Home Blog Page 79

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: 6 ದಿನಗಳಲ್ಲಿ 23 ಸಾವಿರಕ್ಕೂ ಹೆಚ್ಚು ವಿಮಾನ ರದ್ದು

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಕಳೆದ ಆರು ದಿನಗಳಲ್ಲಿ 23,000ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದು, ಜಾಗತಿಕ ವಿಮಾನಯಾನ ಉದ್ಯಮದ ಮೇಲೆ ದೊಡ್ಡ ಆರ್ಥಿಕ ಪರಿಣಾಮ ಉಂಟಾಗಿದೆ.

ಇರಾನ್ಇಸ್ರೇಲ್ ಸಂಘರ್ಷದ ಹಿನ್ನೆಲೆ ಫೆಬ್ರವರಿ 28ರಿಂದ ಗಲ್ಫ್ ಪ್ರದೇಶಕ್ಕೆ ಹಾಗೂ ಅಲ್ಲಿಂದ ಇತರ ದೇಶಗಳಿಗೆ ನಿಗದಿಯಾಗಿದ್ದ 23,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಇದರ ಪರಿಣಾಮವಾಗಿ ಸುಮಾರು 4.4 ಮಿಲಿಯನ್ (44 ಲಕ್ಷ) ಪ್ರಯಾಣಿಕರ ಸೀಟುಗಳು ಪ್ರಭಾವಿತರಾಗಿವೆ.

ವಿಮಾನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ Air India ಹೆಚ್ಚುವರಿ ಸೇವೆಗಳನ್ನು ಆರಂಭಿಸಲು ಮುಂದಾಗಿದೆ. ಮಾರ್ಚ್ 5ರಿಂದ 11ರವರೆಗೆ ದೆಹಲಿ–ಟೊರೊಂಟೊ ಮಾರ್ಗದಲ್ಲಿ ಹಾಗೂ ಮಾರ್ಚ್ 7ರಿಂದ 10ರವರೆಗೆ ದೆಹಲಿ–ಫ್ರಾಂಕ್ಫರ್ಟ್ ಮಾರ್ಗದಲ್ಲಿ ಮೂರು ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸಲಿವೆ.

ಜೊತೆಗೆ ದೆಹಲಿ–ಪ್ಯಾರಿಸ್ ನಡುವೆ ಒಂದು ಹೆಚ್ಚುವರಿ ವಿಮಾನವನ್ನು ನಿಯೋಜಿಸಲಾಗಿದೆ. ಮಧ್ಯಪ್ರಾಚ್ಯದಿಂದ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಾರ್ಚ್ 11ರ ಬಳಿಕವೂ ಹೆಚ್ಚುವರಿ ಸೇವೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಇದೇ ವೇಳೆ ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಎಮಿರೇಟ್ಸ್ ದುಬೈಗೆ ಮತ್ತು ದುಬೈನಿಂದ ವಿಮಾನಗಳ ಸ್ಥಗಿತವನ್ನು ಮಾರ್ಚ್ 7ರವರೆಗೆ ವಿಸ್ತರಿಸಿದೆ. ಕಳೆದ ಶನಿವಾರದಿಂದ 2,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಸಂಸ್ಥೆ ತಿಳಿಸಿದೆ.

ಒಮಾನ್ ಏರ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಾರ್ಚ್ 6ರವರೆಗೆ ಅಮ್ಮಾನ್, ದುಬೈ, ಬಹ್ರೇನ್, ದೋಹಾ, ದಮ್ಮಾಮ್, ಕುವೈತ್, ಕೋಪನ್‌ಹ್ಯಾಗನ್, ಬಾಗ್ದಾದ್ ಮತ್ತು ಖಾಸಬ್‌ಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ದಟ್ಟಣೆಯಿಂದಾಗಿ ಮಸ್ಕತ್‌ಗೆ ಪ್ರಯಾಣಿಸುವವರು ನಿರ್ಗಮನಕ್ಕೆ ಕನಿಷ್ಠ 12 ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಸಂಸ್ಥೆ ಸೂಚಿಸಿದೆ.

ಮಹಿಳಾ ದಿನಾಚರಣೆ ಎಫೆಕ್ಟ್: ಮೈಸೂರು ಸಿಲ್ಕ್ ಸೀರೆಗೆ ಭಾರೀ ಕ್ರೇಜ್ – ಬೆಳಗ್ಗೆ 4 ಗಂಟೆಗೇ KSIC ಮಳಿಗೆ ಮುಂದೆ ಮಹಿಳೆಯರ ಕ್ಯೂ!

ಬೆಂಗಳೂರು: ಮಹಿಳಾ ದಿನಾಚರಣೆ ಸಮೀಪಿಸುತ್ತಿದ್ದಂತೆ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಮೈಸೂರು ಸಿಲ್ಕ್ ಸೀರೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಾಣಿಸಿಕೊಂಡಿದೆ. ಬೆಂಗಳೂರಿನ ಜಯನಗರದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ (KSIC) ಮಳಿಗೆಯ ಮುಂದೆ ಮಹಿಳೆಯರು ಮುಂಜಾನೆ 4 ಗಂಟೆಯಿಂದಲೇ ಸರತಿಯ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ.

ಸಾಮಾನ್ಯವಾಗಿ ಈ ಮಳಿಗೆ ಬೆಳಗ್ಗೆ 10:30ಕ್ಕೆ ಮಾತ್ರ ಬಾಗಿಲು ತೆರೆಯುತ್ತದೆ. ಆದರೆ ಸೀರೆಗಳ ಸ್ಟಾಕ್ ಖಾಲಿಯಾಗುವ ಭಯದಿಂದ ಮಹಿಳೆಯರು ಬೆಳಗಿನ ಜಾವವೇ ಬಂದು ಕ್ಯೂನಲ್ಲಿ ನಿಂತಿದ್ದಾರೆ. ಕೇವಲ ಬೆಂಗಳೂರಿನವರಷ್ಟೇ ಅಲ್ಲದೆ ಶಿರಸಿ, ಶಿರಾ, ಚಳ್ಳಕೆರೆ ಸೇರಿದಂತೆ ನೆರೆಯ ಅನಂತಪುರದಿಂದಲೂ ಮಹಿಳೆಯರು ಮೈಸೂರು ಸಿಲ್ಕ್ ಸೀರೆ ಖರೀದಿಸಲು ಆಗಮಿಸಿದ್ದಾರೆ.

ಮಳಿಗೆಯ ಸಿಬ್ಬಂದಿ ಅಪಾರ ಸಂಖ್ಯೆಯಲ್ಲಿ ಸೇರಿರುವ ಮಹಿಳೆಯರನ್ನು ನಿಯಂತ್ರಿಸಲು ಟೋಕನ್ ವ್ಯವಸ್ಥೆ ಮಾಡಿದ್ದು, ಟೋಕನ್ ಪಡೆಯಲು ಮಹಿಳೆಯರ ನಡುವೆ ಭಾರೀ ನೂಕಾಟ ಹಾಗೂ ವಾಗ್ವಾದಗಳೂ ನಡೆಯುತ್ತಿವೆ.

ಸದ್ಯ ಮಳಿಗೆಯಲ್ಲಿ ಕೇವಲ 45 ಮೈಸೂರು ಸಿಲ್ಕ್ ಸೀರೆಗಳು ಮಾತ್ರ ಲಭ್ಯವಿದ್ದು, ಹೊರಗಡೆ 100ಕ್ಕೂ ಹೆಚ್ಚು ಮಹಿಳೆಯರು ಕಾದು ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಒಂದು ಟೋಕನ್‌ಗೆ ಒಂದು ಸೀರೆ’ ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ.

ಇಲ್ಲಿ ಮೈಸೂರು ಸಿಲ್ಕ್ ಸೀರೆಗಳು ವಾರದ ಎಲ್ಲಾ ದಿನಗಳಲ್ಲೂ ಲಭ್ಯವಿರುವುದಿಲ್ಲ. ಪ್ರತಿ ಗುರುವಾರ ಹಾಗೂ ಶನಿವಾರ ಮಾತ್ರ ವಿತರಣೆ ಮಾಡಲಾಗುತ್ತದೆ. ಸೀರೆಗಳ ಬೆಲೆ 26 ಸಾವಿರ ರೂಪಾಯಿಯಿಂದ ಆರಂಭವಾಗಿ ಸುಮಾರು 3 ಲಕ್ಷ ರೂಪಾಯಿವರೆಗೂ ಇದೆ.

ಮುಂಬರುವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ತಮಗೆ ತಾವೇ ಉಡುಗೊರೆ ನೀಡಿಕೊಳ್ಳಲು ಹಾಗೂ ತಮ್ಮ ಪ್ರೀತಿಪಾತ್ರರಿಗೆ ಕಾಣಿಕೆ ನೀಡಲು ಮಹಿಳೆಯರು ದುಬಾರಿ ಮೈಸೂರು ಸಿಲ್ಕ್ ಸೀರೆಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ಅದ್ಧೂರಿ ರಿಸೆಪ್ಷನ್: ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ನ್ಯಾಷನಲ್‌ ಕ್ರಶ್‌, ಆರತಕ್ಷತೆಯಲ್ಲಿ ಡಿಸಿಎಂ ಡಿಕೆಶಿ ಭಾಗಿ

ನ್ಯಾಷನಲ್ ಕ್ರಷ್ ಎಂದೇ ಖ್ಯಾತಿಯಾಗಿರುವ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್‌ನ ‘ರೌಡಿ ಬಾಯ್’ ವಿಜಯ್ ದೇವರಕೊಂಡ ಅವರ ಮದುವೆ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.

ಫೆಬ್ರವರಿ 26ರಂದು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ನಿನ್ನೆ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನವಜೋಡಿಯ ರಿಸೆಪ್ಷನ್ ಕಾರ್ಯಕ್ರಮವನ್ನು ಭರ್ಜರಿಯಾಗಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ನವಜೋಡಿಯ ಸಾಂಪ್ರದಾಯಿಕ ಉಡುಗೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆ ಹಾಗೂ ರಿಸೆಪ್ಷನ್‌ಗಳಲ್ಲಿ ದುಬಾರಿ ಡಿಸೈನರ್ ಉಡುಪು ಧರಿಸುವುದು ರೂಢಿ. ಆದರೆ ಈ ಜೋಡಿ ವಿಭಿನ್ನವಾಗಿ ಸಾಂಪ್ರದಾಯಿಕ ವೇಷಭೂಷಣದಲ್ಲಿ ಮಿಂಚಿದರು.

ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಧರಿಸಿ ಮಿರಮಿರನೆ ಮಿಂಚಿದರೆ, ವಿಜಯ್ ದೇವರಕೊಂಡ ಪಂಚೆ ಮತ್ತು ಶರ್ಟ್ ಧರಿಸಿ ದೇಸಿ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದರು.

ಈ ಅದ್ಧೂರಿ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದ ಗಣ್ಯರು ಮಾತ್ರವಲ್ಲದೆ ರಾಜಕೀಯ ನಾಯಕರು ಕೂಡ ಭಾಗವಹಿಸಿದ್ದರು. ವಿಶೇಷವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮದಲ್ಲಿ ಹಾಜರಾಗಿ ನವಜೋಡಿಗೆ ಶುಭಾಶಯ ಕೋರಿದರು.

ಹೋಟೆಲ್ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ಆರೋಪ: ಪಾಕ್ ಆಟಗಾರನಿಗೆ ದಂಡ

0

ಕೊಲಂಬೋ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಶ್ರೀಲಂಕಾಗೆ ಬಂದಿದ್ದ ಪಾಕಿಸ್ತಾನ ತಂಡದ ಆಟಗಾರನೊಬ್ಬ ಕ್ಯಾಂಡಿಯ ಹೋಟೆಲಿನ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಕೊನೆಯ ಸೂಪರ್–8 ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದ್ದು, ಮಹಿಳಾ ಸಿಬ್ಬಂದಿ ಸಹಾಯಕ್ಕಾಗಿ ಕೂಗಿದಾಗ ಹೋಟೆಲ್ ಸಿಬ್ಬಂದಿ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ಈ ವಿಷಯವನ್ನು ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಅವರಿಗೆ ತಿಳಿಸಿದ್ದಾರೆ.

ಕ್ಯಾಂಡಿಯ ಗೋಲ್ಡನ್ ಕ್ರೌನ್ ಹೋಟೆಲಿನ ಆಡಳಿತ ಮಂಡಳಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಆಟಗಾರನ ಪರವಾಗಿ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಕ್ಷಮೆಯಾಚಿಸಿದ್ದು, ಅನುಚಿತ ವರ್ತನೆ ತೋರಿದ ಆಟಗಾರನಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಇನ್ನು ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 5 ರನ್‌ಗಳಿಂದ ಗೆಲುವು ಸಾಧಿಸಿದ್ದರೂ, ನೆಟ್ ರನ್ ರೇಟ್ ಕಡಿಮೆ ಇದ್ದ ಕಾರಣ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ತಂಡ ಭಾನುವಾರ ಮತ್ತು ಸೋಮವಾರ ಪಾಕಿಸ್ತಾನಕ್ಕೆ ಮರಳಿದೆ.

ಘಟನೆಯ ಹಿನ್ನೆಲೆ ಈ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಸಾಧ್ಯತೆಯಿದ್ದು, ಹೆಚ್ಚಿನ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪಾಕಿಸ್ತಾನಿ ಆಟಗಾರರ ಪ್ರವಾಸದ ವೇಳೆ ಅಸಭ್ಯ ವರ್ತನೆ ಆರೋಪಗಳು ಕೇಳಿಬರುವುದು ಹೊಸದಲ್ಲ.

ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದ ವೇಳೆ ಯುವ ಬ್ಯಾಟರ್ ಹೈದರ್ ಅಲಿ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಮ್ಯಾಂಚೆಸ್ಟರ್ ಪೊಲೀಸರು ಬಂಧಿಸಿದ್ದರು. ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಇದಕ್ಕೂ ಮೊದಲು ಮಲೇಷ್ಯಾ ಪ್ರವಾಸದ ವೇಳೆ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಆರೋಪದ ಮೇಲೆ ಪಾಕಿಸ್ತಾನ ತಂಡದ ಮಸಾಜ್ ತಜ್ಞ ಮಲಾಂಗ್ ಅಲಿ ವಿರುದ್ಧವೂ ದೂರು ದಾಖಲಾಗಿದ್ದು, ಅವರಿಗೆ ದಂಡ ವಿಧಿಸಲಾಗಿತ್ತು.

ಕೆಲಸಕ್ಕೆಂದು ಹೋದ ನವವಿವಾಹಿತನ ಶವ ತೋಟದಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನಗಳ ಹುತ್ತ!

0

ತುಮಕೂರು:- ತಿಪಟೂರು ನಗರದ ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟ ಒಂದರಲ್ಲಿ ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ವ್ಯಕ್ತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಆಗಿರುವಂತಹ ಘಟನೆ ಜರುಗಿದೆ.

32 ವರ್ಷದ ಮನ್ಸೂರ್ ಕೊಲೆಯಾದ ವ್ಯಕ್ತಿ. ಇವರು ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಇದೀಗ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟುಕೊಂಡಿದೆ.

ಗುಜುರಿ ಕೆಲಸ ಮಾಡುತ್ತಿದ್ದ ಮನ್ಸೂರ್, ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದು, ಹೊಸ ಜೀವನ ಆರಂಭಿಸಿದ್ದರು. ನಿನ್ನೆ ಬೆಳಿಗ್ಗೆ ತನ್ನದೇ ಆಟೋದಲ್ಲಿ ಮನೆಯಿಂದ ಹೋದವರು ಬಳಿಕ ನಾಪತ್ತೆ ಆಗಿದ್ದಾರೆ. ಕುಟುಂಬಸ್ಥರು ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ತಿಪಟೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಆಟೋ ಹುಡುಕಾಡಿದಾಗ ಚಿಕ್ಕಕೊಟ್ಟಗಿಹಳ್ಳಿ ಬಳಿ ಪತ್ತೆ ಆಗಿದೆ. ಬಳಿಕ ಸುತ್ತಮುತ್ತ ಹುಡುಕಾಟ ಮಾಡಿದ ವೇಳೆ ಅಡಿಕೆ ತೋಟ ಒಂದರಲ್ಲಿ ಮನ್ಸೂರ್ ಶವ ಪತ್ತೆ ಆಗಿದೆ.

ಘಟನೆ ಸಂಬಂಧ ಸದ್ಯ ತಿಪಟೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದ್ದಾರೆ.

3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಹೃದಯಾಘಾತಕ್ಕೆ ಬಲಿ!

ನೆಲಮಂಗಲ:- ಮಾದನಾಯಕನಹಳ್ಳಿಯ ಅರೆಕೆತ್ತನಹಳ್ಳಿಯಲ್ಲಿ ಹೃದಯಾಘಾತದಿಂದ ನವವಿವಾಹಿತ ಸಾವನ್ನಪ್ಪಿದ ಘಟನೆ ಜರುಗಿದೆ.

ಚರಣ್ (30) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಚರಣ್ ಅವರ ಮದುವೆ ಮೂರು ತಿಂಗಳ ಹಿಂದೆ ನಡೆದಿತ್ತು. ಇಂದು ಬೆಳಗ್ಗೆ ಮನೆಯಲ್ಲಿದ್ದ ವೇಳೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಲ್ಲೇ ಅವರು ಕುಸಿದು ಬಿದ್ದಿದ್ದರು.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದನ್ನು ಧೃಢಪಡಿಸಿದ್ದರು. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲದ ಶವಗಾರಕ್ಕೆ ರವಾನೆ ಮಾಡಲಾಗಿದೆ.

ಬಿಹಾರ ರಾಜಕೀಯದಲ್ಲಿ ಬದಲಾವಣೆ? ಸಿಎಂ ಸ್ಥಾನ ತ್ಯಜಿಸಲಿರುವ ನಿತೀಶ್ ಕುಮಾರ್

ನವದೆಹಲಿ: ದೇಶದ ಹಿರಿಯ ರಾಜಕೀಯ ಮುತ್ಸದ್ಧಿಗಳಲ್ಲಿ ಒಬ್ಬರಾದ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿ ರಾಜ್ಯಸಭೆಗೆ ತೆರಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಬಿಜೆಪಿ ನಾಯಕನೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೇರಲಿದ್ದು, ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಉಪಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ.

75 ವರ್ಷದ ನಿತೀಶ್ ಕುಮಾರ್ ಅವರು 10 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ದಾಖಲೆ ಹೊಂದಿದ್ದಾರೆ. ಜಿತನ್ ರಾಮ್ ಮಾಂಝಿ ಮುಖ್ಯಮಂತ್ರಿಯಾಗಿದ್ದ ಅಲ್ಪಾವಧಿಯನ್ನು ಹೊರತುಪಡಿಸಿದರೆ, 2015ರಿಂದ ಅವರು ನಿರಂತರವಾಗಿ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಮಹಾಘಟಬಂಧನದಲ್ಲಿದ್ದ ಅವರು ಬಳಿಕ ಎನ್‌ಡಿಎ ಸೇರಿಕೊಂಡಿದ್ದರು.

2025ರ ವಿಧಾನಸಭಾ ಚುನಾವಣೆಗೆ ಮುನ್ನವೇ ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆದಿದ್ದರೂ, ಪಕ್ಷದಲ್ಲಿ ಅವರಷ್ಟೇ ವರ್ಚಸ್ಸುಳ್ಳ ನಾಯಕನಿಲ್ಲದಿರುವುದು ಹಾಗೂ ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಡಿಎ ಆತುರದ ನಿರ್ಧಾರ ಕೈಗೊಂಡಿರಲಿಲ್ಲ. 2025ರ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಿ ಒಕ್ಕೂಟ ಜಯಗಳಿಸಿದ ಬಳಿಕ ಅವರು ಮತ್ತೊಮ್ಮೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಲೋಕಸಭೆಯಲ್ಲಿ ಪ್ರಭಾವಿ ನಾಯಕರಾಗಿದ್ದ ಅವರು 1990ರಲ್ಲಿ ವಿ.ಪಿ. ಸಿಂಗ್ ಸರ್ಕಾರದಲ್ಲಿ ಕೃಷಿ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 1998ರಿಂದ 2003ರವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಭೂ ಸಾರಿಗೆ, ಕೃಷಿ ಹಾಗೂ ರೈಲ್ವೆ ಖಾತೆಗಳ ಕೇಂದ್ರ ಸಚಿವರಾಗಿದ್ದರು.

ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ ಬಳಿಕ ಅವರು ರಾಜ್ಯಸಭೆಯ ಮೂಲಕ ದೆಹಲಿ ರಾಜಕೀಯಕ್ಕೆ ಮರುಪ್ರವೇಶಿಸಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ ಅವಕಾಶ ಸಿಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹಿರಿಯ ನಾಯಕನಾದ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಆಘಾತಕಾರಿ ಘಟನೆ: ವಿಷಕಾರಿ ಮೇವು ತಿಂದು 70ಕ್ಕೂ ಹೆಚ್ಚು ಕುರಿಗಳು ಸಾವು!

ಹಾಸನ:- ಅರಸೀಕೆರೆ ತಾಲೂಕಿನ ಜಾವಗಲ್ ಬಳಿಯ ದೊಡ್ಡಘಟ್ಟ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ವಿಷಕಾರಿ ಮೇವು ತಿಂದು 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಕುರಿಗಾಹಿಗಳು 800 ಕುರಿಗಳನ್ನು ತುಮಕೂರಿನ ಶಿರಾದಿಂದ ಕರೆದುಕೊಂಡು ದೊಡ್ಡಘಟ್ಟಕ್ಕೆ ಬಂದಿದ್ದರು. ಈ ವೇಳೆ ವಿಷಕಾರಿ ಮೇವು ತಿಂದು ಕುರಿಗಳು ಸಾವನ್ನಪ್ಪಿವೆ. ಹೊಲಗಳ ತುಂಬೆಲ್ಲಾ ಕುರಿಗಳು ಸತ್ತು ಬಿದ್ದಿವೆ. ಮೆಕ್ಕೆಜೋಳದ ಚಿಗುರು ತಿಂದು ಕುರಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕುರಿಗಳು ಶಿರಾ ಮೂಲದ ರಾಜಣ್ಣ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಕುರಿಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಟಿ. ನರಸೀಪುರದಲ್ಲಿ ಕ್ರೀಡಾಂಗಣ ನಿರ್ಮಾಣ: KSIC ಮುಚ್ಚುವ ಪ್ರಶ್ನೆಯೇ ಇಲ್ಲ – ಯತೀಂದ್ರ ಸಿದ್ದರಾಮಯ್ಯ

ಟಿ. ನರಸೀಪುರ: KSIC ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಟಿ. ನರಸೀಪುರದಲ್ಲಿ ಮಾತನಾಡಿದ ಅವರು, KSIC ಅನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಕೆಲವರು KSIC ಮುಚ್ಚಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

KSIC ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಯನ್ನು ಮುಚ್ಚುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು  ತಿಳಿಸಿದ್ದಾರೆ. ಅಧಿಕಾರಿಗಳು ವಿವಿಧ ಕಡೆ ಜಾಗ ಪರಿಶೀಲನೆ ನಡೆಸಿದ ಬಳಿಕ ಈ ಸ್ಥಳವೇ ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತ ಎಂದು ತಿಳಿಸಿರುವುದರಿಂದ ಇಲ್ಲಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

KSIC ನೌಕರರು ಅಥವಾ ಇನ್ನಿತರರಿಗೆ ಯಾವುದೇ ಅನುಮಾನ ಇದ್ದರೆ ಬಂದು ಚರ್ಚೆ ನಡೆಸಬಹುದು. ಕ್ರೀಡಾಂಗಣ ನಿರ್ಮಾಣವಾದರೆ ಸ್ಥಳೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣ ನಿರ್ಮಾಣ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ಎಂದು ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ನಿಮಗೂ ಮಲಬದ್ಧತೆ ಸಮಸ್ಯೆ ಹೆಚ್ಚಾಗಿದ್ಯಾ!? ಇದರಿಂದ ಮುಕ್ತಿ ಪಡೆಯಲು ಹೀಗೆ ಮಾಡಿ!

0

ಇಂದಿನ ಜೀವನಶೈಲಿಯಲ್ಲಿ ಆಹಾರ ಪದ್ಧತಿ ಅಸಮರ್ಪಕವಾಗಿರುವುದು, ಫೈಬರ್ ಕೊರತೆ, ನೀರು ಕಡಿಮೆ ಕುಡಿಯುವುದು, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಅಸ್ಥಿರ ದಿನಚರಿ ಮಲಬದ್ಧತೆಗೆ ಪ್ರಮುಖ ಕಾರಣಗಳಾಗಿವೆ.

ದಿನವಿಡೀ ಕುಳಿತೇ ಕೆಲಸ ಮಾಡುವವರು, ಹೊರಗಿನ ಆಹಾರ ಹೆಚ್ಚು ಸೇವಿಸುವವರು ಹಾಗೂ ರಾತ್ರಿ ತಡವಾಗಿ ನಿದ್ರೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಮಲಬದ್ಧತೆಯಿಂದ ಬಳಲುವವರು ಹೊಟ್ಟೆ ಖಾಲಿಯಾಗದೆ ಇರುವುದು, ಮಲವಿಸರ್ಜನೆ ವೇಳೆ ಜೋರಾಗಿ ಒತ್ತಡ ಹಾಕಬೇಕಾಗುವುದು, ಹೊಟ್ಟೆ ಭಾರವಾಗಿರುವ ಅನುಭವ, ಗ್ಯಾಸ್ಟ್ರಿಕ್, ಉಬ್ಬರ ಮತ್ತು ಅಸಹಜತೆ ಮೊದಲಾದ ಲಕ್ಷಣಗಳನ್ನು ಕಾಣಬಹುದು. ಕೆಲವೊಮ್ಮೆ ತಲೆನೋವು, ಚಡಪಡಿಕೆ ಹಾಗೂ ಹಸಿವು ಕಡಿಮೆಯಾಗುವ ಸಮಸ್ಯೆಯೂ ಉಂಟಾಗಬಹುದು. ವಯೋವೃದ್ಧರು, ಗರ್ಭಿಣಿಯರು ಹಾಗೂ ಒತ್ತಡ ಹೆಚ್ಚಾಗಿರುವವರಲ್ಲಿ ಅಪಾಯ ಹೆಚ್ಚಾಗಿರುತ್ತದೆ.

ಮಲಬದ್ಧತೆಯನ್ನು ತಡೆಯಲು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವುದು ಮುಖ್ಯ. ಪ್ರತಿದಿನ ಹಣ್ಣು, ತರಕಾರಿ, ಧಾನ್ಯಗಳು ಮತ್ತು ಫೈಬರ್‌ ಸಮೃದ್ಧ ಆಹಾರ ಸೇವನೆ ಮಾಡಬೇಕು. ದಿನಪೂರ್ತಿ ಸಾಕಷ್ಟು ನೀರು ಕುಡಿಯುವುದು, ನಿರ್ದಿಷ್ಟ ಸಮಯದಲ್ಲಿ ಮಲವಿಸರ್ಜನೆ ಅಭ್ಯಾಸ ಮಾಡುವುದು, ಜೋರಾಗಿ ಒತ್ತಡ ಹಾಕದೆ, ಲಘು ವ್ಯಾಯಾಮ ಅಥವಾ ವಾಕಿಂಗ್ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಎಣ್ಣೆ ಹೆಚ್ಚು ಇರುವ ಆಹಾರ ಮತ್ತು ಜಂಕ್ ಫುಡ್ ಕಡಿಮೆ ಮಾಡುವುದು, ಒತ್ತಡ ಕಡಿಮೆ ಮಾಡಿಕೊಳ್ಳುವುದು ಮತ್ತು ಸರಿಯಾಗಿ ನಿದ್ರೆ ಮಾಡುವುದು ಸಹ ಮಲಬದ್ಧತೆ ತಡೆಗಟ್ಟಲು ಸಹಾಯ ಮಾಡುತ್ತದೆ.

ಮಲಬದ್ಧತೆ ಸಮಸ್ಯೆ ಎರಡು–ಮೂರು ವಾರಗಳಿಗಿಂತ ಹೆಚ್ಚು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಮಲವಿಸರ್ಜನೆ ವೇಳೆ ರಕ್ತ ಕಾಣಿಸಿಕೊಳ್ಳುವುದು, ತೀವ್ರ ಹೊಟ್ಟೆನೋವು, ಅಚಾನಕ್ ತೂಕ ಕಡಿಮೆಯಾಗುವುದು ಅಥವಾ ನಿರಂತರ ದೌರ್ಬಲ್ಯ ಕಾಣಿಸಿಕೊಳ್ಳುವುದನ್ನು ಗಂಭೀರ ಸೂಚನೆಗಳೆಂದು ಪರಿಗಣಿಸಬೇಕು. ಔಷಧಿ ಸೇವನೆಯಿಂದ ಸಮಸ್ಯೆ ನಿವಾರಣೆಯಾಗದಿದ್ದರೆ ವೈದ್ಯರ ಸಲಹೆ ತೆಗೆದುಕೊಳ್ಳುವುದು ಅಗತ್ಯ. ಸರಿಯಾದ ಪರೀಕ್ಷೆ ಮತ್ತು ತಜ್ಞರ ಮಾರ್ಗದರ್ಶನದಿಂದ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯಬಹುದು.

error: Content is protected !!