ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕಿನ ಕೊಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಮೇಳದ ಅಂಗವಾಗಿ ಕೂಲಿಕಾರ್ಮಿಕರ ಮನೆ–ಮನೆಗೆ ತೆರಳಿ ಜಾಗೃತಿ ಹಾಗೂ ನೋಂದಣಿ ಅಭಿಯಾನ ನಡೆಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ನೇತೃತ್ವದಲ್ಲಿ ವಿವಿಧ ಮನೆಗಳಿಗೆ ಭೇಟಿ ನೀಡಿ, ವ್ಹಿಬಿಜಿರಾಮ್ ಜಿ ಯೋಜನೆಯಡಿ ದೊರೆಯುವ ಉದ್ಯೋಗಾವಕಾಶ ಹಾಗೂ ಸೌಲಭ್ಯಗಳ ಕುರಿತು ಕೂಲಿಕಾರ್ಮಿಕರಿಗೆ ಮಾಹಿತಿ ನೀಡಲಾಯಿತು.
ಜಾಬ್ ಕಾರ್ಡ್ ಹೊಂದಿರದ ಕುಟುಂಬಗಳನ್ನು ಗುರುತಿಸಿ, ಮನೆ–ಮನೆ ಭೇಟಿಯ ಸಂದರ್ಭದಲ್ಲೇ ಅರ್ಹ ಫಲಾನುಭವಿಗಳಿಗೆ ಶ್ರೀಧರ್ ಚಿನಗುಂಡಿ ಹೊಸ ಜಾಬ್ ಕಾರ್ಡ್ ವಿತರಿಸಿದರು. ಉದ್ಯೋಗದ ಅಗತ್ಯವಿರುವವರು ಅರ್ಜಿ ಸಲ್ಲಿಸಿದರೆ ಯೋಜನೆಯಡಿ ಕೆಲಸ ಒದಗಿಸಲಾಗುವುದು ಎಂದು ತಿಳಿಸಿದರು.
ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಅರ್ಹ ಕೂಲಿಕಾರ್ಮಿಕನಿಗೂ ಯೋಜನೆಯಡಿ ಉದ್ಯೋಗದ ಅವಕಾಶ ದೊರೆಯಲಿದೆ. ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದು ಅಗತ್ಯವಿರುವವರು ನೋಂದಾಯಿಸಿಕೊಳ್ಳಬೇಕು ಎಂದು ಶ್ರೀಧರ್ ಚಿನಗುಂಡಿ ಮನವಿ ಮಾಡಿದರು.
ವ್ಹಿಬಿಜಿರಾಮ್ ಜಿ ಯೋಜನೆಯ ಕ್ರಿಯಾಯೋಜನೆಯಲ್ಲಿ ವೈಯಕ್ತಿಕ ಫಲಾನುಭವಿಗಳಾಗಿ ಆಯ್ಕೆಯಾಗಿರುವವರು ತಕ್ಷಣ ಕಾಮಗಾರಿ ಆದೇಶ ಪಡೆದು ಕಾಮಗಾರಿ ಆರಂಭಿಸುವಂತೆ ಇಒ ಸೂಚಿಸಿದರು.
ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು, ಯೋಜನೆಯಡಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳು, ಉದ್ಯೋಗಾವಕಾಶ ಹಾಗೂ ಸೌಲಭ್ಯಗಳ ಕುರಿತು ವಿವರಿಸಿದರು. ಆ.15ರಿಂದ ಸೆ.15ರವರೆಗೆ ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ನಡೆಯುತ್ತಿದ್ದು, ಕೂಲಿಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮನೆ–ಮನೆ ಭೇಟಿ ಸಂದರ್ಭದಲ್ಲಿ ಕೊಣ್ಣೂರು ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ ಗಣಿ, ಐಇಸಿ ಸುರೇಶ್ ಬಾಳಿಕಾಯಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಿಂಗನಗೌಡರ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ವ್ಹಿಬಿಜಿರಾಮ್ ಯೋಜನೆಯ ಸಿಬ್ಬಂದಿ ಉಪಸ್ಥಿತರಿದ್ದರು.



