ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಸಮೀಪದ ಕೊಡಗಾನೂರು ಗ್ರಾಮದಲ್ಲಿನ ಶ್ರೀ ಮಾರುತಿ ದೇವಸ್ಥಾನದ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ 1,40,000 ರೂ. ದೇಣಿಗೆಯನ್ನು ನಿವೃತ್ತ ಶಿಕ್ಷಕರಾದ ನೂರಂದಪ್ಪ ಮಾಹಾಂತಪ್ಪ ಕಲ್ಯಾಣಿ ಹಾಗೂ ಅವರ ಧರ್ಮಪತ್ನಿ ಪಾರ್ವತಮ್ಮ ನೂರಂದಪ್ಪ ಕಲ್ಯಾಣಿ ಅವರು ನೀಡಿದರು.
ದೇವಸ್ಥಾನದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತಿರುವ ಕಲ್ಯಾಣಿ ದಂಪತಿ, ಈ ಬಾರಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಯಶಸ್ವಿಯಾಗಿ ನೆರವೇರಲೆಂಬ ಉದ್ದೇಶದಿಂದ ದೇಣಿಗೆ ಮೊತ್ತದ ಚೆಕ್ನ್ನು ದೇವಸ್ಥಾನ ಸಮಿತಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಯುವಕ ಮಿತ್ರರು ಭಾಗವಹಿಸಿ ದಂಪತಿಯನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಗ್ರಾಮ ಹಿರಿಯರು, ಶಿಕ್ಷಕರಾಗಿ ಹಲವು ವರ್ಷಗಳ ಕಾಲ ಸಮಾಜ ಸೇವೆ ಸಲ್ಲಿಸಿದ ನೂರಂದಪ್ಪ ಕಲ್ಯಾಣಿ ಅವರು ನಿವೃತ್ತಿಯಾದ ನಂತರವೂ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದ ಏಕತೆ, ಭಕ್ತಿಭಾವ ಮತ್ತು ಸಹಕಾರದ ಪ್ರತೀಕವಾಗಿ ಈ ದೇಣಿಗೆ ಕಾರ್ಯ ಗಮನ ಸೆಳೆದಿದ್ದು, ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಹಿರೇಮಠ, ಆರ್.ಎನ್. ಜೋಶಿ, ಬಸಯ್ಯ ಕಪ್ಲಿಮಠ, ಪ್ರಶಾಂತ ವಾಲ್ಮೀಕಿ, ನಾಗಯ್ಯ ಹಿರೇಮಠ, ಹನುಮಂತ ರಾಮಜಿ, ರಾಚಯ್ಯ ಬಾಳಿಕಾಯಿಮಠ, ಅಂದಪ್ಪ ವಾಲ್ಮೀಕಿ, ಶರಣಪ್ಪ ಹೂಗಾರ, ರಾಮಪ್ಪ ಹೂಗಾರ, ಸಂಗಪ್ಪ ಹೂಗಾರ ಸೇರಿದಂತೆ ಊರಿನ ಹಿರಿಯರು, ಯುವಕರು ಉಪಸ್ಥಿತರಿದ್ದರು.

