Home Blog Page 75

CJ Roy Case: ಶೂಟ್ ಆದ್ರೂ ಯಾರಿಗೂ ಶಬ್ದ ಕೇಳಿಸದೇ ಹೋಗಿದ್ದು ಹೇಗೆ? ಕೊನೆಗೂ ಈ ಪ್ರಶ್ನೆಗೆ ಸಿಕ್ತು ಉತ್ತರ

0

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ. ಸಿ.ಜೆ. ರಾಯ್ (CJ Roy) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಬೆಳಕಿಗೆ ಬಂದಿದೆ.ರಿಚ್ಮಂಡ್ ಸರ್ಕಲ್‌ನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ತಮ್ಮ ಕೊಠಡಿಯಲ್ಲೇ ಡಾ. ಸಿ.ಜೆ. ರಾಯ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಗುಂಡಿನ ಶಬ್ದ ಕೇಳಿಸದೆ ಸುಮಾರು 20 ನಿಮಿಷಗಳ ಕಾಲ ಈ ಘಟನೆ ಯಾರಿಗೂ ತಿಳಿದಿರಲಿಲ್ಲ.

ರಾಯ್ ಅವರ ಚೇಂಬರ್ ಸಂಪೂರ್ಣವಾಗಿ ಸೌಂಡ್ ಪ್ರೂಫ್ ಆಗಿದ್ದರಿಂದ ಗುಂಡಿನ ಶಬ್ದ ಹೊರಗೆ ಕೇಳಿಸಿಲ್ಲ ಎನ್ನಲಾಗಿದೆ. ಕೊಠಡಿಯ ಒಳಗಿರುವ ಧ್ವನಿಗಳು ಹೊರಗೆ ಕೇಳಿಸದಂತೆ ವಿಶೇಷ ಇಂಟೀರಿಯರ್ ಮಾಡಲಾಗಿತ್ತು. ಇದರಿಂದಾಗಿ ಆತ್ಮಹತ್ಯೆ ನಡೆದರೂ ಕಚೇರಿಯ ಸಿಬ್ಬಂದಿಗೆ ತಕ್ಷಣ ಮಾಹಿತಿ ಸಿಗಲಿಲ್ಲ.

ಬಹಳ ಸಮಯವಾದರೂ ರಾಯ್ ತಮ್ಮ ಕೊಠಡಿಯಿಂದ ಹೊರಬರದ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನು ಕರೆದು ನೋಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಅನುಮಾನಗೊಂಡು ಕುಟುಂಬದವರ ಅನುಮತಿ ಪಡೆದು ಭದ್ರತಾ ಸಿಬ್ಬಂದಿ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.

ಆತ್ಮಹತ್ಯೆಗೆ ಮುನ್ನ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿದ್ದರು ಎನ್ನಲಾಗಿದೆ. ಜ.30ರಂದು ಆದಾಯ ತೆರಿಗೆ ಇಲಾಖೆ ಕಾನ್ಫಿಡೆಂಟ್ ಗ್ರೂಪ್ ಮೇಲೆ ದಾಳಿ ನಡೆಸಿತ್ತು. ಮಧ್ಯಾಹ್ನ ಸುಮಾರು 3 ಗಂಟೆಗೆ ರಾಯ್ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಹೇಳಿಕೆ ನೀಡಲು ಕಚೇರಿಗೆ ಆಗಮಿಸಿದ್ದರು. ಅಲ್ಲಿಂದ ವಾಪಸ್ ಬಂದ ಬಳಿಕ ರಾಯ್ ತಮ್ಮ ಕ್ಯಾಬಿನ್‌ಗೆ ತೆರಳಿದ್ದು, ಮತ್ತೆ ಹೊರಗೆ ಬಂದಿಲ್ಲ.

ನಂತರ ಜೋಸೆಫ್ ಅವರು ಕ್ಯಾಬಿನ್‌ಗೆ ಪ್ರವೇಶಿಸಲು ಯತ್ನಿಸಿದಾಗ, ರಾಯ್ ಅವರ ಸೂಚನೆಯಂತೆ ಯಾರನ್ನೂ ಒಳಗೆ ಬಿಡಬಾರದು ಎಂದು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಬಳಿಕ ಬಾಗಿಲನ್ನು ಬಲವಂತವಾಗಿ ಒಡೆದು ಒಳಗೆ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಕೇರಳ ಮೂಲದ ಸಿ.ಜೆ. ರಾಯ್ 2005ರಲ್ಲಿ ಕಾನ್ಫಿಡೆಂಟ್ ಗ್ರೂಪ್ ಸ್ಥಾಪಿಸಿದ್ದರು. ಈ ಸಂಸ್ಥೆ ಇದುವರೆಗೆ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ವಸತಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಹೋಟೆಲ್‌, ರೆಸಾರ್ಟ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ 4.6 ತೀವ್ರತೆಯ ಭೂಕಂಪ: ಜನರಲ್ಲಿ ಭೀತಿ

0

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 4.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ನಡುಗಿದ ಅನುಭವದಿಂದ ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ.

ಬೆಳಗ್ಗೆ 5.35ರ ಸುಮಾರಿಗೆ ಭೂಕಂಪದ ಕಂಪನ ಅನುಭವವಾಗಿದ್ದು, ಇದರ ಕೇಂದ್ರಬಿಂದು ಪಟ್ಟನ್ ಪ್ರದೇಶದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಭೂಕಂಪದಿಂದ ಯಾವುದೇ ಸಾವು-ನೋವು, ಗಾಯಗಳು ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS) ತನ್ನ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದೇ ದಿನ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ 4.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು NCS ತಿಳಿಸಿದೆ.

NCS ಹೇಳಿಕೆಯ ಪ್ರಕಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಂಭವಿಸಿದ ಭೂಕಂಪವು ಭೂಮಿಯ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಭೂಕಂಪದ ಅಕ್ಷಾಂಶ 9.03 ಡಿಗ್ರಿ ಉತ್ತರ ಹಾಗೂ ರೇಖಾಂಶ 92.78 ಡಿಗ್ರಿ ಪೂರ್ವವಾಗಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ದೃಢಪಡಿಸಲಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ವಿಶ್ವದ ಅತ್ಯಂತ ಭೂಕಂಪನಶೀಲ ಪ್ರದೇಶಗಳಲ್ಲಿ ಒಂದಾಗಿದ್ದು, 1893–1984ರ ಭಾರತದ ಭೂಕಂಪನ ವಲಯ ನಕ್ಷೆಯ ಪ್ರಕಾರ ಈ ಪ್ರದೇಶವನ್ನು ಭೂಕಂಪನ ವಲಯ–V ಎಂದು ವರ್ಗೀಕರಿಸಲಾಗಿದೆ.

ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ: ಪಾಕಿಸ್ತಾನ ನಿರ್ಧಾರಕ್ಕೆ ICC ಖಡಕ್ ಎಚ್ಚರಿಕೆ!

0

ನವದೆಹಲಿ: 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ಪಾಕಿಸ್ತಾನ ಸರ್ಕಾರ ತನ್ನ ಕ್ರಿಕೆಟ್ ತಂಡಕ್ಕೆ ಆದೇಶಿಸಿರುವ ನಿರ್ಧಾರಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕ್ರೀಡಾ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ಪಾಕಿಸ್ತಾನ ಸರ್ಕಾರದ ನಿರ್ಧಾರ ತನ್ನ ಗಮನಕ್ಕೆ ಬಂದಿದ್ದರೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯಿಂದ ಅಧಿಕೃತ ಮಾಹಿತಿ ದೊರೆಯುವವರೆಗೆ ಕಾಯಲಾಗುತ್ತಿದೆ ಎಂದು ತಿಳಿಸಿದೆ. ಪಂದ್ಯಾವಳಿಯಲ್ಲಿ ಆಯ್ದ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವ ಧೋರಣೆ ಸ್ವೀಕಾರಾರ್ಹವಲ್ಲ ಎಂದು ಐಸಿಸಿ ಅಸಮಾಧಾನ ವ್ಯಕ್ತಪಡಿಸಿದೆ.

“ರಾಷ್ಟ್ರೀಯ ನೀತಿ ವಿಷಯಗಳಲ್ಲಿ ಸರ್ಕಾರಗಳ ಪಾತ್ರವನ್ನು ಐಸಿಸಿ ಗೌರವಿಸುತ್ತದೆ. ಆದರೆ ಈ ನಿರ್ಧಾರವು ಸೂಕ್ತವಲ್ಲ. ಇದು ಜಾಗತಿಕ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಪಾಕಿಸ್ತಾನದಲ್ಲಿರುವ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಹಿತಾಸಕ್ತಿಗೂ ವಿರುದ್ಧವಾಗಿದೆ” ಎಂದು ಐಸಿಸಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಪಾಕಿಸ್ತಾನ ತೆಗೆದುಕೊಂಡಿರುವ ಈ ನಿರ್ಧಾರವು ದೀರ್ಘಕಾಲೀನ ಪರಿಣಾಮಗಳನ್ನುಂಟು ಮಾಡಬಹುದಾದ್ದರಿಂದ, ಮತ್ತೊಮ್ಮೆ ಪರಿಶೀಲಿಸುವಂತೆ ಐಸಿಸಿ ಪಿಸಿಬಿಯನ್ನು ಮನವಿ ಮಾಡಿದೆ.

ಭಾರತ–ಪಾಕಿಸ್ತಾನ ಪಂದ್ಯಗಳು ವಿಶ್ವ ಕ್ರಿಕೆಟ್‌ನಲ್ಲಿ ವಿಶೇಷ ಆಕರ್ಷಣೆಯನ್ನು ಹೊಂದಿವೆ. ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟುಗಳ ನಡುವೆಯೂ, 2012ರಿಂದ ಐಸಿಸಿ ಪ್ರಮುಖ ಪಂದ್ಯಾವಳಿಗಳಲ್ಲಿ ಎರಡೂ ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸಿ ಪಂದ್ಯಗಳನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, 2010ರ ನಂತರ ಉಭಯ ತಂಡಗಳು ಮುಖಾಮುಖಿಯಾಗದ ಮೊದಲ ಐಸಿಸಿ ಪಂದ್ಯಾವಳಿ ಇದಾಗಲಿದೆ.

ಪಾಕಿಸ್ತಾನ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ, ಐಸಿಸಿ ಪಿಸಿಬಿ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಪಾಲ್ಗೊಳ್ಳಲು ವಿದೇಶಿ ಆಟಗಾರರು ಅಗತ್ಯವಿರುವ ನಿರ್ಬಂಧರಹಿತ ಪ್ರಮಾಣಪತ್ರ (NOC) ಪಡೆಯುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಪಾಕಿಸ್ತಾನಕ್ಕೆ ಗಂಭೀರ ಆರ್ಥಿಕ ನಷ್ಟ ಸಂಭವಿಸಬಹುದು. ಅಲ್ಲದೆ, ಭವಿಷ್ಯದಲ್ಲಿ ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸುವ ಹಕ್ಕನ್ನೂ ಪಾಕಿಸ್ತಾನ ಕಳೆದುಕೊಳ್ಳುವ ಅಪಾಯವಿದೆ ಎಂದು ವರದಿಗಳು ತಿಳಿಸಿವೆ.

ಇದರ ನಡುವೆ, ಭಾನುವಾರ ಪಾಕಿಸ್ತಾನ ಸರ್ಕಾರ ತನ್ನ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಟಿ20 ವಿಶ್ವಕಪ್ 2026ರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಫೆಬ್ರವರಿ 15, 2026ರಂದು ಭಾರತ ವಿರುದ್ಧ ನಡೆಯಲಿರುವ ಪಂದ್ಯವನ್ನು ಪಾಕಿಸ್ತಾನ ತಂಡ ಬಹಿಷ್ಕರಿಸಲಿದೆ ಎಂದು ಪ್ರಕಟಿಸಿದೆ.

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಕೋರಿ ಕೇಂದ್ರಕ್ಕೆ ಕೇರಳ ಸಿಎಂ ಪತ್ರ

0

ಕೇರಳ: ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಾಚರಣೆ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಫೆಬ್ರವರಿ 1ರಂದು ಬರೆದಿರುವ ಪತ್ರದಲ್ಲಿ, ಈ ಘಟನೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬಿದ್ದಿರುವ ಕಪ್ಪು ಚುಕ್ಕೆಯಾಗಿದೆ ಎಂದು ಕೇರಳ ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯಾಚರಣೆಯಲ್ಲಿ ಗಂಭೀರ ಲೋಪಗಳಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ರಾಯ್ ಅವರ ಸಹೋದರ ಕೂಡ ಐಟಿ ಅಧಿಕಾರಿಗಳಿಂದ ಕಿರುಕುಳ ನಡೆದಿದೆ ಎಂದು ಆರೋಪಿಸಿರುವುದನ್ನು ಸಿಎಂ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ರಾಯ್ ಅವರು ಎಲ್ಲಾ ದಾಖಲೆಗಳನ್ನು ನೀಡುವ ಮೂಲಕ ಅಧಿಕಾರಿಗಳಿಗೆ ಸಹಕರಿಸಿದ್ದರೂ, ಮರುಮರು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಐಟಿ ದಾಳಿಯ ಒತ್ತಡ ಅಸಹನೀಯವಾಗಿತ್ತು ಎಂದು ಅವರ ಸಹೋದರ ಹೇಳಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ತೆರಿಗೆ ವಂಚನೆ ಗಂಭೀರ ಸಮಸ್ಯೆಯಾಗಿದ್ದು, ಅದನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ರಾಯ್ ಪ್ರಕರಣದಂತೆ ಜೀವ ಹಾನಿಯಾಗುವ ಯಾವುದೇ ಕ್ರಮವನ್ನು ನಾಗರಿಕ ಪ್ರಜಾಪ್ರಭುತ್ವದಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದು ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಬಂದೂಕಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಅಚ್ಚರಿಯ ಸಂಗತಿ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಕಾರ್ಯಾಚರಣೆ ವೇಳೆ ಆ ಸ್ಥಳ ಸಂಪೂರ್ಣವಾಗಿ ತೆರಿಗೆ ಅಧಿಕಾರಿಗಳ ನಿಯಂತ್ರಣದಲ್ಲಿ ಇರಬೇಕು. ಶೋಧ ಕಾರ್ಯಾಚರಣೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕನಿಷ್ಠ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ತನಿಖೆಗೆ ಒಳಗಾಗುತ್ತಿರುವ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯೂ ಅಧಿಕಾರಿಗಳ ಮೇಲಿದೆ. ತೆರಿಗೆ ಎನ್ನುವುದು ನಾಗರಿಕರು ಸಮಾಜಕ್ಕಾಗಿ ಪಾವತಿಸುವ ಬೆಲೆ ಎಂದು ಹೇಳಲಾಗುತ್ತದೆ. ಆದ್ದರಿಂದ ತೆರಿಗೆ ವಂಚನೆ ವಿರುದ್ಧ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ನಿವೃತ್ತ ನ್ಯಾಯಾಧೀಶರ ನೇತೃತ್ವದ ವಿಚಾರಣಾ ಆಯೋಗ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ.

ಗೋವಿಂದ–ನೀಲಂ ಪ್ರೇಮ ವದಂತಿಗಳಿಗೆ ತೆರೆ: “ನಮ್ಮ ನಡುವೆ ಅಂತಹದ್ದೇನೂ ಇರಲಿಲ್ಲ” ಎಂದ ನೀಲಂ ಕೊಠಾರಿ

ಗೋವಿಂದ ಅವರ ಖಾಸಗಿ ಜೀವನ ಸದ್ಯ ಬಾಲಿವುಡ್‌ನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ವಿವಾಹೇತರ ಸಂಬಂಧ ಆರೋಪ, ಪತ್ನಿ ಸುನೀತಾ ಅಹುಜಾ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸುದ್ದಿಗಳ ನಡುವೆ, ಹಳೆಯ ದಿನಗಳ ಗೋವಿಂದ–ನೀಲಂ ಕೊಠಾರಿ ಪ್ರೇಮ ವದಂತಿಗಳು ಮತ್ತೆ ಹೊರಬಂದಿವೆ.

ಈ ಎಲ್ಲಾ ಊಹಾಪೋಹಗಳಿಗೆ ಈಗ ನೀಲಂ ಕೊಠಾರಿ ನೇರವಾಗಿ ಉತ್ತರ ನೀಡಿದ್ದಾರೆ. ಉಷಾ ಕಾಕಡೆ ಪ್ರೊಡಕ್ಷನ್ಸ್ ಜೊತೆ ಮಾತನಾಡಿದ ಅವರು, ಗೋವಿಂದ ಜೊತೆಗಿನ ಯಾವುದೇ ಪ್ರೇಮ ಸಂಬಂಧವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.

“ಇದನ್ನು ಯಾರು ಹೇಳುತ್ತಾರೆ? ಗೋವಿಂದ ಒಬ್ಬ ಅದ್ಭುತ ವ್ಯಕ್ತಿ. ನಾವು ಅನೇಕ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಅಷ್ಟೇ. ಆದರೆ ನಮ್ಮ ನಡುವೆ ಪ್ರೇಮ ಸಂಬಂಧ ಇತ್ತು ಎಂಬ ಮಾತು ನಿಜವಲ್ಲ” ಎಂದು ನೀಲಂ ಹೇಳಿದ್ದಾರೆ.

ತೊಂಬತ್ತರ ದಶಕದಲ್ಲಿ ಮಾಧ್ಯಮಗಳ ವರದಿಯ ಶೈಲಿಯೇ ಇಂತಹ ವದಂತಿಗಳಿಗೆ ಕಾರಣವಾಗಿತ್ತು ಎಂದು ಅವರು ಹೇಳಿದ್ದಾರೆ. “ಆ ಸಮಯದಲ್ಲಿ ಯಾರೂ ಸ್ಪಷ್ಟನೆ ಕೊಡಲು ಇರಲಿಲ್ಲ. ಪತ್ರಿಕೆಗಳ ಲೇಖನಿಯ ಶಕ್ತಿಯೇ ಎಲ್ಲವೂ ಆಗಿತ್ತು. ಎರಡು-ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರೆ ಪ್ರೇಮ ಸಂಬಂಧವಿದೆ ಎಂದು ಭಾವಿಸಲಾಗುತ್ತಿತ್ತು. ನಾವು ಆಗ ಮಾಧ್ಯಮಗಳನ್ನು ತುಂಬಾ ಭಯಪಡುತ್ತಿದ್ದೆವು” ಎಂದು ಅವರು ತಿಳಿಸಿದ್ದಾರೆ.

ಗೋವಿಂದ ಮತ್ತು ನೀಲಂ ಆಗಾಗ್ಗೆ ಭೇಟಿಯಾಗುತ್ತಿದ್ದದ್ದು ಹಾಗೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರಿಂದ ಈ ಗಾಸಿಪ್‌ಗಳು ಹುಟ್ಟಿಕೊಂಡಿವೆ ಎನ್ನಲಾಗುತ್ತಿದೆ. ಆದರೆ ಅವುಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ ಎಂದು ನೀಲಂ ಸ್ಪಷ್ಟಪಡಿಸಿದ್ದಾರೆ.

ನೀಲಂ ಕೊಠಾರಿ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬಂದ್ರೆ, ಅವರು ಮೊದಲಿಗೆ ರಿಷಿ ಸೇಥಿಯಾ ಅವರನ್ನು ವಿವಾಹವಾಗಿ ನಂತರ ವಿಚ್ಛೇದನ ಪಡೆದರು. ಬಳಿಕ ನಟ ಸಮೀರ್ ಸೋನಿ ಅವರನ್ನು ವಿವಾಹವಾಗಿದ್ದು, ಇಬ್ಬರೂ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.

ಗೋವಿಂದ ಅವರು 1987ರಿಂದ ಸುನೀತಾ ಅಹುಜಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದು, ಒಬ್ಬ ಮಗ ಹಾಗೂ ಮಗಳ ತಂದೆಯಾಗಿದ್ದಾರೆ.

ಹೋಟೆಲ್ ಗಲಾಟೆಯ ಬಳಿಕ ಭೀಕರ ಹಲ್ಲೆ: ಪಿಪಿಸಿ ಕ್ರಾಸ್ ಬಳಿ ಕಾಂಗ್ರೆಸ್ ಯುವ ಮುಖಂಡನ ಮೇಲೆ ದಾಳಿ

0

ಉಡುಪಿ: ಕ್ಷುಲ್ಲಕ ಕಾರಣಕ್ಕೆ ನಡೆದ ಹೊಟೇಲ್ ಗಲಾಟೆ ತೀವ್ರ ಹಿಂಸಾಚಾರಕ್ಕೆ ತಿರುಗಿರುವ ಘಟನೆ ಜನವರಿ 30ರ ರಾತ್ರಿ ಪಿಪಿಸಿ ಕ್ರಾಸ್ ಬಳಿ ನಡೆದಿದೆ. ತಲವಾರ್ ಹಾಗೂ ಕಬ್ಬಿಣದ ಚೇರ್ ಹಿಡಿದು ಗುಂಪೊಂದು ದಾಳಿ ನಡೆಸಿದ್ದು, ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್ (25) ಗಾಯಗೊಂಡಿದ್ದಾರೆ.

ಮಣಿಪಾಲದ ಹಕುನಾ ಮಟಾಟ ಹೊಟೇಲ್‌ನಲ್ಲಿ ಊಟದ ವೇಳೆ ಶರತ್ ಕುಂದರ್ ಅವರ ಕೈ ರಮಾನಂದ ಪೈ ಅವರ ಕೈಗೆ ತಾಕಿದ ವಿಚಾರವೇ ಈ ಗಲಾಟೆಗೆ ಕಾರಣವಾಗಿದೆ. ಮಾತಿನ ಚಕಮಕಿ ನಡೆದ ಬಳಿಕ ಶರತ್ ಕುಂದರ್ ಮನೆಗೆ ತೆರಳುವ ವೇಳೆ, ಪಿಪಿಸಿ ಕ್ರಾಸ್ ಬಳಿ ಮಾತುಕತೆ ನಡೆಸಲು ಅಕ್ಷತ್ ಪೈ ಕರೆ ಮಾಡಿ ನಿಲ್ಲುವಂತೆ ತಿಳಿಸಿದ್ದಾನೆ.

ಅದರಂತೆ ಶರತ್ ಕುಂದರ್ ಅವರು ತಮ್ಮ ಸ್ನೇಹಿತರೊಂದಿಗೆ ಕೋಸ್ಟಲ್ ಚಿಕನ್ ಅಂಗಡಿಯ ಎದುರು ಕಾಯುತ್ತಿದ್ದಾಗ, ರಾತ್ರಿ 11.30ರ ಸುಮಾರಿಗೆ ಟಾಟಾ ಸಫಾರಿ ಮತ್ತು ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.

ಅಕ್ಷತ್ ಪೈ, ಶಶಾಂಕ್ ಸೇರಿದಂತೆ 6–7 ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೇರ್ ಹಿಡಿದು ಶರತ್ ಕುಂದರ್ ಅವರನ್ನು ಕೊಲ್ಲುವ ಉದ್ದೇಶದಿಂದ ತಲೆಗೆ ಬೀಸಿದ್ದಾರೆ. ತಪ್ಪಿಸಿಕೊಳ್ಳಲು ಅವರು ಕೈ ಮುಂದಕ್ಕೆ ಚಾಚಿದಾಗ, ಆರೋಪಿ ರಮಾನಂದ ಪೈ ತಲವಾರಿನಿಂದ ಬೀಸಿದ್ದು, ಬಲ ಅಂಗೈ, ಮಧ್ಯ ಬೆರಳು, ಎಡ ಕೈಮಣಿಗಂಟು ಹಾಗೂ ಕಿರು ಬೆರಳಿಗೆ ಗಂಭೀರ ಗಾಯಗಳಾಗಿವೆ.

ಘಟನೆಯ ವೇಳೆ ಶರತ್ ಕುಂದರ್ ಜೊತೆಗಿದ್ದ ಸ್ನೇಹಿತರು ಬೊಬ್ಬೆ ಹೊಡೆದ ನಂತರ ಆರೋಪಿಗಳು ಜೀವಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಶ್ಮಿಕಾ–ವಿಜಯ್ ಸೀಕ್ರೆಟ್ ವೆಡ್ಡಿಂಗ್? ಉದಯಪುರ ಹೋಟೆಲ್ ಸಿದ್ಧತೆ ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ವಿಚಾರ ಮತ್ತೆ ಹಾಟ್ ಟಾಪಿಕ್ ಆಗಿದೆ. ಈ ಜೋಡಿ ಮದುವೆ ವಿಷಯವನ್ನು ಬಹುಕಾಲದಿಂದ ಗುಟ್ಟಾಗಿ ಇಟ್ಟುಕೊಂಡೇ ಬರುತ್ತಿದ್ದು, ಇದೀಗ ವಿವಾಹ ನಡೆಯಲಿರುವ ಹೋಟೆಲ್‌ನ ಸಿದ್ಧತೆಯ ವಿಡಿಯೋ ಲೀಕ್ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿ ನಡೆಯಲಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಈ ವಿವಾಹ ತುಂಬಾನೇ ಖಾಸಗಿಯಾಗಿ ಆಯೋಜಿಸಲಾಗಿದೆ ಎಂಬುದು ತಿಳಿದುಬರುತ್ತಿದೆ. ಯಾವುದೇ ಅನಗತ್ಯ ಗಮನ ಸೆಳೆಯದಂತೆ ಮದುವೆ ನೆರವೇರಿಸುವ ಪ್ಲ್ಯಾನ್ ಮಾಡಲಾಗಿದೆ.

‘ಗೀತ ಗೋವಿಂದಂ’ ಸಿನಿಮಾದ ಸೆಟ್‌ನಲ್ಲಿ ಪರಿಚಯವಾದ ರಶ್ಮಿಕಾ ಹಾಗೂ ವಿಜಯ್, ಆ ಬಳಿಕ ಒಳ್ಳೆಯ ಸ್ನೇಹ ಬೆಳೆಸಿಕೊಂಡಿದ್ದರು. ಆ ಸ್ನೇಹವೇ ಪ್ರೀತಿಗೆ ತಿರುಗಿದ್ದು, ಹಲವು ವರ್ಷಗಳಿಂದ ಇವರ ನಡುವೆ ಗಾಢ ಬಾಂಡಿಂಗ್ ಇದೆ. ಈಗ ಅದೇ ಪ್ರೀತಿ ಮದುವೆಯ ರೂಪ ಪಡೆಯುತ್ತಿದೆ ಎನ್ನಲಾಗುತ್ತಿದೆ.

ಈ ಹಿಂದೆ ವಿಜಯ್ ದೇವರಕೊಂಡ ಅವರ ಮನೆಯಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ನಡೆದಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಮದುವೆಯನ್ನೂ ಸಹ ಅಷ್ಟೇ ರಹಸ್ಯವಾಗಿ ನಡೆಸಲಾಗುತ್ತಿದೆ.

ಉದಯಪುರದ ಐತಿಹಾಸಿಕ ಸಿಟಿ ಪ್ಯಾಲೇಸ್ ಹೋಟೆಲ್‌ನಲ್ಲಿ ಮದುವೆ ನಡೆಯುತ್ತಿದೆ ಎಂಬುದಾಗಿ ವಿಡಿಯೋ ವೈರಲ್ ಮಾಡಲಾಗಿದೆ. ವಿಡಿಯೋದಲ್ಲಿರುವವರ ಮಾಹಿತಿ ಪ್ರಕಾರ ಫೆಬ್ರವರಿ 2ರಂದು ಮದುವೆ ನಡೆಯಲಿದೆಯಂತೆ. ಈ ಹಿಂದೆ ಫೆಬ್ರವರಿ 26 ಎಂದು ಹೇಳಲಾಗಿತ್ತು. ಆದರೆ ಈಗ ದಿನಾಂಕ ಬದಲಾಯಿತೇ ಎಂಬ ಗೊಂದಲ ನಿರ್ಮಾಣವಾಗಿದೆ.

ನಿಜವಾದ ದಿನಾಂಕ ಬಹಿರಂಗವಾಗದಂತೆ ಸೆಲಬ್ರಿಟಿಗಳು ತಪ್ಪು ದಿನಾಂಕಗಳ ಸುದ್ದಿಯನ್ನು ಹರಿಯಲು ಬಿಡುತ್ತಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ರಶ್ಮಿಕಾ ಮಂದಣ್ಣ ಕೂಡ ಇದೇ ತಂತ್ರ ಬಳಸಿರಬಹುದು ಎನ್ನುವುದು ಅನೇಕರ ಅಭಿಪ್ರಾಯ.

ಇಂದು ಮದುವೆ ನಡೆದರೆ, ಸಂಜೆ ವೇಳೆಗೆ ವಿವಾಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮದುವೆ ಕುರಿತು ಸಾಕಷ್ಟು ಕನಸುಗಳನ್ನು ಕಂಡಿದ್ದ ರಶ್ಮಿಕಾ ಮಂದಣ್ಣ ಅವರ ಕನಸು ಇದೀಗ ಸಾಕಾರಗೊಳ್ಳುವ ಹಂತದಲ್ಲಿದ್ದು, ಫೋಟೋಗಳು ವೈರಲ್ ಆಗದಂತೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ದೇವನಹಳ್ಳಿ| ಟಿಪ್ಪರ್ ಡಿಕ್ಕಿ ಹೊಡೆದು ನಡು ರಸ್ತೆಯಲ್ಲೇ ಮುಗಿಚಿ ಬಿದ್ದ ಕಂಟೈನರ್!

0

ದೇವನಹಳ್ಳಿ: ದೊಡ್ಡಬಳ್ಳಾಪುರ ತಾಲ್ಲೂಕಿನ ದಾಬಸ್ ಪೇಟೆ-ಹೊಸಕೋಟೆ ಹೆದ್ದಾರಿಯಲ್ಲಿ ಇಂದು ಅಪಘಾತ ಸಂಭವಿಸಿದ್ದು, ಟಿಪ್ಪರ್ ಮತ್ತು ಕಂಟೈನರ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ.

ಮೆಣಸಿಗೇಟ್ ಮಾರ್ಗದ ಮೂಲಕ ಹಾದು ಹೋಗುತ್ತಿದ್ದ ಕಂಟೈನರ್‌ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಂಟೈನರ್ ರಸ್ತೆ ಮಧ್ಯದಲ್ಲಿ ಮುಗಿಚಿ ಬಿದ್ದಿದೆ.

ಅಪಘಾತದಲ್ಲಿ ಟಿಪ್ಪರ್ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಟಿಪ್ಪರ್ ಹಾಗೂ ಕಂಟೈನರ್ ಚಾಲಕರಿಗೆ ಗಾಯ ಸಂಭವಿಸಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ಎರಡು ವಾಹನಗಳು ದಾಬಸ್ ಪೇಟೆಯಿಂದ ಹೊಸಕೋಟೆಗೆ ಹೋಗುತ್ತಿದ್ದ ವೇಳೆ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸ್ಥಳೀಯ ಠಾಣೆ ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕಾರಣ ಮತ್ತು ಹಿನ್ನೆಲೆ ತನಿಖೆ ನಡೆಸುತ್ತಿದ್ದಾರೆ.

ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡಗೆ ಕಾಂಗ್ರೆಸ್‌ನಿಂದಲೂ ಸಿಗುತ್ತಾ ಗೇಟ್​ಪಾಸ್?

0

ಮಂಡ್ಯ: ಮಾಜಿ ಸಂಸದ, ಕಾಂಗ್ರೆಸ್ ನಾಯಕ ಮತ್ತು ಕೆಪಿಸಿಸಿ ವಕ್ತಾರ ಎಲ್.ಆರ್. ಶಿವರಾಮೇಗೌಡ ವಿರುದ್ಧದ ವೈರಲ್ ಆಡಿಯೋ ಪ್ರಕರಣ ಇದೀಗ ರಾಜಕೀಯ ಘರ್ಷಣೆಗೆ ಕಾರಣವಾಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಿವರಾಮೇಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ನಟ ದಿ. ಅಂಬರೀಶ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಂಸದ ಮಾದೇಗೌಡ ಸೇರಿದಂತೆ ಹಲವು ನಾಯಕರುಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಒಳಗೆ ಆಕ್ರೋಶ ವ್ಯಕ್ತವಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರಿಗೆ ಪತ್ರ ಬರೆದು, ಶಿವರಾಮೇಗೌಡ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪತ್ರದಲ್ಲಿ, ಪಕ್ಷದ ಗೌರವಕ್ಕೆ ಧಕ್ಕೆ ನೀಡುವಂತಹ ವರ್ತನೆಗೆ ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ.

ಈ ಆರೋಪ ತಳ್ಳಿ ಹಾಕಿರುವ ಶಿವರಾಮೇಗೌಡ ,ಆಡಿಯೋವನ್ನು ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾಗಿದೆ ಮತ್ತು ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂಬುದು ಸ್ಪಷ್ಟಪಡಿಸಿದ್ದಾರೆ. ಆದರೆ ಇದನ್ನೊಪ್ಪಲು ಮಂಡ್ಯದ ಕಾಂಗ್ರೆಸ್ ನಾಯಕರು ಸಿದ್ಧರಿಲ್ಲ. ಗಮನಾರ್ಹವಾಗಿ, ಶಿವರಾಮೇಗೌಡ ಜೆಡಿಎಸ್‌ನಲ್ಲಿ ಇದ್ದಾಗಲೂ ಇದೇ ರೀತಿಯ ಆಡಿಯೋ ವಿವಾದದಲ್ಲಿ ಸಿಲುಕಿದ್ದರು ಮತ್ತು ಪಕ್ಷದಿಂದ ಉಚ್ಚಾಟನೆ ಕೂಡ ಆಗಿದ್ದರು.

ಈ ಘಟನೆ ಜೆಡಿಎಸ್ ನಂತರ ಈಗ ಕಾಂಗ್ರೆಸ್‌ನಲ್ಲಿ ಮರುಕಳಿರುವುದರಿಂದ, ಶಿವರಾಮೇಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.

ಹರಪನಹಳ್ಳಿ ದೊಡ್ಡ ಮೈಲಾರ ಕಾರ್ಣಿಕೋತ್ಸವ: ‘ಅಂಬಲಿ ರಾಶಿಗೆ ಮುತ್ತಿನ ಗಿಣಿ’ – ಸಮೃದ್ಧಿಯ ಭವಿಷ್ಯವಾಣಿ

0

ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದೊಡ್ಡ ಮೈಲಾರದಲ್ಲಿ ಭರತ್ ಹುಣ್ಣಿಮೆ ನಿಮಿತ್ತ ಆಯೋಜಿಸಲಾಗಿದ್ದ ಈ ವರ್ಷದ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಭಕ್ತಿಸ್ಫೂರ್ತಿಯಿಂದ ನೆರವೇರಿತು.

ಸಾವಿರಾರು ಭಕ್ತರು ಸೇರಿ ಕಾರ್ಣಿಕೋತ್ಸವವನ್ನು ಕಣ್ತುಂಬಿಕೊಂಡರು.
ಕಾರ್ಣಿಕ ನುಡಿ ಹೇಳಿದ ಗೊರವಯ್ಯ ಕೇಳಗೆ ಬಿದ್ದು, “ಅಂಬಲಿ ರಾಶಿಗೆ ಮುತ್ತಿನ ಗಿಣಿ – ಸಮೃದ್ಧಿ ಆಯ್ತಲೆ ಪರಾಕ್” ಎಂಬ ದೈವವಾಣಿಯನ್ನು ಪ್ರಕಟಿಸಿದರು.

ಈ ಕಾರ್ಣಿಕ ನುಡಿ ಮೂಲಕ ಈ ವರ್ಷವೂ ಮಳೆ ಸಮರ್ಪಕವಾಗಿ ಸುರಿಯಲಿದ್ದು, ಬೆಳೆ ಉತ್ತಮವಾಗಿ ಬೆಳೆಯಲಿದೆ ಎಂಬ ಆಶಾವಾದ ಮೂಡಿದೆ. ಕೃಷಿ ಆಧಾರಿತ ಸಮಾಜಕ್ಕೆ ಇದು ಶುಭಸೂಚನೆಯಾಗಿ ಪರಿಗಣಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ದೊಡ್ಡ ಮೈಲಾರ ಕ್ಷೇತ್ರದಲ್ಲಿ ನಡೆದ ಕಾರ್ಣಿಕೋತ್ಸವ ಧಾರ್ಮಿಕ ಸಂಪ್ರದಾಯ, ನಂಬಿಕೆ ಮತ್ತು ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದುಕೊಂಡ ಮಹತ್ವದ ಘಟನೆಯಾಗಿ ಮೂಡಿ ಬಂದಿದೆ.

error: Content is protected !!