಿಲ್ಲ?” ಎಂದು ಮುದ್ದಾಗಿ ಪ್ರಶ್ನಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅದು ವಿಜಯ್ ದೇವರಕೊಂಡ ಗಮನಕ್ಕೂ ಬಂದಿದೆ.

ಮಹಿಳಾ ಗೌರವ ಮನೆಯಿಂದಲೇ ಆರಂಭವಾಗಬೇಕು: ನಟ ಎನ್‌ಟಿಆರ್‌

ಮಹಿಳೆಯರಿಗೆ ಗೌರವ ನೀಡುವ ಮನೋಭಾವ ಮನೆಮಟ್ಟದಿಂದಲೇ ಆರಂಭವಾಗಬೇಕು ಎಂದು ಪ್ಯಾನ್ ಇಂಡಿಯಾ ನಟ ಜೂ ಎನ್ಟಿಆರ್ ಹೇಳಿದ್ದಾರೆ.

ನಗರದ ಕಿಮ್ಸ್ ಆಸ್ಪತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಹಿಳೆಯರನ್ನು ಹೇಗೆ ನೋಡಬೇಕು ಎಂಬುದನ್ನು ಪದೇ ಪದೇ ನೆನಪು ಮಾಡಿಸಬೇಕಾದ ಪರಿಸ್ಥಿತಿ ಇರುವುದು ಬೇಸರದ ಸಂಗತಿ. ಮಹಿಳೆಯರು ಎಷ್ಟು ಮುಖ್ಯ ಎಂಬುದು ಸಹಜವಾಗಿ ಅರಿವಾಗಬೇಕು” ಎಂದರು.

ತಮ್ಮ ಇಬ್ಬರು ಪುತ್ರರು ಕೂಡ ಮಹಿಳೆಯರಿಗೆ ಗೌರವ ನೀಡುವ ವ್ಯಕ್ತಿಗಳಾಗಿಯೇ ಬೆಳೆಬೇಕು ಎಂದು ನಾನು ಖಾತ್ರಿಪಡಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ರಸ್ತೆ ಸುರಕ್ಷತೆ ಕುರಿತು ಮಾತನಾಡಿದ ಜೂ ಎನ್ಟಿಆರ್, ರಸ್ತೆ ಅಪಘಾತಗಳಿಂದ ತಮ್ಮ ಕುಟುಂಬ ದೊಡ್ಡ ನಷ್ಟ ಅನುಭವಿಸಿದೆ. ನಾನು, ನನ್ನ ದೊಡ್ಡ ಅಣ್ಣ ಹಾಗೂ ತಂದೆಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದೇವೆ. ನಾನು ಕೂಡ ಒಮ್ಮೆ ಭಾರಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದೆ ಎಂದು ನೆನಪಿಸಿಕೊಂಡರು.

ಡ್ರೈವಿಂಗ್ ಮಾಡುವಾಗ ಕುಟುಂಬವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜವಾಬ್ದಾರಿಯಿಂದ ವಾಹನ ಚಲಾಯಿಸಬೇಕು. ಜವಾಬ್ದಾರಿ ಎನ್ನುವುದು ಒಳಗಿನಿಂದಲೇ ಬರಬೇಕು ಎಂದು ಸಲಹೆ ನೀಡಿದರು.

ಅಭಿಮಾನಿಗಳ ಬಗ್ಗೆ ಮಾತನಾಡಿದ ಅವರು, “ನಿಮ್ಮ ಪ್ರೀತಿಯನ್ನು ಪಡೆಯಲು ನಾನು ಅದೃಷ್ಟಶಾಲಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಕೋಟಿ ಕೋಟಿ ಧನ್ಯವಾದಗಳು. ಮನೆಗೆ ಸುರಕ್ಷಿತವಾಗಿ ಹೋಗಿ, ನಮ್ಮ ಕುಟುಂಬದಲ್ಲಿ ನಡೆದ ದುರ್ಘಟನೆ ನಿಮ್ಮ ಮನೆಯಲ್ಲಿ ನಡೆಯಬಾರದು” ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.

2032–33ರ ವೇಳೆಗೆ ಮಹಿಳಾ ಮೀಸಲಾತಿ ಜಾರಿ ಸಾಧ್ಯ: ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನೀಡಿರುವ 33% ಮೀಸಲಾತಿ ಮುಂದಿನ ದಿನಗಳಲ್ಲಿ ಸಂಸದೀಯ ವ್ಯವಸ್ಥೆಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಮಾಹಿತಿಯ ಪ್ರಕಾರ 2032–33ರ ವೇಳೆಗೆ ಮಹಿಳಾ ಮೀಸಲಾತಿ ಸಂಪೂರ್ಣವಾಗಿ ಜಾರಿಗೆ ಬರಬಹುದು ಎಂದು ತಿಳಿಸಿದರು.

33% ಮಹಿಳಾ ಮೀಸಲಾತಿ ಜಾರಿಗೆ ಬಂದರೆ ವಿಧಾನಸಭೆಯಲ್ಲಿ ಸುಮಾರು 75 ಮಹಿಳೆಯರು ಶಾಸಕರಾಗಿ ಆಯ್ಕೆಯಾಗಬಹುದು. ಎಲ್ಲ ಪಕ್ಷಗಳ ಮಹಿಳೆಯರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಹಿಳಾ ಮುಖ್ಯಮಂತ್ರಿಯೂ ಆಗುವ ಅವಕಾಶ ಇದೆ ಎಂದು ಹೇಳಿದರು.

ಇಂದಿನ ದಿನದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರಲು ನರೇಂದ್ರ ಮೋದಿ ಅವರ ಸಂಕಲ್ಪ ಪ್ರಮುಖ ಕಾರಣ. ಇದರ ಕನಸು ಕಂಡವರು ಎಚ್.ಡಿ ದೇವೇಗೌಡ. ಮಹಿಳೆಯರ ಅಭಿವೃದ್ಧಿಗೆ ದೇವೇಗೌಡರು ಹಲವಾರು ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ 70% ಮಹಿಳಾ ಶಿಕ್ಷಕರನ್ನು ನೇಮಕ ಮಾಡಿದವರು ದೇವೇಗೌಡರು ಎಂದು ಕುಮಾರಸ್ವಾಮಿ ಹೇಳಿದರು.

‘ಲವ್ ಮಾಕ್ಟೇಲ್ 3’ ಟ್ರೈಲರ್ ರಿಲೀಸ್:‌ ಗೋವಾದಲ್ಲಿ ಹೊಳೆದ ಐಡಿಯಾ

ಲವ್ ಮಾಕ್ಟೇಲ್ 3 ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಣದ ಹಿಂದೆ ಇರುವ ಆಸಕ್ತಿದಾಯಕ ವಿಚಾರಗಳನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಹಂಚಿಕೊಂಡರು.

ಈ ವೇಳೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, “ಒಂದು ಕ್ಷಣದಲ್ಲಿ ಈ ಸಿನಿಮಾದ ಕಥೆಯ ಐಡಿಯಾ ಹೊಳೆಯಿತು. ನಂತರ ಮನೆಯಲ್ಲಿ ಕಥೆ ಬರೆಯಲು ಆಗಲಿಲ್ಲ. ಮೂರು ದಿನಗಳ ಕಾಲ ಗೋವಾಗೆ ಹೋಗಿ ಅಲ್ಲಿಯೇ ಕಥೆ ಹಾಗೂ ಚಿತ್ರಕಥೆಗೆ ರೂಪುರೇಷೆ ಕೊಟ್ಟು ಮತ್ತೆ ಮರಳಿದ್ದೆ” ಎಂದು ಕಥೆ ಹುಟ್ಟಿದ ಬಗೆಯನ್ನು ವಿವರಿಸಿದರು.

ಇದೇ ವೇಳೆ ಮಾತನಾಡಿದ ಮಿಲನಾ ನಾಗರಾಜ್, “ಈ ಸಿನಿಮಾ ದೊಡ್ಡ ಸಿನಿಮಾಗಳ ಎದುರಲ್ಲೂ ಆತ್ಮವಿಶ್ವಾಸದಿಂದ ತೆರೆಗೆ ಬರಲು ಸಿದ್ಧವಾಗಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂಬ ನಂಬಿಕೆ ನಮಗಿದೆ. ಮೊದಲ ಎರಡು ಭಾಗಗಳಿಗೆ ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಪ್ರೋತ್ಸಾಹವನ್ನು ಈ ಚಿತ್ರಕ್ಕೂ ನೀಡುತ್ತಾರೆ ಎಂಬ ವಿಶ್ವಾಸವಿದೆ” ಎಂದರು.

ಚಿತ್ರದಲ್ಲಿ ನಟಿಸಿರುವ ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೆಚೆಲ್ ಡೇವಿಡ್, ಶ್ವೇತಾ ಪ್ರಸಾದ್ ಸೇರಿದಂತೆ ಹಲವರು ತಮ್ಮ ಪಾತ್ರಗಳ ಬಗ್ಗೆ ವಿವರಿಸಿ, ಈ ಅವಕಾಶ ನೀಡಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಗೆ ಕೃತಜ್ಞತೆ ಸಲ್ಲಿಸಿದರು.

ಕ್ರಿಸ್‌ಮಿ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರೆಚೆಲ್ ಡೇವಿಡ್, ನಯಾರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಸೇರಿದಂತೆ ಹಲವರು ನಟಿಸಿದ್ದಾರೆ.

ಚಿತ್ರಕ್ಕೆ ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಹಾಗೂ ಜೋನಾ ಕಲಾ ನಿರ್ದೇಶನ ನೀಡಿದ್ದಾರೆ.

ದಲಿತ ಸಚಿವರಿಂದಲೇ ದಲಿತರಿಗೆ ಅನ್ಯಾಯ: ಮಹದೇವಪ್ಪ ವಿರುದ್ಧ ಶಿವನಗೌಡ ನಾಯಕ್ ವಾಗ್ದಾಳಿ

0

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಎಸ್‌ಸಿ–ಎಸ್‌ಟಿ ನಾಯಕರ ಬೃಹತ್ ಜನಾಂದೋಲನದಲ್ಲಿ ಮಾಜಿ ಸಚಿವ ಕೆ. ಶಿವನಗೌಡ ನಾಯಕ್ ಅವರು ಸಚಿವ ಎಚ್.ಸಿ ಮಹದೇವಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು, “ದಲಿತ ಸಚಿವನಿಂದಲೇ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು. ನಾವು ಮದಕರಿ ನಾಯಕರ ವಂಶಸ್ಥರು. ಅನ್ಯಾಯದ ವಿರುದ್ಧ ಬೇಟೆಯಾಡುವವರು. ದಲಿತ ಸಚಿವ ಮಹದೇವಪ್ಪ ಅವರಿಂದಲೇ ನಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ತೀವ್ರವಾಗಿ ಮಾತನಾಡಿದ ಅವರು, “ಅವರು ಸಿಕ್ಕರೆ ಕಪಾಳಕ್ಕೆ ಹೊಡೆಯಬೇಕು ಅನಿಸುತ್ತದೆ” ಎಂದು ಹೇಳುವ ಮೂಲಕ ಮಹದೇವಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಹೋರಾಟಕ್ಕೆ ಬರುವವರು ಧೈರ್ಯದಿಂದ ಬರಬೇಕು. “ಮೀಸಲಾತಿ ಪಡೆದುಕೊಂಡು ಧೀರರಾಗಿ ಬರುತ್ತೇವೆ ಅಥವಾ ಶವವಾಗಿ ಬರುತ್ತೇವೆ ಎಂದು ಮನೆಯಲ್ಲಿ ಹೇಳಿಯೇ ಬನ್ನಿ” ಎಂದು ಅವರು ಹೋರಾಟಗಾರರಿಗೆ ಕರೆ ನೀಡಿದರು. ಈ ಹೋರಾಟದಲ್ಲಿ ಏನೇ ಆದರೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕೆ ಬಜೆಟ್ ಸಹಕಾರಿ: ಅನ್ವರ ಶಿರಹಟ್ಟಿ

0

ಗದಗ: ಮಳೆ, ಬಿಸಿಲು, ಛಳಿ ಮತ್ತು ಧೂಳು ಎನ್ನದೆ ಶ್ರಮಪಟ್ಟು ಜೀವನ ಸಾಗಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳು ಕೋವಿಡ್ ಸಂಕಷ್ಟದ ಸಮಯದಲ್ಲೂ ಜನರಿಗೆ ಆಹಾರ ತಲುಪಿಸುವಲ್ಲಿ ಮಹತ್ವದ ತ್ಯಾಗ ಮಾಡಿದ್ದರು. ಇಂತಹ ವ್ಯಾಪಾರಿಗಳ ಅಭಿವೃದ್ಧಿಗೆ ಸಹಾಯಕವಾಗುವ ಬಜೆಟ್ ಅನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವುದು ಸ್ವಾಗತಾರ್ಹವಾಗಿದೆ ಎಂದು ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ಸಂಘದ ನಿರ್ದೇಶಕ ಹಾಗೂ ನೆಟ್ವರ್ಕ್ ಅಸೋಸಿಯೇಟೆಡ್ ಸ್ಟ್ರೀಟ್ ವೆಂಡರ್ಸ್ ಆಫ್ ಕರ್ನಾಟಕದ ಸಂಚಾಲಕ ಅನ್ವರ ಶಿರಹಟ್ಟಿ ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಸಮೀಕ್ಷೆ ನಡೆಸುವುದು, ಗುರುತಿನ ಚೀಟಿ ವಿತರಣೆ, ಮಾರಾಟ ಪರವಾನಗಿ (ಮಾರಾಟ ಪತ್ರ) ನೀಡುವುದು ಹಾಗೂ ಪಟ್ಟಣ ಮಾರಾಟ ಸಮಿತಿಗಳ ರಚನೆಗಾಗಿ ರಾಜ್ಯ ಬಜೆಟ್‌ನಲ್ಲಿ ಏಳು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಸಂತೋಷದ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕ್ರಮವು ರಾಜ್ಯದ ಬೀದಿ ಬದಿ ವ್ಯಾಪಾರಿಗಳ ಸರ್ವಾಂಗೀಣ ಅಭಿವೃದ್ಧಿಗೆ ದಾರಿಯಾಗಲಿದೆ ಎಂದು ಹೇಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಅನ್ವರ ಶಿರಹಟ್ಟಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ತುಮಕೂರು| ವಿದ್ಯುತ್ ಶಾಕ್​​ ತಗುಲಿ ಲೈನ್​​ಮ್ಯಾನ್ ಸಾವು!

ತುಮಕೂರು:- ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸುವಾಗ ಶಾಕ್​ ತಗುಲಿ ಲೈನ್​​ಮ್ಯಾನ್​​ ಮೃತಪಟ್ಟಿರುವ ಘಟನೆ ಜರುಗಿದೆ.

26 ವರ್ಷದ ಕೆ.ಪಿ. ಮನು ಮೃತ ದುರ್ದೈವಿ. ಈತನ ಪತ್ನಿ 9 ತಿಂಗಳ ತುಂಬು ಗರ್ಭಿಣಿ ಎನ್ನಲಾಗಿದೆ. ಟಿಸಿ ಬದಲಾಯಿಸುವ ವೇಳೆ ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದ ಆರೋಪ ಕೇಳಿಬಂದಿದ್ದು, ಲೈನ್​​ಮ್ಯಾನ್​​ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಮತ್ತು ​ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ.

ಘಟನೆ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

‘ಶಿಸ್ತು ಹೆಸರಿನಲ್ಲಿ ಅವಮಾನ’: ವಿದ್ಯಾರ್ಥಿಗಳಿಗೆ ಚಪ್ಪಲಿ ಹಾರ ಹಾಕಿದ ಶಾಲೆ ಮೇಲೆ ತನಿಖೆ

ಅಮರಾವತಿ: ಉಯ್ಯೂರುದಲ್ಲಿರುವ ವಿಜಯಸಾಯಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶಿಸ್ತು ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ. ಶೂ ಧರಿಸದೆ ಬಂದ ಕಾರಣಕ್ಕೆ 10ನೇ ತರಗತಿಯ ವಿದ್ಯಾರ್ಥಿಗಳ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಶಿಕ್ಷೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪದ್ಮರಾಣಿ ಮತ್ತು ದುರ್ಗಾ ಪ್ರಸಾದ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳನ್ನು ಅವಮಾನಿಸಿದ ಶಾಲಾ ಸಿಬ್ಬಂದಿಯನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದು, “ಮಕ್ಕಳು ಶಾಲೆಯ ಶಿಸ್ತು ನಿಯಮ ಉಲ್ಲಂಘಿಸಿದ್ದರಿಂದ ಅವರನ್ನು ಭಯಪಡಿಸಲು ಈ ರೀತಿಯ ಶಿಕ್ಷೆ ನೀಡಲಾಗಿದೆ” ಎಂದು ಹೇಳಿದ್ದಾರೆ.

ಇದಕ್ಕೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಶೂ ಧರಿಸಿ ಬರಲಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಈ ರೀತಿಯಾಗಿ ಅವಮಾನಿಸುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತಿದ್ದು, ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಭಾರತಕ್ಕೆ ಯಾರ ಅನುಮತಿಯೂ ಬೇಡ’: ಅಮೆರಿಕ ಹೇಳಿಕೆಗೆ ಕಮಲ್ ಹಾಸನ್ ತಿರುಗೇಟು

ನವದೆಹಲಿ: ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಇತ್ತೀಚೆಗೆ ಭಾರತಕ್ಕೆ ರಷ್ಯಾ ತೈಲ ಖರೀದಿಸಲು 30 ದಿನಗಳ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದರು. ಇದರಿಂದ ರಾಜಕೀಯ ಚರ್ಚೆ ತೀವ್ರಗೊಂಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಮಲ್ ಹಾಸನ್, “ಭಾರತವು ಸ್ವತಂತ್ರ ರಾಷ್ಟ್ರ. ಇತರ ದೇಶಗಳ ಅನುಮತಿಯ ಮೇಲೆ ನಾವು ಅವಲಂಬಿತರಾಗಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದರ ನಡುವೆಯೇ ಇರಾನ್ಅಮೆರಿಕಇಸ್ರೇಲ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ತೈಲ ಪೂರೈಕೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಲ್ಲೂ ಭಾರತ ಕಡಿಮೆ ಬೆಲೆಗೆ ದೊರೆಯುವ ಯಾವುದೇ ಮೂಲದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

error: Content is protected !!