ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
‘ಬುಧವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್ನಿಂದಾಗಿ ಒಂದೇ ಕುಟುಂಬದ ಮೂವರು ಸಹೋದರರ ಮನೆಗಳು, ಕೋಟ್ಯಂತರ ರೂ, ಮೌಲ್ಯದ ಚಿನ್ನಾಭರಣ, ನಗದು ಸೇರಿದಂತೆ ಅಪಾರ ಪ್ರಮಾಣದ ದವಸ ಧಾನ್ಯಗಳು ಭಸ್ಮವಾದ ಘಟನೆ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಕ್ಕೀರಗೌಡ್ರ ಮನೆತನದ ಶಿವನಗೌಡ, ಚನ್ನಪ್ಪಗೌಡ, ಫಕ್ಕೀರಗೌಡ ಎಂಬುವವರಿಗೆ ಸೇರಿದ ತೇಗಿನ ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಶಿವನಗೌಡ ಅವರು, ತಮ್ಮ ಮಗಳ ಮದುವೆಗೆಂದು ಕೂಡಿಟ್ಟಿದ್ದ ೨ ಲಕ್ಷ ೪೦ ಸಾವಿರ ರೂ. ನಗದು, ಮೂರುವರೆ ತೊಲಿ ಬಂಗಾರ, ೫ ತೊಲಿ ಬೆಳ್ಳಿ ಹಾಗೂ ಹೆಸರು, ಜೋಳ, ಗೋಧಿ ಸೇರಿದಂತೆ ದಿನ ಬಳಕೆಯ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಅಲ್ಲದೇ, ಇದೇ ಕಾರ್ತಿಕ ಮಾಸದಲ್ಲಿ ಮಗಳ ಮದುವೆ ಮಾಡುವ ಬಗ್ಗೆ ಯೋಚಿಸಿದ್ದರು. ಬರುವ ಭಾನುವಾರವಷ್ಟೇ ಬೆಳಗಾವಿ ಜಿಲ್ಲೆಯ ಉಗರಖೋಡದ ಸಂಬಂಧಿಕರು ವಿವಾಹದ ದಿನ ನಿಶ್ಚಯಿಸಲು ಬರುವವರಿದ್ದರು, ಅಷ್ಟರಲ್ಲೇ ಇಂತಹ ದುರ್ಘಟನೆ ಸಂಭವಿಸಿದೆ.
ಮಗಳ ಮದುವೆ ತಯಾರಿ ಕುರಿತು ಮನೆಯ ಹಿತ್ತಲಿನಲ್ಲಿ ಫಕೀರಗೌಡ ಅವರೊಂದಿಗೆ ಶಿವನಗೌಡ ಚರ್ಚಿಸುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅಂದಾಜು ೩೦ ಲಕ್ಷ ರೂಪಾಯಿ ಮೌಲ್ಯದ ಮೂರು ಮನೆಗಳು ಸೇರಿದಂತೆ ಒಟ್ಟು ಒಂದು ಕೋಟಿ ರೂ,ಗಳಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿರುವ ದೇವರ ಹುಂಡಿಗೆ ಪ್ರತಿನಿತ್ಯ ಪೂಜೆ, ಪುನಸ್ಕಾರ ಮುಗಿದ ಮೇಲೆ ಹುಂಡಿಗೆ ಹಾಕಿದ್ದ ಹಣ, ಹುಂಡಿ ಸೇರಿದಂತೆ ಅಂದಾಜು ೧೧ ಲಕ್ಷ ರೂ.ಗೂ ಹೆಚ್ಚು ಮೊತ್ತದ ಪಾಲಿಸಿ ದಾಖಲೆಗಳು, ಬೆಲೆಬಾಳುವ ಪೀಠೋಪಕರಣಗಳು ಸುಟ್ಟಿದ್ದು, ದಿಕ್ಕು ತೋಚದಂತಾಗಿದೆ.
ಶಿವನಗೌಡ, ಮನೆ ಮಾಲೀಕ